ಕಾಂಗ್ರೆಸ್ ಪಕ್ಷಕ್ಕೆ ವ್ಯಾಲ್ಯೂ ಇಲ್ಲ: ಎಚ್ಡಿಕೆ ಲೇವಡಿ

ಕೋಲಾರ, ಡಿ. 09: ಕಾಂಗ್ರೆಸ್ ಪಕ್ಷಕ್ಕೆ ವ್ಯಾಲ್ಯೂ ಇಲ್ಲ, ಹೀಗಾಗಿ ಕಾಂಗ್ರೆಸ್ ಶಾಲು ಬಿಟ್ಟು ಹಸಿರು ಶಾಲು ಹಾಕಿಕೊಂಡು ಪ್ರತಿಭಟನೆಗೆ ಬಂದಿದ್ದಾರೆ ಎಂದು ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ ಲೇವಡಿ ಮಾಡಿದ್ದಾರೆ.

ಕೃಷಿ ತಿದ್ದುಪಡಿ ಕಾಯ್ದೆ ವಿರೋಧಿಸಿ ನಿನ್ನೆ ರೈತರು ನಡೆಸಿದ ಪ್ರತಿಭಟನೆಯಲ್ಲಿ ಕಾಂಗ್ರೆಸ್ ಪಾಲ್ಗೊಂಡಿದ್ದ ಬಗ್ಗೆ ಮಾತನಾಡಿದ ಅವರು, ರೈತರಿಗೆ ಜೆಡಿಎಸ್ ಯಾವುದೇ ದ್ರೋಹ ಮಾಡುವುದಿಲ್ಲ. ನಾನು ಸಿಎಂ ಆಗಿದ್ದಾಗ 25 ಸಾವಿರ ಕೋಟಿ ಸಾಲ ಮನ್ನಾ ಮಾಡಿದ್ದೆ. ಆಗ ಯಾವ ರೈತ ಮುಖಂಡರು ಅನುಕೂಲವಾಗಿದೆ ಎಂದು ಹೇಳಲಿಲ್ಲ. ಭೂ ಸುಧಾರಣಾ ಕಾಯ್ದೆಯಲ್ಲಿ ಕೆಲ ಮಾರಕ ಅಂಶಗಳನ್ನ ತೆಗೆಯಲಾಗಿದೆ. ಭೂಸುಧಾರಣಾ ಕಾಯ್ದೆ ಬಗ್ಗೆ ರೈತಮುಖಂಡರು ಅದನ್ನು ತಿಳಿದುಕೊಳ್ಳಲಿ ಎಂದು ಸಲಹೆ ನೀಡಿದರು.

ಮಿತಿಗಳು, ಭಿನ್ನಮತಗಳ ನಡುವೆಯೂ ರೈತರ 25 ಸಾವಿರ ಕೋಟಿಗೂ ಮಿಗಿಲಾದ ಸಾಲ ಮನ್ನಾ ಮಾಡಿದ್ದು ಇದೇ ಕುಮಾರಸ್ವಾಮಿಯೇ ಹೊರತು ಬೇರಾರೂ ಅಲ್ಲ. ಆಗ ನನ್ನನ್ನು ಯಾರೊಬ್ಬರೂ ಬೆನ್ನುತಟ್ಟಲಿಲ್ಲ, ರೈತರಿಗೆ ನೀಡಿದ ವಚನ ಪಾಲಿಸಿ, ಅಧಿಕಾರದಿಂದ ಹೊರ ನಡೆದಾಗ ನನ್ನ ಬೆಂಬಲಕ್ಕೆ ಯಾರೂ ಬರಲಿಲ್ಲ. ಈಗ ಸುಧಾರಣೆ ಕ್ರಮಗಳನ್ನು ಸಾಧಿಸಿದಾಗಲೂ ನಾನು ಏಕಾಂಗಿ ಎಂದು ಟ್ವೀಟ್ ಮಾಡಿದ್ದಾರೆ.

ನನ್ನನ್ನು ಟೀಕೆ ಮಾಡುತ್ತಿರುವ ಮನಸ್ಸುಗಳು ಒಮ್ಮೆ ನನ್ನ ರೈತ ಪರ ನಿಲುವುಗಳನ್ನು ಪರಾಮರ್ಶೆ ಮಾಡಲಿ, ಈ ವರೆಗಿನ ನನ್ನ ರೈತ ಪರ ಕಾರ್ಯಕ್ರಮಗಳನ್ನು ಅವಲೋಕಿಸಲಿ. ರೈತ ಕುಟುಂಬದಿಂದ ಬಂದ, ಮಣ್ಣಿನಿಂದ ಮೇಲೆದ್ದ ದೇವೇಗೌಡರ ಹಾದಿಯಲ್ಲಿ ನಡೆಯುತ್ತಿರುವ ನಾನು ಮತ್ತು ಜೆಡಿಎಸ್ ಈ ಮಣ್ಣಿಗೆ, ಮಣ್ಣಿನ ಮಕ್ಕಳಿಗೆ ಎಂದೂ ದ್ರೋಹ ಮಾಡುವುದಿಲ್ಲ ಎಂದು ಹೇಳಿದ್ದಾರೆ.

Exit mobile version