ರಾಜ್ಯಾದ್ಯಂತ ಭ್ರಷ್ಟ ಅಧಿಕಾರಿಗಳಿಗೆ ಎಸಿಬಿ ಶಾಕ್: 9 ಅಧಿಕಾರಿಗಳ ಮನೆ, ಕಚೇರಿಗಳ ಮೇಲೆ ದಾಳಿ

ಬೆಂಗಳೂರು, ಜು. 15: ರಾಜ್ಯಾದ್ಯಂತ ಭ್ರಷ್ಟ ಅಧಿಕಾರಿಗಳ ವಿರುದ್ಧ ಮೆಗಾ ರೇಡ್ ನಡೆಸಿರುವ ಎಸಿಬಿ ಪೊಲೀಸರು, ಬೆಳ್ಳಂ ಬೆಳಗ್ಗೆ 9 ಅಧಿಕಾರಿಗಳ ಮನೆ,ಕಚೇರಿ, ಸಂಬಂಧಿಕರ ಮನೆಗೆ ದಾಳಿ ನಡೆಸಿದ್ದಾರೆ. ಒಟ್ಟು 40 ಕಡೆಗಳಲ್ಲಿ ಏಕಕಾಲಕ್ಕೆ ದಾಳಿ ನಡೆದಿದೆ.

ಮಂಡ್ಯ ಸಾಮಾಜಿಕ ಅರಣ್ಯ ಇಲಾಖೆ ಡಿಸಿಎಫ್‌ ಟಿ.ವೆಂಕಟೇಶ್‌ಗೆ ಬೆಳ್ಳಂಬೆಳಿಗ್ಗೆ ಎಸಿಬಿ ಶಾಕ್ ಕೊಟ್ಟಿದೆ. ಮಂಡ್ಯದ ಸುಭಾಷ್ ನಗರದಲ್ಲಿರುವ ಟಿ.ವೆಂಕಟೇಶ್‌ ಮನೆಯ ಮೇಲೆ ಮಂಡ್ಯ ಎಸಿಬಿ ಡಿವೈಎಸ್‌ಪಿ ಧರ್ಮೇಂದ್ರ ನೇತೃತ್ವದ ತಂಡ ದಾಳಿ ಮಾಡಿದೆ. ಹಾಗೂ ವಿಜಯಪುರ ಜಿಲ್ಲೆಯಲ್ಲಿಯೂ ಎಸಿಬಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ವಿಜಯಪುರ ನಗರದ ಸುಕೂನ್ ಲೇಔಟ್​ನಲ್ಲಿರುವ ಕೆಪಿಟಿಸಿಎಲ್ ಕಚೇರಿಯ ಎಇಇ ಸಿದ್ದರಾಮ ಮಲ್ಲಿಕಾರ್ಜುನ್ ಬಿರಾದಾರ ಮನೆ ಮೇಲೆ ದಾಳಿ ನಡೆಸಿದ್ದಾರೆ ಮನೆಯಲ್ಲಿರುವ ದಾಖಲೆಗಳ ಪರಿಶೀಲನೆ ನಡೆಯುತ್ತಿದೆ.

ಬೀದರ್‌ ಪಂಚಾಯತ್​ ರಾಜ್ ಇಲಾಖೆ ಜೆಇ ಸುರೇಶ್ ಮೊಹ್ರೆ ಮನೆ ಮೇಲೆ ಕೂಡ ಎಸಿಬಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಬೀದರ್ ಜಿಲ್ಲೆ ಬಸವಕಲ್ಯಾಣದ ಶಿವಾಜಿನಗರದಲ್ಲಿನ ಮನೆ, ಭಾಲ್ಕಿ ತಾಲೂಕಿನ ಮೋಹಕರ ಗ್ರಾಮದ ಮನೆ, ಜೆಇ ಸುರೇಶ್ ಮೊಹ್ರೆ ಕಚೇರಿ ಮೇಲೆ ದಾಳಿ ನಡೆಸಿ ಪರಿಶೀಲನೆ ಮಾಡುತ್ತಿದ್ದಾರೆ.

Exit mobile version