ಬೆಂಗಳೂರು, ಅ.23: ನಾಳೆಯಿಂದ ಮೂರು ದಿನಗಳ ಕಾಲ ಸಾಲು ಸಾಲು ಸಾರ್ವತ್ರಿಕ ರಜೆಯಿರುವುದರಿಂದ ಎಲ್ಲಾ ಸರಕಾರಿ ಕಚೇರಿಗಳಲ್ಲಿ ಇಂದು ಸಡಗರ ಸಂಭ್ರಮದಿಂದ ಆಯುಧ ಪೂಜೆಯನ್ನು ಆಚರಿಸಲಾಯಿತು.
ಭಾನುವಾರ ಆಯುಧ ಪೂಜೆ, ಸೋಮವಾರ ವಿಜಯದಶಮಿ ಹಬ್ಬವಿದ್ದು, ನಾಳೆ ಈ ತಿಂಗಳ ನಾಲ್ಕನೇ ರಜಾ ದಿನವಾಗಿದೆ. ಸಾಲು ಸಾಲು ರಜೆಗಳಿರುವುದರಿಂದ ಬಹುತೇಕ ಎಲ್ಲ ಸರ್ಕಾರಿ ಕಚೇರಿಗಳಲ್ಲಿ ಇಂದೇ ಆಯುಧ ಪೂಜೆ ನೆರವೇರಿಸಲಾಯಿತು.
ಹಾಗೆಯೇ ಬೆಂಗಳೂರಿನ ವಿಧಾನಸೌಧ, ವಿಕಾಸಸೌಧ, ಬಹುಮಹಡಿಗಳ ಕಟ್ಟಡ, ಹೈಕೋರ್ಟ್, ವಿಶ್ವೇಶ್ವರಯ್ಯ ಗೋಪುರ, ಬಿಬಿಎಂಪಿ ಸೇರಿದಂತೆ ಸಂಭ್ರಮ ಸಡಗರದಿಂದ ಆಯುಧ ಪೂಜೆ ನೆರವೇರಿಸಲಾಯಿತು.
ಚಾಲಕರುಗಳು ಕೂಡ ತಮ್ಮ ವಾಹನಗಳನ್ನು ಶುಚಿಗೊಳಿಸಿ , ಅಲಂಕಾರ ಮಾಡಿ, ಕಚೇರಿ ಮುಂದೆ ನಿಲ್ಲಿಸಿ ಪೂಜೆ ಮಾಡಿದರು. ಕಚೇರಿಯಲ್ಲಿದ್ದ ಕಂಪ್ಯೂಟರ್, ಅಲ್ಮೇರಾ ಮತ್ತಿತರ ಸಲಕರಣೆಗಳಿಗೆ ಪೂಜೆ ನೆರವೇರಿಸಿ ಸಿಹಿ ಮತ್ತು ಪ್ರಸಾದ ಹಂಚಲಾಯಿತು. ಪರಸ್ಪರ ಶುಭಾಶಯಗಳನ್ನು ವಿನಿಮಯ ಮಾಡಿಕೊಂಡರು.
ಪೂಜೆಗೆ ಹಾಗೂ ಕುಂಬಳಕಾಯಿಗೆ ರಾಸಾಯನಿಕ ಮಿಶ್ರಿತ ಬಣ್ಣ ಬಳಸದಂತೆ ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆ ಎಲ್ಲಾ ಸರ್ಕಾರಿ ಕಚೇರಿಗಳಿಗೆ ಸೂಚಿಸಿತ್ತು. ಆದರೂ ಆಯುಧ ಪೂಜಾ ಸಂಭ್ರಮಕ್ಕೆ ಕೊರೊನಾ ಅಡ್ಡಿಯಾದಂತೆ ಕಂಡುಬರಲಿಲ್ಲ.