ಆರತಕ್ಷತೆಯಲ್ಲಿ ತಾರೆಯರೇ ಆಕರ್ಷಣೆ

ಕಳೆದ ವರ್ಷಾಂತ್ಯದಲ್ಲಿ ರಮೇಶ್ ಅರವಿಂದ್ ಅವರ ಮಗಳು ನಿಹಾರಿಕಾ ವಿವಾಹವು ಅಕ್ಷಯ್ ಜೊತೆಗೆ ನೆರವೇರಿತ್ತು. ಕೊರೊನಾ ನಿಯಮಾವಳಿಗಳ ಕಾರಣದಿಂದಾಗಿ ತೀರ ಸಣ್ಣಮಟ್ಟದಲ್ಲೇ ಮದುವೆ ಸಮಾರಂಭ ಆಯೋಜಿಸಲಾಗಿತ್ತು. ಈಗಾಗಲೇ ಕೊರೊನಾ ಬಾಯ್ ಹೇಳುತ್ತಿದೆ. ಹೊಸ ವರ್ಷದ ಎರಡನೇ ವಾರದಲ್ಲಿ ಎಲ್ಲರನ್ನೂ ಕರೆದು ಅದ್ಧೂರಿಯಾಗಿ ಆರತಕ್ಷತೆ ಕಾರ್ಯಕ್ರಮ ನಡೆಸುವುದಾಗಿ ಅಂದೇ ರಮೇಶ್ ಸೂಚಿಸಿದ್ದರು. ಇದೀಗ ಆರತಕ್ಷತೆ ಸಮಾರಂಭದ ಫೊಟೋಗಳು ಬಿಡುಗಡೆಯಾಗಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಸದ್ದು ಮಾಡಿದೆ.

ಶನಿವಾರ ಸಂಜೆ ನಗರದ ಮಹಾತ್ಮಾ ಗಾಂಧಿ ರಸ್ತೆಯ ಕಾನ್ರಾಡ್ ಹೋಟೆಲ್‌ನಲ್ಲಿ ನಡೆದ ಸಮಾರಂಭದಲ್ಲಿ ಚಿತ್ರರಂಗ ಮತ್ತು ರಾಜಕೀಯ ಕ್ಷೇತ್ರದ ಗಣ್ಯರನೇಕರು ಆಗಮಿಸಿ ನೂತನ ದಂಪತಿಗೆ ಶುಭ ಕೋರಿದರು. ಉಪ ಮುಖ್ಯಮಂತ್ರಿಗಳಾದ ಅಶ್ವಥ್ ನಾರಾಯಣ, ಶಿಕ್ಷಣ ಸಚಿವ ಸುರೇಶ್ ಕುಮಾರ್, ಆರೋಗ್ಯ ಸಚಿವ ಸುಧಾಕರ್ ಮೊದಲಾದವರಿಂದ ಹಿಡಿದು ಚಿತ್ರೋದ್ಯಮದ ಗಣ್ಯರಾದ ಕ್ರೇಜಿಸ್ಟಾರ್ ಡಾ. ರವಿಚಂದ್ರನ್, ಸೆಂಚುರಿಸ್ಟಾರ್ ಡಾ. ಶಿವರಾಜ್ ಕುಮಾರ್, ಕಿಚ್ಚ ಸುದೀಪ್, ಪುನೀತ್ ರಾಜ್ ಕುಮಾರ್, ರಾಕಿಂಗ್ ಸ್ಟಾರ್ ಯಶ್, ಲಹರಿ ವೇಲು ಮೊದಲಾದವರು ಸೇರಿದಂತೆ ದೊಡ್ಡ ಮಟ್ಟದ ತಾರಾಗಣವೇ ನೆರೆದಿತ್ತು. ಆದರೆ ರಮೇಶ್ ಅವರ ನಿರೀಕ್ಷೆಯಂತೆ ಹೆಚ್ಚು ಜನರನ್ನು ಸೇರಿಸಲು ಸಾಧ್ಯವಾಗಲಿಲ್ಲ. ಕೋವಿಡ್ ಮತ್ತೊಂದು ಹೊಸ ರೂಪದಲ್ಲಿ ಹರಡುತ್ತಿದೆ ಎನ್ನುವ ಮಾಹಿತಿ ಬಂದಿರುವ ಕಾರಣ ಇನ್ನೂರಕ್ಕಿಂತ ಅಧಿಕ ಮಂದಿ ಸೇರದಂತೆ ಎಚ್ಚರಿಕೆ ವಹಿಸಲಾಗಿತ್ತು. ಇದೀಗ ಸುದೀಪ್, ಯಶ್ ಮೊದಲಾದವರು ಸಂಗೀತ ಸಂಭ್ರಮದಲ್ಲಿ ಹಾಡಿಗೆ ಹೆಜ್ಜೆ ಹಾಕಿರುವ ದೃಶ್ಯಾವಳಿಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿರುವುದು ಕಂಡು ಬಂದಿದೆ.

Exit mobile version