‘ಆಕ್ಟ್ 1978’ ಚಿತ್ರ ನಾಲ್ಕು ವಾರಗಳ ಯಶಸ್ವಿ ಪ್ರದರ್ಶನದ ಜೊತೆಗೆ ಐದನೇ ವಾರದತ್ತ ಕಾಲಿಟ್ಟಿದೆ. ಕೊರೊನಾ ಲಾಕ್ಡೌನ್ ಬಳಿಕ 25 ದಿನಗಳ ಪ್ರದರ್ಶನ ಕಂಡ ಚಿತ್ರವೆಂಬ ಖುಷಿಯನ್ನು ಚಿತ್ರತಂಡ ಮಾಧ್ಯಗೋಷ್ಠಿಯ ಮೂಲಕ ಹಂಚಿಕೊಂಡಿದೆ.
ದೇವರಾಜ್ ಆರ್ ನಿರ್ಮಾಣದ ಈ ಸಿನಿಮಾ ಬಿಡುಗಡೆಯ ಜವಾಬ್ದಾರಿಯನ್ನು ಕೆ ಆರ್ ಜಿ ಸ್ಟುಡಿಯೋಸ್ ವಹಿಸಿಕೊಂಡಿತ್ತು. ಈ ಯಶಸ್ವಿ ಚಿತ್ರದ ನಿರ್ದೇಶಕ ಮಂಸೋರೆ ಮಾತನಾಡಿ ”ಯಾವ ಚಿತ್ರಮಂದಿರಗಳಲ್ಲಿ ಸಿನಿಮಾ ರಿಲೀಸ್ ಮಾಡಿದರೆ ಜನ ಬರಬಹುದು ಎಂದು ಯೋಚನೆ ಮಾಡಿ ಸಿನಿಮಾ ಬಿಡುಗಡೆ ಮಾಡಿದೆವು. ಪ್ರಚಾರ ಮಾತ್ರವಲ್ಲ ಅಭಿಯಾನ ಕೂಡಾ ಆಗಬೇಕು ಆ ನಿಟ್ಟಿನಲ್ಲಿ ಕೆಲಸ ಮಾಡಿದ್ದೇವೆ. ಈ ಸಿನಿಮಾದ ಗೆಲುವಿಗೆ ನಮ್ಮ ಸಿನಿಮಾ ತಂಡದ ಪರಿಶ್ರಮವೇ ಕಾರಣ ಎನ್ನಬಹುದು” ಎಂದರು. ಚಿತ್ರದ ನಿರ್ಮಾಪಕರು ಮಾತನಾಡಿ,
“ಸಿನಿಮಾ ಕಮರ್ಷಿಯಲ್ ಆಗಿ ಗೆಲುವು ಕಾಣುತ್ತೋ ಇಲ್ಲವೋ ಗೊತ್ತಿರಲಿಲ್ಲ, ನಮ್ಮ ಸಂತೋಷಕ್ಕಾಗಿ ಸಿನಿಮಾ ಮಾಡಿದೆವು. ಸಿನಿಮಾ ನೋಡಿದ ಪಿಡಿಒ ಮಹಿಳೆಯೊಬ್ಬರು ತಮಗೆ ಆದ ಅನ್ಯಾಯವನ್ನು ಧೈರ್ಯವಾಗಿ ಹೇಳಿಕೊಂಡಿದ್ದಾರೆ. ಸಿನಿಮಾ25 ದಿನ ದಾಟಿದೆ. ನಮ್ಮಕೆಲಸ ಸಾರ್ಥಕವಾಯಿತು” ಎಂದರು. ನಟ, ನಿರ್ದೇಶಕ ಬಿ.ಸುರೇಶ್ ಅವರು “ಇಲ್ಲಿ ಅಪರೂಪದ ಕಥೆ ಇದೆ. ಎಲ್ಲರಿಗೂ ಮನಮುಟ್ಟುವ ಕತೆ ಮಾಡಲಾಗಿದೆ. ನನ್ನ ತಾಯಿಗೂ ಸಿನಿಮಾ ಇಷ್ಟವಾಯಿತು. ಅವರೂ ಅಳುತ್ತಾ ಬಂದರು. ನಮಗೆ ಸಾರ್ಥಕತೆ ಅನಿಸಿತು” ಎಂದರು. ಹಿರಿಯ ನಟ
ದತ್ತಣ್ಣನ ಪ್ರಕಾರ “ನಾನು ಎರಡನೇ ದಿನ ಸಿನಿಮಾ ನೋಡಿದೆ. ಅಷ್ಟು ಸುಲಭವಾಗಿ ನಾನು ಸಿನಿಮಾವನ್ನು ಇಷ್ಟ ಪಡೋದಿಲ್ಲ. ಆದರೆ ಈ ಸಿನಿಮಾ ತುಂಬಾ ಇಷ್ಟವಾಯಿತು. ಎಲ್ಲರಿಗೂ ಸಿನಿಮಾ ನೋಡಲಿಕ್ಕೆ ಹೇಳಿದ್ದೀನಿ, ಚಿತ್ರ ಇಷ್ಟ ಪಟ್ಟವರಿಗೆಲ್ಲ ಧನ್ಯವಾದ” ಎಂದರು.
ಬೆಂಗಳೂರಿನ ಮಲ್ಟಿಪ್ಲೆಕ್ಸ್ ಗಳಿಗೆ ಹೋಗಿ ಪ್ರೇಕ್ಷಕರ ಅಭಿಪ್ರಾಯ ತಗೊಂಡಿರುವ ಬಗ್ಗೆ ನಟ ಸಂಚಾರಿ ವಿಜಯ್ ಹೇಳಿದರು. ಕಾಡುವ ಸಿನಿಮಾ ಇದು ಎನ್ನುವುದು ಛಾಯಾಗ್ರಾಹಕ ಸತ್ಯ ಹೆಗಡೆಯವರ ಮಾತು. ಚಿತ್ರದಲ್ಲೊಂದು ಪ್ರಮುಖ ಪಾತ್ರ ನಿಭಾಯಿಸಿರುವ ಪ್ರಮೋದ್ ಶೆಟ್ಟಿ ಈ ಚಿತ್ರ 150 ಪ್ರದರ್ಶನ ಕಾಣಲಿ ಎಂದರು.