Tiruvanthapuram: ಲೋಕಸಭಾ ಚುನಾವಣೆಯಲ್ಲಿ ಇದೇ ಮೊದಲ ಬಾರಿಗೆ ಬಿಜೆಪಿ ಕೇರಳ (Kerala)ದಲ್ಲಿ ತನ್ನ ಖಾತೆ ತೆರೆದಿದೆ. ಇದುವರೆಗೂ ಕೇರಳದಲ್ಲಿ ಆಟಕ್ಕುಂಟು ಲೆಕ್ಕಕ್ಕಿಲ್ಲ ಎಂಬಂತದ್ದ ಬಿಜೆಪಿ ಈ ಬಾರಿ ಉತ್ತಮ ಸಾಧನೆ ಮಾಡಿದೆ.
ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ (Loksabha Election) ಕೇರಳದಲ್ಲಿ ಕನಿಷ್ಠ 3 ಸ್ಥಾನಗಳನ್ನು ಗೆಲ್ಲಲು ಕೇಸರಿ ಪಡೆ ಭಾರೀ ಪ್ರಯತ್ನ ನಡೆಸಿತ್ತು. ಆದರೆ ಅಂತಿಮವಾಗಿ ಮತ ಗಳಿಕೆಯನ್ನು ಹೆಚ್ಚಿಸಿಕೊಂಡು, ಒಂದು ಸ್ಥಾನದಲ್ಲಿ ಗೆಲ್ಲಲು ಯಶಸ್ವಿಯಾಗಿದೆ. ತ್ರಿಶೂರ್ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಸುರೇಶ್ ಗೋಪಿ (Suresh Gopi) ಭರ್ಜರಿ ಜಯ ಸಾಧಿಸಿದ್ದಾರೆ. ಈ ಮೂಲಕ ರಾಜ್ಯದಲ್ಲಿ ಕೇಸರಿ ಪಡೆ ಚಿಗುರೊಡೆಯಲು ಬಿಡಬಾರದು ಎಂಬ ಕಾಂಗ್ರೆಸ್ ಹಾಗೂ ಮಿತ್ರ ಪಕ್ಷಗಳ ಶತಪ್ರಯತ್ನಗಳೂ ವಿಫಲವಾಗಿವೆ. ತ್ರಿಶೂರ್ ಲೋಕಸಭಾ ಕ್ಷೇತ್ರದಲ್ಲಿ ಬಿಜೆಪಿ (BJP) ಅಭ್ಯರ್ಥಿ ಸುರೇಶ್ ಗೋಪಿ ಅವರು 4,12,338 ಮತಗಳನ್ನು ಪಡೆದರೆ, ಸಿಪಿಎಂನ ವಿಎಸ್ ಸುನಿಲ್ ಕುಮಾರ್ ಅವರು 3,37,652 ಮತಗಳನ್ನು ಪಡೆದಿದ್ದಾರೆ.
ಇನ್ನು ಈ ಹಿಂದಿನಿಂದಲೂಈ ಕೇರಳದ ತಿರುವನಂತಪುರ (Tiruvanthapura), ತ್ರಿಶ್ಶೂರ್ ಮತ್ತು ಆಟ್ಟುಂಗಲ್ ರಾಷ್ಟ್ರೀಯ ಸ್ವಯಂಸೇವಕ ಸಂಘದ ಪ್ರಬಲ ಕಾರ್ಯಕ್ಷೇತ್ರವಾಗಿದ್ದರೂ, ರಾಜಕೀಯವಾಗಿ ಹಿಡಿತ ಸಾಧಿಸಲು ಬಿಜೆಪಿಗೆ ಇಲ್ಲಿ ಸಾಧ್ಯವಾಗಿಲ್ಲ. ಆದರೆ ಈ ಬಾರಿ ನಟ ಸುರೇಶ್ ಗೋಪಿ ಸ್ಪರ್ಧಿಸಿದ್ದು ಕ್ಷೇತ್ರದ ಚಿತ್ರಣವನ್ನೇ ಬದಲಾಯಿಸಿತು.
ತಿರುವನಂತಪುರ, ಆಟ್ಟಿಂಗಲ್ ನಲ್ಲಿ ತೀವ್ರ ಸ್ಪರ್ಧೆ :
ತಿರುವನಂತಪುರ, ಆಟ್ಟಿಂಗಲ್ ಲೋಕಸಭಾ ಕ್ಷೇತ್ರಗಳಲ್ಲಿ ಇಂಡಿ ಮೈತ್ರಿಕೂಟದ ಅಭ್ಯರ್ಥಿಗಳಿಗೆ ತೀವ್ರ ಸ್ಪರ್ಧೆಯೊಡ್ಡಲು ಬಿಜೆಪಿಗೆ ಸಾಧ್ಯವಾಗಿದೆ. ಆಟ್ಟುಂಗಲ್ ಲೋಕಸಭಾ ಕ್ಷೇತ್ರದಲ್ಲಿ ಬಿಜೆಪಿಯ ವಿ ಮುರಳೀಧರನ್ (V Muralidharan) ಅವರು 3,11,779 ಮತಗಳನ್ನು ಗಳಿಸಿರುವುದು ಬಿಜೆಪಿಗೆ ಹೊಸ ಶಕ್ತಿ ನೀಡುವ ಅಂಶವಾಗಿದೆ.
ಬಿಜೆಪಿ ಮತಗಳಿಕೆಯಲ್ಲಿ ಹೆಚ್ಚಳ :
ಬಿಜೆಪಿ ಗೆದ್ದದ್ದು 1 ಸ್ಥಾನವಾದರೂ, ಶೇಕಡಾವಾರು ಮತ ಹೆಚ್ಚಳಗೊಂಡಿದೆ. ಈ ಬಾರಿ ಬಿಜೆಪಿಗೆ ಶೇ.19.4ರಷ್ಟು ಮತ ಸಿಕ್ಕಿದೆ. 2014ರ ಲೋಕಸಭಾ ಚುನಾವಣೆಯಲ್ಲಿ ಶೇ10. 82ರಷ್ಟು ಮತ್ತು 2019ರ ಲೋಕಸಭಾ ಚುನಾವಣೆಯಲ್ಲಿ ಶೇ.15.64ಕ್ಕೆ ಮತಗಳನ್ನು ಬಿಜೆಪಿ ಪಡೆದುಕೊಂಡಿತ್ತು. ಕೇರಳದ 20 ಲೋಕಸಭಾ ಕ್ಷೇತ್ರಗಳ ಪೈಕಿ ಕಾಂಗ್ರೆಸ್ (Congress) 14, ಮುಸ್ಲಿಂ ಲೀಗ್ 2, ಸಿಪಿಐಎಂ 1, ಬಿಜೆಪಿ 1, ಕೇರಳ ಕಾಂಗ್ರೆಸ್ 1, ಆರ್ಎಸ್ಪಿ 1 ಕ್ಷೇತ್ರಗಳಲ್ಲಿ ಗೆಲುವು ಸಾಧಿಸಿವೆ.