` ಆಕ್ಟ್‌ 1978’ಗೆ ಅಭೂತಪೂರ್ವ ಯಶಸ್ಸು

ಕೊರೊನ ಭಯದಿಂದ ‘ಲಾಕ್ಡೌನ್’ ಆದ ಬಳಿಕ ಚಿತ್ರಮಂದಿರ ತೆರೆದರೂ ಹೊಸ ಸಿನಿಮಾಗಳನ್ನು ಬಿಡುಗೊಳಿಸುವ ಧೈರ್ಯ ಯಾರಿಗೂ ಇರಲಿಲ್ಲ. ಆದರೆ ಇಂಥ ಸಂದರ್ಭದಲ್ಲಿ ಧೈರ್ಯದಿಂದ ತೆರೆಗೆ ತರಲಾದ ‘ಆಕ್ಟ್ 1978’ ಚಿತ್ರ ಗೆಲುವಿನ ಖುಷಿ ಕಂಡಿದೆ. ಇದನ್ನು ಸ್ವತಃ ಚಿತ್ರತಂಡ ಮಾಧ್ಯಮಗೋಷ್ಠಿಯ ಮೂಲಕ ತಿಳಿಸಿದೆ.

ಚಿತ್ರದ ನಿರ್ದೇಶಕ ಮಂಸೋರೆ ಮಾತನಾಡಿ “ಸಿನಿಮಾಗೆ ಪ್ರೇಕ್ಷಕರು, ಮಾಧ್ಯಮದವರು ಮತ್ತು ಚಿತ್ರರಂಗದ ಗಣ್ಯರು ನೀಡಿರುವ ಪ್ರೋತ್ಸಾಹದಿಂದ ಉಂಟಾಗಿರುವ ಸಂಭ್ರಮ ಒಂದೆಡೆಯಾದರೆ ಚಿತ್ರ ಯಶಸ್ವಿಯಾಗಿ ಪ್ರದರ್ಶನಗೊಳ್ಳುತ್ತಿರುವುದಕ್ಕೆ ಮತ್ತಷ್ಟು ಖುಷಿಯಾಗಿದೆ” ಎಂದರು.

ಚಿತ್ರಮಂದಿರದಲ್ಲಿ ಎಚ್ಚರಿಕೆ ವಹಿಸಿರುವ ಪ್ರೇಕ್ಷಕರು ಮತ್ತು ಪ್ರತಿ ಶೋ ಬಳಿಕ ಕೂಡ ಸ್ಯಾನಿಟೈಸ್ ಮಾಡಿ ಅಚ್ಚುಕಟ್ಟುತನ ಕಾಯ್ದುಕೊಂಡಿರುವ ಥಿಯೇಟರ್ ಮಾಲೀಕರ ಬಗ್ಗೆ ನಟ ಕೃಷ್ಣ ಹೆಬ್ಬಾಲೆ ಮೆಚ್ಚುಗೆ ವ್ಯಕ್ತಪಡಿಸಿದರು. ನಟ ಸಂಚಾರಿ ವಿಜಯ್ ಮಾತನಾಡಿ ಹಿರಿಯ ನಟ ದ್ವಾರಕೀಶ್ ಚಿತ್ರ ನೋಡಿ ಮೆಚ್ಚಿರುವುದನ್ನು ಸ್ಮರಿಸಿಕೊಂಡರು. ಚಿತ್ರದಲ್ಲಿ ನಟರಾಗಿ ಕಾಣಿಸಿರುವ ‘ಚೂರಿಕಟ್ಟೆ’ ನಿರ್ದೇಶಕ ರಾಘು ಶಿವಮೊಗ್ಗ ಅವರು ಮಾತನಾಡಿ, “ನಮ್ಮೂರು ಶಿವಮೊಗ್ಗದಲ್ಲಿ ನಾಲ್ಕು ಶೋಗಳಿದ್ದ ಪ್ರದರ್ಶನವನ್ನು ಇಂದಿನಿಂದ ಐದಕ್ಕೆ ಏರಿಸಿದ್ದಾರೆ” ಎಂದು ಸಂಭ್ರಮಿಸಿದರು.

“ಸಿನಿಮಾ ಬಗ್ಗೆ ಧೈರ್ಯ ಇದ್ದವರಿಗೆ ಸಿನಿಮಾ ಬಿಡುಗಡೆ‌ ಮಾಡುವ ಧೈರ್ಯ ಇರುತ್ತದೆ. ಬರವಣಿಗೆ ಮತ್ತು ನಿರ್ದೇಶನ ಎರಡನ್ನೂ ತೂಗಿಸಿಕೊಂಡು ಹೋಗುವಂಥ ಪ್ರತಿಭಾವಂತ ಅವರು” ಎಂದು ನಟ ಅವಿನಾಶ್ ಹೇಳಿದರು. ಚಿತ್ರಕ್ಕೆ ಸಂಭಾಷಣೆ ಬರೆದಿರುವ ದಯಾನಂದ ಟಿ.ಕೆ ಮಾತನಾಡಿ “ಈ ಚಿತ್ರ ಒಂದು ಮಸಾಲ ಎಂಟರ್ಟೇನರ್ ಅಲ್ಲ.
ಹಾಗಾಗಿ ಮೆಸೇಜ್ ಓರಿಯೆಂಟೆಡ್ ವಿಷಯವನ್ನು ಮಾಸ್‌ ಇಷ್ಟ ಪಡುವಂತೆ ಹೇಳಬೇಕಾಗಿತ್ತು. ಅದರಲ್ಲಿ ಗೆದ್ದಿದ್ದೇವೆ” ಎಂದು ಸಂತೃಪ್ತಿ ವ್ಯಕ್ತಪಡಿಸಿದರು.

ಹಿರಿಯ ನಟಿ ಶ್ರುತಿ ಮಾತನಾಡಿ “ತುಂಬ ಸಂಕಷ್ಟ ಕಾಲದಲ್ಲಿ ತೆರೆಕಾಣುತ್ತಿರುವ ಚಿತ್ರ ಎನ್ನುವ ಕಾರಣಕ್ಕೆ ಪ್ರೋತ್ಸಾಹ ಮಾಡುವ ನೀಡುವ ನಿಟ್ಟಿನಲ್ಲಿ ಚಿತ್ರದ ಪ್ರಚಾರದ ಕಾರ್ಯಕ್ರಮಗಳಲ್ಲಿ ಭಾಗವಹಿಸಬೇಕು ಎಂದುಕೊಂಡಿದ್ದೆ; ಅಂತ ಇದ್ದೆ. ಆದರೆ ಸಿನಿಮಾ ನೋಡಿದ ಮೇಲೆ ಈ ಸಿನಿಮಾ ನನ್ನ ಚಿತ್ರ ಬದುಕಿನ‌ ಎಲ್ಲ ಚಿತ್ರಗಳ ನಡುವೆ ಒಂದು ವಿಶೇಷ ಸ್ಥಾನ ಪಡೆಯುತ್ತದೆ. ಹಾಗಾಗಿ ಅನುಕಂಪದಿಂದ ಪ್ರೋತ್ಸಾಹಿಸಲು ಬಂದಿದ್ದ ನನಗೆ ಅದಕ್ಕೂ ಮೀರಿದ ಅರ್ಹತೆ ಈ ಚಿತ್ರಕ್ಕೆ ಇದೆ ಎಂದು ಅರ್ಥ ಮಾಡಿಸಿಕೊಟ್ಟಿದೆ” ಎಂದು ಸಿನಿಮಾ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.

ಕೊನೆಯಲ್ಲಿ ಮಾತನಾಡಿದ ನಿರ್ಮಾಪಕ ಆರ್ ದೇವರಾಜ್, “ನನಗೆ ಚಿತ್ರದ ಕಂಟೆಂಟ್ ಇಷ್ಟವಾಗಿತ್ತು. ಹಾಗಾಗಿ ಕೊರೊನಾ ಲಾಕ್ಡೌನ್ ಕಷ್ಟವಾದರೂ ತೋರಿಸದೇ ಮುಂದೆ ಹೋಗುತ್ತಿದ್ದೆ. ಸಿನಿಮಾವನ್ನು ಕಾರ್ಮಿಕರ ದಿನಾಚರಣೆಯ ದಿನ ಬಿಡುಗಡೆ ಮಾಡುವ ಯೋಜನೆ ಹಾಕಲಾಗಿತ್ತು. ಥಿಯೇಟರ್ ತೆರೆದ ಬಳಿಕವೂ ಮೊದಲ ಸಿನಿಮಾ ಬಿಡುಗಡೆಗೊಳಿಸುವವರು ಬೇಕಿತ್ತು. ನಾವು ಈ ಸಾಹಸಕ್ಕೆ ಇಳಿದಾಕ್ಷಣ ಎಲ್ಲರೂ ನಮ್ಮ ಜತೆಗೆ ಸೇರಿದ್ದಾರೆ. ಬೆಂಗಳೂರು, ಶಿವಮೊಗ್ಗ, ಮೈಸೂರು ಕಡೆಗಳಲ್ಲಿ ಚಿತ್ರ ಮಂದಿರದ ಸಂಖ್ಯೆ ಹೆಚ್ಚಾಗಲಿದೆ. ಆದರೆ ಬಿ,ಸಿ ಕೇಂದ್ರಗಳಲ್ಲಿ ಚಿತ್ರ ಬಿಡುಗಡೆ ಆಗಿರುವುದೇ ಗೊತ್ತಿಲ್ಲ. ಆದರೆ ಇದು ಯಾವುದೇ ಪ್ರದೇಶಕ್ಕೆ ಸಂಬಂಧಿಸಿದ ಸಿನಿಮಾವಲ್ಲ. ಚಿತ್ರ ಶೀರ್ಷಿಕೆ ಗೀತೆಯನ್ನು ರಾಜ್ಯದ 21 ಜಿಲ್ಲೆಗಳಲ್ಲಿ ಚಿತ್ರೀಕರಣ ಮಾಡಿದ್ದೇವೆ.
ಆದರೆ ಸಿನಿಮಾ ಉತ್ತರ ಕರ್ನಾಟಕಕ್ಕೆ ಇನ್ನಷ್ಟು ರೀಚ್ ಆಗಬೇಕಿದೆ” ಎಂದರು.

Exit mobile version