ಆಕ್ಸಿಜನ್ ಕೊರತೆಯಿಂದ ಮೃತಪಟ್ಟಿರುವುದು 28 ಮಂದಿ: ಸಿದ್ಧರಾಮಯ್ಯ ಹೇಳಿಕೆ

ಚಾಮರಾಜನಗರ, ಮೇ. 05: ಆಕ್ಸಿಜನ್ ಕೊರತೆಯಿಂದ ಜಿಲ್ಲಾ ಆಸ್ಪತ್ರೆಯಲ್ಲಿ 28 ಮಂದಿ ಮೃತಪಟ್ಟ ಹಿನ್ನೆಲೆಯಲ್ಲಿ ವಿಪಕ್ಷ ನಾಯಕ ಸಿದ್ಧರಾಮಯ್ಯ ಮತ್ತು ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ನಂತರ ಮಾತನಾಡಿದ ಅವರು, ಘಟನೆಯಲ್ಲಿ 28 ಮಂದಿ ಮೃತಪಟ್ಟಿದ್ದು, ಸಚಿವ ಸುಧಾಕರ್ 3 ಮಂದಿ ಮಾತ್ರ ಅಂತಾ ಸುಳ್ಳುಹೇಳಿದ್ದಾರೆ. ಘಟನೆಗೆ ಸಂಬಂಧಿಸಿದಂತೆ ಜಿಲ್ಲಾಸ್ಪತ್ರೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದೇವೆ. ಸಂಬಂಧಿಸಿದ ಅಧಿಕಾರಿಗಳ ಜತೆ ಚರ್ಚಿಸಿ ಮಾಹಿತಿ ಸಂಗ್ರಹ ಮಾಡಿದ್ದೇವೆ.

ನಿನ್ನೆ ಸಚಿವ ಸುಧಾಕರ್ ಸಹ ಅಧಿಕಾರಿಗಳ ಜತೆ ಸಭೆ ನಡೆಸಿದರು.  ಆದರೆ ನಿನ್ನ ಸುಧಾಕರ್ ಸುಳ್ಳು ಹೇಳಿದ್ದಾರೆ. ಚಾಮರಾಜನಗರ ಜಿಲ್ಲಾ ಸ್ಪತ್ರೆಯಲ್ಲಿ ಆಕ್ಸಿಜನ್ ಕೊರತೆಯಿಂದ 28 ರೋಗಿಗಳು ಮೃತಪಟ್ಟಿದ್ದಾರೆ.  ಆಕ್ಸಿಜನ್ ಕೊರತೆಯಿಂದ ಮೂವರು ಸಾವನ್ನಪ್ಪಿದ್ದಾರೆ ಎಂದು ನಿನ್ನೆ ಸುಧಾಕರ್ ಹೇಳಿದ್ದರು. ಸುಧಾಕರ್ ಹೇಳುವರಿವುದು ಸುಳ್ಳು ಎಂದು ಹರಿಹಾಯ್ದರು.

ಚಾಮರಾಜನಗರಕ್ಕೆ  ಪ್ರತಿನಿತ್ಯ 350 ಆಕ್ಸಿಜನ್ ಸಿಲಿಂಡರ್ ಬೇಕು. ಆದರೆ ಭಾನುವಾರ ಪೂರೈಕೆಯಾಗಿದ್ದು 126 ಸಿಲಿಂಡರ್. ಹೀಗಾಗಿ ಎಲ್ಲರಿಗೂ ಆಕ್ಸಿಜನ್ ಕೊಡಲು ಆಗಿಲ್ಲ. ಸುಮಾರು 224 ಆಕ್ಸಿಜನ್ ಸಿಲಿಂಡರ್ ಕೊರತೆ ಇತ್ತು. ಹೀಗಾಗಿ ಆಕ್ಸಿಜನ್ ಸಿಗದೆ ಮೃತಪಟ್ಟಿದ್ದಾರೆ ಎಂದು ಹೇಳಿದರು.

ಸಂಜೆಯಿಂದ ರಾತ್ರಿವರೆಗೆ 24 ರೋಗಿಗಳು ಮೃತಪಟ್ಟಿದ್ದಾರೆ ಎಂದು ಡೀನ್, ಜಿಲ್ಲಾ ಸರ್ಜನ್., ಡಿಸಿ ಒಪ್ಪಿಕೊಂಡಿದ್ದಾರೆ. ಆಕ್ಸಿಜನ್ ಪೂರೈಕೆ ಆಗಿಲ್ಲ ಎಂದು ಕೂಡ ಒಪ್ಪಿಕೊಂಡಿದ್ದಾರೆ ಎಂದು ಸಿದ್ಧರಾಮಯ್ಯ ತಿಳಿಸಿದರು.

Exit mobile version