ಮೈಸೂರು, ಜ. 15: ಸೂರಿ ನಿರ್ದೇಶನದ, ಅಭಿಷೇಕ್ ಅಂಬರೀಶ್ ನಟನೆಯ “ಬ್ಯಾಡ್ ಮ್ಯಾನರ್ಸ್” ಸಿನಿಮಾದ ಮುಹೂರ್ತ ಶುಕ್ರವಾರ ಮೈಸೂರಿನ ಚಾಮುಂಡಿ ಬೆಟ್ಟದಲ್ಲಿ ನೆರವೇರಿತು.
ಸಿನಿಮಾ ಚಿತ್ರೀಕರಣ ಆರಂಭವಾದ ಹಿನ್ನೆಲೆಯಲ್ಲಿ ನಟ ಅಭಿಷೇಕ್ ಅಂಬರೀಶ್ ಹಾಗೂ ನಟಿ, ಸಂಸದೆ ಸುಮಲತಾ ಅಂಬರೀಶ್ ಅವರು ಮೈಸೂರಿನ ಚಾಮುಂಡಿಬೆಟ್ಟಕ್ಕೆ ಭೇಟಿ ನೀಡಿ ತಾಯಿ ಚಾಮುಂಡೇಶ್ವರಿಗೆ ಪೂಜೆ ಸಲ್ಲಿಸಿದರು. ಈ ವೇಳೆ ನಿರ್ದೇಶಕ ಸೂರಿ ಹಾಗೂ ಇತರರು ಹಾಜರಿದ್ದರು.
ಈ ವೇಳೆ ಮಾತನಾಡಿದ ಅಭಿಷೇಕ್, ಸಿನಿಮಾಗಳು ಥಿಯೇಟರ್ನಲ್ಲೇ ರಿಲೀಸ್ ಆಗಬೇಕು. ದರ್ಶನ್ ಅವರು ಕೂಡ ಅದನ್ನೇ ಹೇಳಿದ್ದಾರೆ. ದೊಡ್ಡವರು ಹೇಳಿದ್ದಾರೆ ಎಂದ ಮೇಲೆ ಎಲ್ಲಾ ಯೋಚಿಸಿಯೇ ಹೇಳಿರುತ್ತಾರೆ. ನಿರ್ಮಾಪಕರ ಹಿತದೃಷ್ಟಿಯಿಂದ ಥಿಯೇಟರ್ನಲ್ಲಿ ಶೇ. 100ರಷ್ಟು ಮಂದಿ ಪ್ರವೇಶಕ್ಕೆ ಅವಕಾಶ ಕಲ್ಪಿಸಬೇಕು ಎಂದರು.
ಚಿತ್ರದ ಮೊದಲ ಹಂತದ ಚಿತ್ರೀಕರಣ ಮಂಡ್ಯ ಹಾಗೂ ಮೈಸೂರಿನ ಸುತ್ತಮುತ್ತಲೂ ನಡೆಯಲಿದೆ ಎಂದು ಚಿತ್ರತಂಡ ತಿಳಿಸಿದೆ.