ಶ್ರೀರಂಗಪಟ್ಟಣ, ಅ. 23: ಕೊರೊನಾ ಮಹಾಮಾರಿಯಿಂದಾಗಿ ಈ ಬಾರಿಯ ದಸರಾ ಕಳೆಗುಂದಿದೆ. ಈ ಕಾರಣದಿಂದ ಶ್ರೀರಂಗಪಟ್ಟಣದಲ್ಲಿ ಪ್ರತಿವರ್ಷ ಅದ್ಧೂರಿಯಾಗಿ ನಡೆಸುವ ನಾಡ ದೇವತೆ ಚಾಮುಂಡೇಶ್ವರಿಯ ಉತ್ಸವವದ ಸರಳ ಆಚರಣೆ ನಡೆಯಲಿದ್ದು ಇಂದು ಸಾಂಪ್ರದಾಯಿಕವಾಗಿ ಚಾಲನೆ ನೀಡುವುದರ ಜತೆಗೆ, ಜಿಲ್ಲೆಯ 17 ಮಂದಿ ಕೊರೊನಾ ವಾರಿಯರ್ಸ್ಗಳು ತಾಯಿಗೆ ಪುಷ್ಪನಮನ ಸಲ್ಲಿಸುವ ಮೂಲಕ ಉತ್ಸವಕ್ಕೆ ಚಾಲನೆ ನೀಡಿದರು.
ವಿಶೇಷವಾಗಿ ಅಲಂಕೃತಗೊಂಡಿದ್ದ ತಾಯಿಯ ವಿಗ್ರಹ ಹೊತ್ತ ರಥಕ್ಕೆ ಪುಷ್ಪಾರ್ಚನೆ ನೆರವೇರಿಸಲಾಯಿತು. ಸ್ಥಳೀಯ ಆಯ್ದ ಜಾನಪದ ಕಲಾತಂಡಗಳು ಪೂರ್ಣಕುಂಭವದೊಂದಿಗೆ ಮೆರವಣಿಗೆಗೆ ಸಾಂಪ್ರದಾಯಿಕ ಚಾಲನೆ ನೀಡಿ ದಸರಾಗೆ ಮೆರಗು ನೀಡಿದರು.
ಆಲಯದಲ್ಲಿರುವ 5 ಅಡಿ ಎತ್ತರದ 250 ಕೆ.ಜಿ ತೂಕವಿರುವ ತಾಯಿ ಚಾಮುಂಡೇಶ್ವರಿ ಮೂರ್ತಿಯನ್ನು ಅಲಂಕರಿಸಿ ಮೆರವಣಿಗೆ ನಡೆಸಲಾಯ್ತು. ರಥಸಾಗುವ ಪಟ್ಟಣದ ರಾಜ ಬೀದಿಗಳನ್ನು ತಳಿರು ತೋರಣಗಳಿಂದ ಅಲಂಕರಿಸಲಾಗಿತ್ತು. ರಥದಲ್ಲಿ ಸಾಗುವ ಮಾತೆಯು ಕಣ್ಮನ ಸೆಳೆಯುವಂತಿದ್ದಳು. ಜಯ ಘೋಷಗಳ ನಡುವೆ ಸಾಗಿದ ರಥೋತ್ಸವಕ್ಕೆ ಕೆಲವಾರು ಮಂದಿ ಸಾಕ್ಷಿಯಾದರು.