ನವದೆಹಲಿ, ಮೇ. 03: ಪಶ್ಚಿಮ ಬಂಗಾಳದಲ್ಲಿ ತೃಣಮೂಲ ಕಾಂಗ್ರೆಸ್ ಮತ್ತೊಮ್ಮೆ ಭರ್ಜರಿ ಗೆಲುವು ಸಾಧಿಸಿದ್ದು, ಹ್ಯಾಟ್ರಿಕ್ ಜಯದೊಂದಿಗೆ ಇನ್ನೊಂದು ಅವಧಿಗೆ ಅಧಿಕಾರದ ಚುಕ್ಕಾಣಿ ಹಿಡಿಯಲು ಸಜ್ಜಾಗಿದೆ. 294 ಕ್ಷೇತ್ರಗಳ ಪೈಕಿ ಮಮತಾ ಬ್ಯಾನರ್ಜಿ ನೇತೃತ್ವದ ತೃಣಮೂಲ ಕಾಂಗ್ರೆಸ್ 216 ಸ್ಥಾನಗಳಲ್ಲಿ ಗೆಲುವು ಸಾಧಿಸಿದ್ದು, ಅವರಿಗೆ ಅಭಿನಂದನೆ ಸಲ್ಲಿಸಿ ಪ್ರಧಾನಿ ನರೇಂದ್ರ ಮೋದಿ ಟ್ವೀಟ್ ಮಾಡಿದ್ದಾರೆ.
ಪಶ್ಚಿಮ ಬಂಗಾಳದಲ್ಲಿ ಗೆಲುವು ಸಾಧಿಸಿರುವ ಮಮತಾ ದೀದಿಗೆ ಅಭಿನಂದನೆಗಳು. ಬಂಗಾಳಕ್ಕೆ ಕೇಂದ್ರ ಸರ್ಕಾರ ಎಲ್ಲ ರೀತಿಯ ಬೆಂಬಲ ನೀಡಲಿದ್ದು, ಕೋವಿಡ್ ವಿರುದ್ಧದ ಹೋರಾಟದಲ್ಲಿ ನಾವು ನಿಮ್ಮೊಂದಿಗಿದ್ದೇವೆ ಎಂದಿದ್ದಾರೆ. ಇದರ ಜೊತೆಗೆ ನಮ್ಮ ಪಕ್ಷವನ್ನ ಆಶೀರ್ವದಿಸಿದ ಪಶ್ಚಿಮ ಬಂಗಾಳದ ನನ್ನ ಸಹೋದರ, ಸಹೋದರಿಯರಿಗೆ ಧನ್ಯವಾದ ಅರ್ಪಿಸುತ್ತೇನೆ.
ಬಿಜೆಪಿ ಈ ಸಲ ಗಮನಾರ್ಹ ಯಶಸ್ಸು ಕಂಡಿದ್ದು, ಬಿಜೆಪಿ ಜನರ ಸೇವೆ ಸಲ್ಲಿಸುತ್ತಲೇ ಇರುತ್ತದೆ. ಮತದಾರರ ಉತ್ಸಾಹ ಭರಿತ ಪ್ರಯತ್ನ ಹಾಗೂ ಪ್ರತಿ ಕಾರ್ಯಕರ್ತರಿಗೆ ನನ್ನ ಅಭಿನಂದನೆ ಎಂದಿದ್ದಾರೆ. ಇದರ ಜತೆಗೆ ಕೇರಳದಲ್ಲಿ ಗೆಲುವು ಸಾಧಿಸಿರುವ ಪಿಣರಾಯಿ ವಿಜಯನ್ ಹಾಗೂ ತಮಿಳುನಾಡಿನಲ್ಲಿನ ಡಿಎಂಕೆ ಹಾಗೂ ಎಐಎಡಿಎಂಕೆ ಪಕ್ಷಗಳಿಗೂ ಪ್ರಧಾನಿ ಮೋದಿ ಅಭಿನಂದನೆ ಸಲ್ಲಿಸಿ ಟ್ವೀಟ್ ಮಾಡಿದ್ದಾರೆ.