`ಅಮೃತಮತಿ’ಗೆ ಅತ್ಯುತ್ತಮ ಚಿತ್ರ ಪ್ರಶಸ್ತಿ

ಹದಿಮೂರನೇ ಶತಮಾನದ ಕನ್ನಡ ಕವಿ ಜನ್ನನ ಯಶೋಧರ ಚರಿತೆ’ಯನ್ನು ಆಧರಿಸಿ ಮರುವ್ಯಾಖ್ಯಾನದ ಮೂಲಕ ಮರುಸೃಷ್ಟಿಸಲಾದಅಮೃತ ಮತಿ’ ಕನ್ನಡ ಚಿತ್ರಕ್ಕೆ ವಿದೇಶಿ ಅಂತರರಾಷ್ಟ್ರೀಯ ಚಿತ್ರೋತ್ಸವಗಳಲ್ಲಿ ಅಪಾರ ಮನ್ನಣೆ ಸಿಗುತ್ತಿದೆ. ಇಲ್ಲಿಯವರೆಗೆ ಹತ್ತು ಅಂತರರಾಷ್ಟ್ರೀಯ ಚಿತ್ರೋತ್ಸವಗಳಿಗೆ
ಆಯ್ಕೆಯಾಗಿದೆ. ಇತ್ತೀಚೆಗೆ ಜರುಗಿದ ಲಾಸ್ ಏಂಜಲೀಸ್ ಸನ್ ಅಂತರರಾಷ್ಟ್ರೀಯ ಚಿತ್ರೋತ್ಸವ’ದ ಸ್ಪರ್ಧಾವಿಭಾಗಕ್ಕೆ ಆಯ್ಕೆಯಾಗಿದ್ದ,ಅಮೃತಮತಿ’ ಚಿತ್ರವು ಅತ್ಯುತ್ತಮ ಚಿತ್ರವೆಂಬ ಪ್ರಶಸ್ತಿಗೆ ಭಾಜನವಾಗಿದೆ.

ಸಿನಿಮಾದ ಚಿತ್ರಕತೆ ರಚನೆಗಾಗಿ ನಿರ್ದೇಶಕ ಬರಗೂರು ರಾಮಚಂದ್ರಪ್ಪ ವೈಯಕ್ತಿಕ ಪ್ರಶಸ್ತಿಗೆ ಪಾತ್ರರಾಗಿದ್ದಾರೆ. ಈ ಹಿಂದೆ ಅಟ್ಲಾಂಟ ಅಂತರಾಷ್ಟ್ರೀಯ ಚಿತ್ರೋತ್ಸವದಲ್ಲಿ ಅಮೃತಮತಿ’ಗೆ ಅತ್ಯುತ್ತಮ ವಿದೇಶಿ ಭಾಷಾ ಚಿತ್ರ ಪ್ರಶಸ್ತಿ ಲಭ್ಯವಾಗಿತ್ತು. ನಾಯಕಿ ಪಾತ್ರದ ಹರಿಪ್ರಿಯ ಅವರು ಎರಡು ಚಿತ್ರೋತ್ಸವಗಳಲ್ಲಿ ಅತ್ಯುತ್ತಮನಟಿ’ ಪ್ರಶಸ್ತಿ ಪಡೆದಿದ್ದರು.

“ನಾನು ನಿರ್ದೇಶಿಸಿದ ಕೆಲವು ಚಿತ್ರಗಳು ಉತ್ತಮ ಚಿತ್ರ ಪ್ರಶಸ್ತಿ ಪಡೆದಿವೆ. ನನಗೆ ನಿರ್ದೇಶನಕ್ಕಾಗಿ ನೀಡುವ ರಾಜ್ಯದ ಉನ್ನತ ಮನ್ನಣೆಯಾದ `ಪುಟ್ಟಣ್ಣ ಕಣಗಾಲ್’ ಪ್ರಶಸ್ತಿ ಬಂದಿದೆ. ನಾನು ರಚಿಸಿದ ಕತೆ, ಗೀತೆ,
ಸಂಭಾಷಣೆಗಳಿಗೂ ಪ್ರಶಸ್ತಿಗಳು ಲಭ್ಯವಾಗಿವೆ. ಆದರೆ ಇಲ್ಲಿಯ ವರೆಗೆ ನಾನು ರಚಿಸಿದ ಚಿತ್ರಕತೆಗೆ (ಸ್ಕ್ರಿಪ್ಟ್) ಒಂದೂ ಪ್ರಶಸ್ತಿ ಬಂದಿರಲಿಲ್ಲ. ಲಾಸ್ ಏಂಜಲೀಸ್ ಅಂತರರಾಷ್ಟ್ರೀಯ ಚಿತ್ರೋತ್ಸವದಲ್ಲಿ ಮೊಟ್ಟಮೊದಲಬಾರಿಗೆ ಚಿತ್ರಕತೆಗಾಗಿ ನನಗೆ ಪ್ರಶಸ್ತಿ ಬಂದಿರುವುದು ತುಂಬಾ ಸಂತೋಷತಂದಿದೆ. ಇದನ್ನು ನಮ್ಮ ಚಿತ್ರತಂಡಕ್ಕೆ
ಅರ್ಪಿಸುತ್ತೇನೆ. ಈ ಮೂಲಕ ಇಡೀ ಚಿತ್ರತಂಡದ ಸಹಕಾರವನ್ನು ಗೌರವಿಸುತ್ತೇನೆ.” – ಇದು ನನ್ನ ಪ್ರತಿಕ್ರಿಯೆ ಎಂದಿದ್ದಾರೆ ಬರಗೂರು
ರಾಮಚಂದ್ರಪ್ಪ.

ಅಮೃತಮತಿ’ ಚಿತ್ರವು ಇಂಚರ ಪುಟ್ಟಣ್ಣ ಪ್ರೊಡಕ್ಷನ್ ಸಂಸ್ಥೆಯ ಪುಟ್ಟಣ್ಣನವರಿಂದ ನಿರ್ಮಾಣಗೊಂಡಿದೆ. ಹರಿಪ್ರಿಯ, ಕಿಶೋರ್, ತಿಲಕ್, ಸುಂದರರಾಜ್, ಪ್ರಮೀಳಾ ಜೋಷಾಯ್, ಸುಪ್ರಿಯಾರಾವ್, ಅಂಬರೀಷ್ ಸಾರಂಗಿ, ವತ್ಸಲಾ ಮೋಹನ್ ಮುಂತಾದವರು ಅಭಿನಯಿಸಿದ್ದಾರೆ. ಈ ಚಿತ್ರಕ್ಕೆ ನಾಗರಾಜ್ ಆದವಾನಿ ಛಾಯಾಗ್ರಹಣ, ಸುರೇಶ್ ಅರಸು ಸಂಕಲನ, ಶಮಿತಾ ಮಲ್ನಾಡ್ ಸಂಗೀತ ನಿರ್ದೇಶನ, ತ್ರಿಭುವನ್ ನೃತ್ಯ ಸಂಯೋಜನೆಗಳಿವೆ. ಮುಂಬೈನ ಸಂಸ್ಥೆಯೊಂದು ಪ್ರದರ್ಶನದ ಹಕ್ಕುಗಳನ್ನು ಪಡೆದಿದ್ದು ಕೊರೋನ ಕಡಿಮೆಯಾದ ಮೇಲೆ ಅಮೃತಮತಿ’ ಚಿತ್ರವು ರಾಜ್ಯಾದ್ಯಂತ ಬಿಡುಗಡೆಯಾಗಲಿದೆ ಎಂದು ಬರಗೂರು ಅವರು ತಿಳಿಸಿದ್ದಾರೆ.

Exit mobile version