Bengaluru: ಕ್ಷೇತ್ರದ ಅಭಿವೃದ್ಧಿ ಕಾರ್ಯಗಳಿಗೆ ಸರ್ಕಾರದಿಂದ ಅನುದಾನ ಸಿಗುತ್ತಿಲ್ಲ ರಾಜ್ಯ ಸರ್ಕಾರದ ವಿರುದ್ದವೇ ವಿಜಯಪುರ (Vijayapura) ಜಿಲ್ಲೆಯ ಮುದ್ದೇಬಿಹಾಳ ಕ್ಷೇತ್ರದ ಕಾಂಗ್ರೆಸ್ ಶಾಸಕ ಸಿ ಎಸ್ ನಾಡಗೌಡ ನೇರವಾಗಿ ಅಸಮಾಧಾನ ಹೊರಹಾಕುವ ಮೂಲಕ ಬಂಡಾಯದ ಬಾವುಟ ಹಾರಿಸುವ ಸೂಚನೆ ನೀಡಿದ್ದಾರೆ.
![Congress](https://sp-ao.shortpixel.ai/client/to_webp,q_glossy,ret_img,w_885,h_505/https://vijayatimes.com/wp-content/uploads/2024/03/congress82.webp)
ಮುದ್ದೇಬಿಹಾಳ (Muddebihala) ಪಟ್ಟಣದಲ್ಲಿ ಮಾಧ್ಯಮಗಳ ಜೊತೆ ಮಾತನಾಡಿರುವ ಅವರು, ಕ್ಷೇತ್ರದ ಅಭಿವೃದ್ಧಿ ಕಾರ್ಯಗಳಿಗೆ ಸರ್ಕಾರದಿಂದ ಯಾವುದೇ ಅನುದಾನ ಸಿಗುತ್ತಿಲ್ಲ. ಸರ್ಕಾರ ಮುಖ್ಯವಾಗಿ ಹಿಂದುಳಿದ ಕ್ಷೇತ್ರಗಳ ಅಭಿವೃದ್ಧಿ ಮಾಡಬೇಕು. ಆದರೆ ಕೆಲವೇ ವಿಧಾನಸಭಾ ಕ್ಷೇತ್ರಗಳಿಗೆ ಮಾತ್ರ ಸರ್ಕಾರ ಅನುದಾನ ನೀಡುತ್ತಿದೆ. ನಮ್ಮ ಕ್ಷೇತ್ರದ ಅಭಿವೃದ್ಧಿ ಕಾರ್ಯಗಳಿಗೆ ಅನುದಾನ ಸಿಗದೇ ಇದ್ದರೆ ನಾನು ರಾಜಕೀಯ ತ್ಯಾಗಕ್ಕೂ ಸಿದ್ದನಾಗಿದ್ದೇನೆ ಎಂದು ಸರ್ಕಾರಕ್ಕೆ ನೇರ ಎಚ್ಚರಿಕೆ ನೀಡಿದ್ದಾರೆ.
ರಾಜ್ಯ ಸರ್ಕಾರ ಸಮರ್ಪಕವಾಗಿ ಕರ್ನಾಟಕ (Karnataka) ರಾಜ್ಯದ ಎಲ್ಲ ಕ್ಷೇತ್ರಗಳ ಅಭಿವೃದ್ಧಿ ಮಾಡಬೇಕು. ಎಲ್ಲ ಕ್ಷೇತ್ರಗಳಿಗೂ ಅನುದಾನ ಒದಗಿಸಬೇಕು. ಕೇವಲ ಮುದ್ದೇಬಿಹಾಳ ಕ್ಷೇತ್ರ ಮಾತ್ರವಲ್ಲ. ರಾಜ್ಯದ ಎಲ್ಲಾ ಹಿಂದುಳಿದ ಕ್ಷೇತ್ರಗಳಿಗೆ ಸಮರ್ಪಕವಾಗಿ ಅನುದಾನ ನೀಡಬೇಕು. ಅಭಿವೃದ್ದಿ ಕಾರ್ಯಗಳಿಗೆ ಹಣ ಸಿಗದಿದ್ದರೆ ರಾಜಕಾರಣ ಮಾಡುವ ಇಚ್ಛೆ ನನಗೆ ಇಲ್ಲವೆಂದ ಸಿ ಎಸ್ ನಾಡಗೌಡ (C.S Nadagowda) ಸ್ಪಷ್ಟಪಡಿಸಿದ್ದಾರೆ.
ರಾಜ್ಯ ಸರ್ಕಾರ ಕೂಡಲೇ ಹಿಂದುಳಿದ ಕ್ಷೇತ್ರಗಳ ಅಭಿವೃದ್ದಿಯಲ್ಲಿ ಆಗಿರುವ ತಾರತಮ್ಯ ಸರಿಪಡಿಸಬೇಕು. ಕೇವಲ ದೊಡ್ಡ ಕೆಲಸಗಳಿಗೆ ಮಾತ್ರ ಹಣ ಒದಗಿಸಿ, ಉಳಿದ ಕ್ಷೇತ್ರಗಳನ್ನು ನಿರ್ಲಕ್ಷ್ಯ ಮಾಡಬಾರದು. ಅಭಿವೃದ್ಧಿಯಿಂದ ಕ್ಷೇತ್ರದ ಜನರನ್ನು ವಂಚಿತರಾಗಿ ಮಾಡಿ, ರಾಜಕೀಯ ಮಾಡುವ ಇಚ್ಛೆ ನನಗಿಲ್ಲ. ಎಂದು ಹೇಳುವ ಮೂಲಕ ಪರೋಕ್ಷವಾಗಿ ತಮ್ಮದೇ ಸರ್ಕಾರದ ವಿರುದ್ದ ಸಮರ ಸಾರಿದ್ದಾರೆ.