ಕಾಂಗ್ರೆಸ್ ಮುಖಂಡ ದಿನೇಶ್ ಗುಂಡೂರಾವ್ ತಾಯಿ ವರಲಕ್ಷ್ಮಿ ಗುಂಡೂರಾವ್ ನಿಧನ

ಬೆಂಗಳೂರು, ಜ. 06: ಮಾಜಿ ಮುಖ್ಯಮಂತ್ರಿ ದಿ. ಗುಂಡೂರಾವ್ ಅವರ ಪತ್ನಿ ಹಾಗೂ ಕಾಂಗ್ರೆಸ್ ಮುಖಂಡ ದಿನೇಶ್ ಗುಂಡೂರಾವ್ ಅವರ ತಾಯಿ ವರಲಕ್ಷ್ಮಿ ಗುಂಡೂರಾವ್ ಅವರು ಮಂಗಳವಾರ ರಾತ್ರಿ ನಿಧನರಾಗಿದ್ದಾರೆ.

ಕೋವಿಡ್ ಸಂಬಂಧಿ ಸಮಸ್ಯೆಗಳಿಂದ ಅವರು ಮೃತಪಟ್ಟಿದ್ದಾರೆ ಎನ್ನಲಾಗಿದೆ. ವರಲಕ್ಷ್ಮಿ ಗುಂಡೂರಾವ್ ಅವರು ಮೂವರು ಪುತ್ರರಾದ ದಿನೇಶ್ ಗುಂಡೂರಾವ್, ಮಹೇಶ್ ಗುಂಡೂರಾವ್ ಮತ್ತು ರಾಜೇಶ್ ಗುಂಡೂರಾವ್ ಅವರನ್ನು ಅಗಲಿದ್ದಾರೆ. ಅವರ ಅಂತ್ಯಕ್ರಿಯೆ ದೇವನಹಳ್ಳಿಯ ತೋಟದಲ್ಲಿ ಬುಧವಾರ ನಡೆಯಲಿದೆ ಎಂದು ಕುಟುಂಬದ ಮೂಲಗಳು ತಿಳಿಸಿವೆ.

ದಿ. ಗುಂಡೂರಾವ್ ಅವರು 1993ರ ಆಗಸ್ಟ್‌ನಲ್ಲಿ ರಕ್ತ ಕ್ಯಾನ್ಸರ್‌ನಿಂದ ನಿಧನರಾಗಿದ್ದರು. ಅವರ ನಿಧನದ ನಂತರ 1996ರಲ್ಲಿ ವರಲಕ್ಷ್ಮಿ ಗುಂಡೂರಾವ್ ಕೂಡ ರಾಜಕೀಯಕ್ಕೆ ಇಳಿದಿದ್ದರು. ಬೆಂಗಳೂರು ದಕ್ಷಿಣ ಲೋಕಸಭೆ ಕ್ಷೇತ್ರದಿಂದ ಅವರು ಸಂಸತ್ ಚುನಾವಣೆಯಲ್ಲಿ ಸ್ಪರ್ಧಿಸಿದ್ದರು. ಆದರೆ ಬಿಜೆಪಿಯ ಅನಂತಕುಮಾರ್ ಎದುರು ಸೋಲು ಅನುಭವಿಸಿದ್ದರು.

ಇನ್ನು, ಗುಂಡೂರಾವ್ ಅವರ ಪತ್ನಿ ವರಲಕ್ಷ್ಮಿ ಅವರ ನಿಧನಕ್ಕೆ ಹಲವು ರಾಜಕೀಯ ನಾಯಕರು, ಸಂತಾಪ ಸೂಚಿಸಿದ್ದಾರೆ.

Exit mobile version