ಕೋವಿಡ್-19: ನಕಲಿ ನೆಗೆಟಿವ್‌ ರಿಪೋರ್ಟ್ ತಯಾರಿಸಿ ಕೊಡುತ್ತಿದ್ದ ಪತ್ರಕರ್ತ ಅಂದರ್

ಕೊಡಗು, ಮೇ. 25: ಕೊರೊನಾ ಮಹಾಮಾರಿ ರಣಕೇಕೆ ಹಾಕುತ್ತಿರುವ ಸಂದರ್ಭದಲ್ಲಿ ಸಮಾಜದ ಒಳಿತಿಗಾಗಿ ಕೆಲಸ ಮಾಡಬೇಕಿದ್ದ ಪತ್ರಕರ್ತನೊಬ್ಬ, ಕೊರೊನಾ ನಕಲಿ ನೆಗೆಟಿವ್‌ ವರದಿ ತಯಾರಿಸಿ ಮಾರಾಟ ಮಾಡಿ ಪೊಲೀಸರ ಅತಿಥಿಯಾಗಿದ್ದಾನೆ.

ಕರ್ನಾಟಕದಿಂದ ಕೇರಳಕ್ಕೆ ಹೋಗುವವರಿಗೆ ಕೊರೊನಾ ನೆಗಟಿವ್ ರಿಪೋರ್ಟ್ ಕಡ್ಡಾಯವಾಗಿದೆ. ಇದನ್ನೇ ಅಸ್ತ್ರವಾಗಿಸಿಕೊಂಡ ವೀರಾಜಪೇಟೆ ತಾಳಳೂಕು ಸಿದ್ಧಾಪುರದಲ್ಲಿ ರಾಜ್ಯಮಟ್ಟದ ಪತ್ರಿಕೆಯ ವರದಿಗಾರ ಅಬ್ದುಲ್ ಅಜೀಜ್, ಕೇರಳಕ್ಕೆ ಹೋಗುವವರಿಗೆ ತನ್ನ ಸ್ಟುಡಿಯೋದಲ್ಲೇ ನಕಲಿ ನೆಗಟಿವ್ ರಿಪೋರ್ಟ್ ಕೊಡುತ್ತಿದ್ದ.

ಆದರೆ ಕೊಡಗಿನಿಂದ ಕೇರಳಕ್ಕೆ ತೆರಳುವ ವಾಹನಗಳನ್ನು ಗಡಿಯಲ್ಲಿ ತಪಾಸಣೆ ಮಾಡುವಾಗ ಚೆಕ್‌ ಪೋಸ್ಟ್‌ ನಲ್ಲಿ ನಕಲಿ ನೆಗೆಟಿವ್‌ ಸರ್ಟಿಫಿಕೇಟ್‌ ಪತ್ತೆಯಾಗಿತ್ತು. ಇದನ್ನು ಗಂಭೀರವಾಗಿ ಪರಿಗಣಿಸಿದ ಪೋಲೀಸರು ತನಿಖೆ ನಡೆಸಿದಾಗ ನೆಗೆಟಿವ್‌ ರಿಪೋರ್ಟ್‌ ತಯಾರಕೆಯ ಬಗ್ಗೆ ಮಾಹಿತಿ ಕಲೆಹಾಕಿದ್ದರು. ಈ ಹಿನ್ನೆಲೆಯಲ್ಲಿ ಈ ಬಗ್ಗೆ‌ ಮಾಹಿತಿ ಪಡೆದು ದಾಳಿ ನಡೆಸಿದ ಮಡಿಕೇರಿ ಸರ್ಕಲ್ ಇನ್ಸ್ಪೆಕ್ಟರ್ ಅನೂಪ್ ಮಾದಪ್ಪ ಮತ್ತು ಸಿಬ್ಬಂದಿ, ಈತನನ್ನು ಬಂಧಿಸಿದ್ದಾರೆ. ಈತನ ವಿರುದ್ದ ಕುಟ್ಟ ಪೋಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ

Exit mobile version