New Delhi: ಹಿಂದೂಗಳು ಎನಿಸಿಕೊಂಡವರ ಕೆಲಸವೇ ಹಿಂಸೆ ಹರಡುವುದು ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ (Rahul Gandhi) ನೀಡಿರುವ ಹೇಳಿಕೆ ಇದೀಗ ದೇಶಾದ್ಯಂತ ತೀವ್ರ ಚರ್ಚೆಗೆ ಗ್ರಾಸವಾಗಿದೆ. ಈ ಮಧ್ಯೆ ರಾಹುಲ್ ಗಾಂಧಿ ಅವರ ಪರವಾಗಿ ವಿಡಿಯೋ ಪೋಸ್ಟ್ ಮಾಡಿ ಸಿಎಂ ಸಿದ್ದರಾಮಯ್ಯ (Siddaramaiah) ನವರು ಟ್ವೀಟ್ ಮಾಡಿದ್ದಾರೆ.
![Rahul Gandhi](https://sp-ao.shortpixel.ai/client/to_webp,q_glossy,ret_img,w_686,h_385/https://vijayatimes.com/wp-content/uploads/2024/07/449514946_984908563672692_234314429707827547_n.jpg)
‘ಭಯಪಡಬೇಡಿ, ಭಯಗೊಳಿಸಬೇಡಿ’ ಎಂದು ಹಿಂದೂ, ಮುಸ್ಲಿಂ, ಕ್ರಿಶ್ಚಿಯನ್, ಸಿಖ್ (Hindu, Muslim, Christian, Sikh) ಸೇರಿದಂತೆ ಎಲ್ಲ ಧರ್ಮಗಳು ಸಾರಿ ಹೇಳಿವೆ. ಆದರೆ ಬಿಜೆಪಿಯಲ್ಲಿ ಹಿಂದುಗಳೆಂದು ಹೇಳಿಕೊಳ್ಳುವವರ ಕೆಲಸವೇ ಹಿಂಸೆ, ಭಯ ಮತ್ತು ಸುಳ್ಳು ಹರಡುವುದು….” ಹೀಗೆಂದು ವಿರೋಧಪಕ್ಷದ ನಾಯಕರಾದ ರಾಹುಲ್ ಗಾಂಧಿಯವರು ಹೇಳಿದರೆ ಬಿಜೆಪಿ ನಾಯಕರೇಕೆ ಉರಿದು ಬೀಳಬೇಕು? ಮೋದಿ ಅವರಿಗೆ, ಆರ್.ಎಸ್.ಎಸ್ ನವರಿಗೆ, ಬಿಜೆಪಿಯವರಿಗೆ ಗುರಿಯಾಗಿಸಿ ಹೇಳಿದರೆ ಅದು ಇಡೀ ಹಿಂದೂ ಧರ್ಮಕ್ಕೆ ಹೇಳಿದಂತಾಗುತ್ತದೆಯೇ?
ಇಂದು ಸಂಸತ್ತಿನಲ್ಲಿ ಕೇಂದ್ರ ಸರ್ಕಾರದ ವಿರುದ್ಧ ನಮ್ಮ ನಾಯಕರಾದ ರಾಹುಲ್ ಗಾಂಧಿ ಅವರು ಎತ್ತಿರುವ ಪ್ರಶ್ನೆಗಳಿಗೆ ಉತ್ತರಿಸಲಾಗದ ಬಿಜೆಪಿ (BJP), ತನಗೆ ಹೇಳಿದ ಮಾತನ್ನು ಹಿಂದೂ ಧರ್ಮಕ್ಕೆ ಹೇಳಿದ್ದಾರೆ ಎಂದು ತಿರುಚಿ ತನ್ನ ವೈಫಲ್ಯ ಮರೆಮಾಚಿಕೊಳ್ಳುವ ಪ್ರಯತ್ನ ಮಾಡುತ್ತಿದೆ. ವಾಟ್ಸ್ ಆಪ್ (WhatsApp)ನಲ್ಲಿ ಬಿಜೆಪಿ ಕೃಪಾಪೋಷಿತ ಫೇಕ್ ನ್ಯೂಸ್ ಶೂರರು ಹರಿಬಿಟ್ಟಿರುವ ಅರ್ಧಂಬರ್ಧ ವಿಡಿಯೋ ನೋಡಿ ಅದನ್ನು ಇತರರಿಗೂ ಶೇರ್ ಮಾಡದಿರಿ. ಸತ್ಯ ಏನೆಂಬುದನ್ನು ಒಳಗೊಂಡ ಪೂರ್ತಿ ವಿಡಿಯೋ ಇಲ್ಲಿದೆ ಎಂದು ವಿಡಿಯೋ ಪೋಸ್ಟ್ ಮಾಡಿದ್ದಾರೆ.
![](https://sp-ao.shortpixel.ai/client/to_webp,q_glossy,ret_img,w_1024,h_538/https://vijayatimes.com/wp-content/uploads/2023/09/deccanherald_import_sites_dh_files_articleimages_2023_05_15_bjp-flag-dh-file-photo-1218881-1684130275-1024x538.webp)
ಸಿಎಂ ಸಿದ್ದುಗೆ ನೆಟ್ಟಿಗರಿಂದ ಕ್ಲಾಸ್: ಸಿಎಂ ಸಿದ್ದರಾಮಯ್ಯನವರು ಪೋಸ್ಟ್ ಮಾಡಿರುವ ವಿಡಿಯೋಗೆ ಅನೇಕರು ಪ್ರತಿಕ್ರಿಯಿಸಿದ್ದು, ಸಿಎಂ ಸಿದ್ದರಾಮಯ್ಯನವರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. “ರಾಹುಲ್ ಹೇಳಿದ್ದು ಯಾರು ಹಿಂದೂ ಎಂದು ಹೇಳಿಕೊಳ್ಳುತ್ತಾರೊ ಅವರು ಹಿಂಸೆ ದ್ವೇಷ ಎಂದು. ರಾಹುಲ್ ಎಲ್ಲಿಯೂ ಬಿಜೆಪಿಯವರು ಎಂದು ಹೇಳಿಲ್ಲ. ತಾವು ಹಂಚಿಕೊಂಡಿರುವ ವೀಡಿಯೊ ಮತ್ತೊಮ್ಮೆ ನೋಡಿ ಯಾರು ಸುಳ್ಳು ಹರಡುತ್ತಿದ್ದಾರೆ ಎಂದು ತಿಳಿಯುತ್ತದೆ.”
“ಸಿದ್ದರಾಮಯ್ಯನವರೇ ಬಹಳ ಬುದ್ಧಿವಂತಿಕೆಯಿಂದ ನಿಮ್ಮ ಮತ್ತು ಕಾಂಗ್ರೆಸ್ (Congress)ನ ಹಿಂದೂವಿರೋಧಿ ನೀತಿಯನ್ನು ರಾಹುಲ್ ಗಾಂಧಿಯ ಹೆಸರಲ್ಲಿ ವಿವರಿಸಿದ್ದೀರಿ. ರಾಜಕೀಯ ಲಾಭಕ್ಕಾಗಿ ಇಷ್ಟೋಂದು ಕೀಳು ಮಟ್ಟಕ್ಕೆ ಇಳಿದಿದ್ದೀರಿ. ಹಿಂದೂಗಳು ಹಿಂಸೆ, ಭಯ ಮತ್ತು ಸುಳ್ಳು ಹರಡುವವರೇ?” “ಮುಖ್ಯಮಂತ್ರಿಗಳು ಸ್ಥಿಮಿತ ಕಳೆದುಕೊಂಡ ಮಾತನಾಡಬಾರದು. ಶಿವನ ಕೈಯಲ್ಲಿನ ತ್ರಿಶೂಲ ಹಿಂಸೆಯ ಪ್ರತೀಕ ಎಂದನಲ್ಲ ಅದರ ಬಗ್ಗೆ ಹೇಳಿ? ಅವನು ಏನು ಹೇಳಿದರೂ ಜೈ ಎನ್ನುವ ನಿಮ್ಮ ಹುಂಬತನಕ್ಕೆ ನಾಚಿಕೆಯಾಗಬೇಕು. ಹಿಂದೂ ಸಮಾಜದ ವಿರುದ್ಧ ಸದಾ ವಿಷಕಕ್ಕುವ ಆ ಮೂರ್ಖ ವಿಪಕ್ಷ ನಾಯಕನಾಗಲು ಅಲ್ಲ ಕನಿಷ್ಠ ಸಂಸದನಾಗಿರುವುದಕ್ಕೂ ಅಯ್ಯೋಗ್ಯ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.