ಜಮೀನಿಗೆ ತಗುಲಿದ್ದ ಬೆಂಕಿ ನಂದಿಸಲು ಹೋಗಿ ರೈತ ಸಾವು

ಚಾಮರಾಜನಗರ, ಫೆ. 02: ತ್ಯಾಜ್ಯಕ್ಕೆ ಹಾಕಲಾಗಿದ್ದ ಬೆಂಕಿ ಪಕ್ಕದ ಜಮೀನಿನಲ್ಲಿದ್ದ ಬೆಳೆಗೆ ಹೊತ್ತಿಕೊಳ್ಳುತ್ತಿರುವುದನ್ನು ತಪ್ಪಿಸಲು ಹೋಗಿ ರೈತರೊಬ್ಬರು ಬೆಂಕಿಗೆ ಆಹುತಿಯಾದ ಘಟನೆ ತಾಲ್ಲೂಕಿನ ಅಮಚವಾಡಿಯಲ್ಲಿ ಸೋಮವಾರ ನಡೆದಿದೆ.

ಗ್ರಾಮದ ಮಹದೇವನಾಯಕ (63) ಬೆಂಕಿ ಆಘಾತದಿಂದ ಮೃತಪಟ್ಟವರು. ಸೋಮವಾರ ಸಂಜೆ ಜಮೀನಿನ ಮೂಲೆಯಲ್ಲಿ ಹಾಕಲಾಗಿದ್ದ ಬೆಂಕಿಯು ಪಕ್ಕದ ಜಮೀನಿನಲ್ಲಿ ಬೆಳೆದಿದ್ದ ಹುರುಳಿ ಹಾಗೂ ತಮ್ಮ ಜಮೀನಿನ ಬೆಳೆಯನ್ನು ಆವರಿಸಿಕೊಳ್ಳುವುದನ್ನು ತಪ್ಪಿಸಲು ಹೋದ ವೇಳೆ ಈ ಅವಘಡ ನಡೆದಿದೆ. ರಭಸವಾದ ಬೆಂಕಿಯ ಕೆನ್ನಾಲಿಗೆಯು ಮಹದೇವನಾಯಕ ಅವರಿಗೆ ಬಡಿದಿದೆ. ಬೆಂಕಿಯ ಶಾಖದ ಆಘಾತದಿಂದ ಸ್ಥಳದಲ್ಲೇ ಕುಸಿದು ಬಿದ್ದು ಮೃತಪಟ್ಟಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ತ್ಯಾಜ್ಯಕ್ಕೆ ಹಾಕಿದ್ದ ಬೆಂಕಿಯು ಜಮೀನಿಗೆ ಆವರಿಸಿಕೊಂಡು ಬೆಳೆಯೆಲ್ಲ ನಾಶವಾಗಿದೆ. ಸಂಜೆಯಾದರೂ ಮಹದೇವನಾಯಕ ಅವರು ಮನೆಗೆ ಬಾರದ್ದನ್ನು ತಿಳಿದು ಜಮೀನಿಗೆ ಕುಟುಂಬದವರು ಹೋದಾಗ ಘಟನೆ ಬೆಳಕಿಗೆ ಬಂದಿದೆ. ಸ್ಥಳಕ್ಕೆ ಚಾಮರಾಜನಗರ ಗ್ರಾಮಾಂತರ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಪ್ರಕರಣ ದಾಖಲಿಸಿಕೊಂಡಿದ್ದಾರೆ.

Exit mobile version