ಮುಗ್ಧ `ಚಾರ್ಲಿ’ಯ ನಿಷ್ಕಲ್ಮಶ ಪ್ರೀತಿಗೆ ಕಣ್ಣೀರಿಟ್ಟ ಸಿನಿಪ್ರಿಯರು!

Charlie 777

ನಮ್ಮ ಕನ್ನಡ ಚಿತ್ರರಂಗ(Sandalwood) ಈಗ ಹಲವು ಕಥಾಹಂದರಗಳ ಆಗರ. ಒಂದೊಂದು ಸಿನಿಮಾವೂ ಮನರಂಜನೆಯೊಟ್ಟಿಗೆ, ಸಂದೇಶ ಸಾರುವ ಹತ್ತು ಹಲವು ವಿಚಾರಗಳನ್ನು ಹೊತ್ತು ತರುತ್ತಿವೆ ಎಂಬುದರಲ್ಲಿ ಅನುಮಾನವೇ ಇಲ್ಲ!

ಕನ್ನಡ ಭಾಷೆಯ(Kannada Language) ಸಿನಿಮಾಗಳು ಅನ್ಯ ಭಾಷೆಯ ಸಿನಿಮಾಗಳಿಗೆ ಸರಿ ಸಮವಾ? ಅವರೊಟ್ಟಿಗೆ ಪೈಪೋಟಿ ನೀಡಲು ಸಾಧ್ಯವಾ? ಎಂಬ ಕೆಲವರ ಕೊಂಕು ಹೇಳಿಕೆಗಳಿಗೆ ನಮ್ಮ ಕನ್ನಡ ಚಿತ್ರರಂಗದ ಸಿನಿಮಾಗಳು ಈಗಾಗಲೇ ಉತ್ತರವೂ ನೀಡಿದೆ!

ಆ ಹೇಳಿಕೆಯನ್ನು ಸಮರ್ಥಿಸಿಕೊಳ್ಳುವ ಕೆಲಸ ಕನ್ನಡ ಸಿನಿಮಾಗಳು ಮಾಡದೇ, ತಮ್ಮ ಕೆಲಸವನ್ನು ಶ್ರದ್ಧೆಯಿಂದ, ಜನರ ಮನಕ್ಕೆ ತಲುಪಿಸುವ ಕೆಲಸವನ್ನು ಮಾಡಿವೆ, ಮಾಡುತ್ತಲ್ಲಿವೆ ಎಂಬುದು ನಮಗೆ ಹೆಮ್ಮೆಯ ಸಂಗತಿ!

ಸದ್ಯ ಇದೇ ಸಾಲಿನಲ್ಲಿ ಕನ್ನಡ ಚಿತ್ರರಂಗದ ಸಿಂಪಲ್ ಸ್ಟಾರ್(Simple Star) ಎಂದೇ ಖ್ಯಾತಿಗಳಿಸಿರುವ ನಟ ರಕ್ಷಿತ್ ಶೆಟ್ಟಿ(Rakshit Shetty) ಅವರ 777 ಚಾರ್ಲಿ(777 Charlie) ಕೂಡ ಸಿನಿಪ್ರೇಕ್ಷಕರ ಮನಗೆಲ್ಲುವಲ್ಲಿ ಯಶಸ್ವಿಯಾಗಿದೆ. ಇಂದು ಜೂನ್ 10 ರಂದು ದೇಶಾದ್ಯಂತ ಏಕಕಾಲಕ್ಕೆ ಐದು ಬಾಷೆಯಲ್ಲಿ ಬಿಡುಗಡೆಯಾಗಿರುವ ರಕ್ಷಿತ್ ಶೆಟ್ಟಿ ನಟಿಸಿ, ನಿರ್ಮಿಸಿರುವ ಚಾರ್ಲಿ 777 ಸಿನಿಮಾ ಹೇಗಿದೆ? ಯಾವ ಅಂಶ ಸಿನಿಪ್ರೇಕ್ಷಕರ ಮನ ತಲುಪಿತು? ಚಾರ್ಲಿ ಮತ್ತು ಧರ್ಮನ ಪಯಣವೇನು? ಪ್ರೇಕ್ಷಕ ಯಾಕೆ ಈ ಸಿನಿಮಾ ವೀಕ್ಷಿಸಬೇಕು? ಈ ಎಲ್ಲಾ ಪ್ರಶ್ನೆಗಳಿಗೆ ಇಂದಿನ ನನ್ನ ವಿಮರ್ಶೆ(Critic) ನಿಮಗೆ ಉತ್ತರ ನೀಡಲಿದೆ. ಚಾರ್ಲಿಯ ಹೆಜ್ಜೆಯನ್ನು ಹಿಂಬಾಲಿಸಲು ಹಾಗೇ ಮುಂದೆ ಓದುತ್ತ ಹೋಗಿ…..

777 ಚಾರ್ಲಿ ಸಿನಿಮಾ ವಿಶಿಷ್ಟ, ವಿಶೇಷ, ಅಶ್ಚರ್ಯ, ಕುತೂಹಲ, ಕೌತುಕಗಳಿಂದ ಕೂಡಿರಲು ಪ್ರಮುಖ ಕಾರಣವೇ ಮೂಖ ಪ್ರಾಣಿ ಶ್ವಾನ(Dog)! ಅದು ಕೇವಲ ಶ್ವಾನವಲ್ಲ, ಬದಲಾಗಿ ಎಲ್ಲರ ಪ್ರೀತಿಯ, ಮುಗ್ದ ಮೌನದ ಚಾರ್ಲಿ. ಪ್ರತಿಯೊಂದು ಸಿನಿಮಾದಲ್ಲಿ ನಾಯಕ-ನಾಯಕಿ ಅಥವಾ ಸಹ ಕಲಾವಿದರು ಗಮನ ಸೆಳೆದರೆ, ಚಾರ್ಲಿಯಲ್ಲಿ ರಕ್ಷಿತ್ ಶೆಟ್ಟಿಗಿಂತಲೂ ಚಾರ್ಲಿಯೇ ಎಲ್ಲರ ಗಮನವನ್ನು ತನ್ನತ್ತ ಸೆಳೆದಿದ್ದಾಳೆ. ಈ ಸಿನಿಮಾವನ್ನು ವಿಶೇಷವಾಗಿ ಚಿತ್ರಿಸಿ, ಕಥಾಹಂದರ ರೂಪಿಸಿ, ಭಾವನಾತ್ಮಕವಾಗಿ(Emotionally Narrated) ಕಥೆಯನ್ನು ಕಟ್ಟಿಕೊಟ್ಟಿರುವ ನಿರ್ದೇಶಕ ಕಿರಣ್ ರಾಜ್(Kiranraj K) ಅವರ ಶ್ರಮಕ್ಕೆ ಮೊದಲ ವಿಶೇಷ ಮೆಚ್ಚುಗೆ.

ಒಂದು ಮೂಖ ಪ್ರಾಣಿಯಿಂದ ನಟನೆ ಮಾಡಿಸಿ, ಭಾವನೆಗಳನ್ನು ಮನಸ್ಸಿಗೆ ನೇರವಾಗಿ ನಾಟುವಂತೆ ಮಾಡಿದ್ದಾರೆ. ಚಿತ್ರದಲ್ಲಿ ಚಾರ್ಲಿಯ ಒಂದೊಂದು ಕ್ಷಣಗಳು ಕೂಡ ಪ್ರೇಕ್ಷಕನ ಕಣ್ಣಿಗೆ ಕಲರವ, ಅವಳ ಹೆಜ್ಜೆ, ತುಂಟಾಟ ಪ್ರೇಕ್ಷಕನನ್ನು ಹಿಡಿದಿಟ್ಟುಕೊಳ್ಳುವಲ್ಲಿ ಯಶಸ್ವಿ! ಧರ್ಮ ಮತ್ತು ಚಾರ್ಲಿಯ ಪಯಣ, ಸ್ನೇಹ ನಿಜಕ್ಕೂ ಊಹೆಗೂ ಮೀರಿದ್ದು, "ಕಲಿಯುಗದಲ್ಲಿ ಧರ್ಮನ ಕಥೆ" ಚಾರ್ಲಿಯ ಜೊತೆ ಎಂಬುದು ನಿಶ್ಚಿತ. ನಟ ರಕ್ಷಿತ್ ಶೆಟ್ಟಿ ಅವರ ಅಭಿನಯ ಅನ್ನುವುದಕ್ಕಿಂತ ಅವರ ಕೆಲಸ, ಪೂರ್ವಸಿದ್ಧತೆ, ಸಿನಿಮಾದ ಒಲವು ಜೊತೆಯಲ್ಲಿ ಗೆಲುವು ನಿಜಕ್ಕೂ ಪ್ರೇರಣಯೇ. 

ರಕ್ಷಿತ್ ಶೆಟ್ಟಿ ಅವರು ಮಾತನಾಡಿ ಹೇಳುವುದಕ್ಕಿಂತ ಅವರ ಕೆಲಸಗಳು ಹೆಚ್ಚು ಮಾತನಾಡುತ್ತವೇ ಎಂಬುದಕ್ಕೆ ಚಾರ್ಲಿ ಸಿನಿಮಾ ಕೂಡ ಸಾಕ್ಷಿ! ಸದಾ ಶ್ರದ್ಧೆಯಿಂದ, ಅಚ್ಚುಕಟ್ಟಾಗಿ ಸಿನಿಮಾವನ್ನು ಪ್ರೇಕ್ಷಕರಿಗೆ ಕಟ್ಟಿಕೊಡುವ ರಕ್ಷಿತ್ ಅವರ ಧ್ಯೇಯ, ಪರಿಶ್ರಮ ಜನರಿಗೆ ತಲುಪುತ್ತಿದೆ. ಇನ್ನು ರಕ್ಷಿತ್ ಅವರ ತಂಡದ ಕಿಲಾಡಿ ನಟ ರಾಜ್ ಬಿ ಶೆಟ್ಟಿ(Raj B Shetty) ಅವರ ನಟನೆ ಕೂಡ ಎಲ್ಲರ ಗಮನ ಸೆಳೆಯುವುದಂತೂ ಖಚಿತ, ಜೊತೆಯಲ್ಲಿ ನಗುವಿನ ಕಚಗುಳಿ ಕೂಡ ಉಚಿತ. ಚಾರ್ಲಿಗೆ ರಾಜ್ ಬಿ ಶೆಟ್ಟಿ ಬರೆದ ಸಂಭಾಷಣೆಗಳು(Dialogues) ಪ್ರೇಕ್ಷಕನನ್ನು ಚಿತ್ರದ ಕೊನೆಯ ಹಂತದವರೆಗೂ ಕರೆದೊಯ್ಯುತ್ತದೆ.

ನಾಯಕಿ ಪಾತ್ರದಲ್ಲಿ ಕಾಣಿಸಿಕೊಂಡ ನಟಿ ಸಂಗೀತ ಶೃಂಗೇರಿ(Sangeetha Sringeri) ಅವರ ಅಭಿನಯ ಸರಳವಾಗಿಯೇ ಎಲ್ಲರಿಗೂ ಇಷ್ಟವಾಗುತ್ತದೆ. ಸಿನಿಮಾದ ಮೊದಲರ್ಧದಿಂದ ಬಾಲ ನಟಿ ಶರ್ವರಿಯ(Sharvari) ಮುದ್ದು ನಟನೆ ಕೊನೆಯ ಹಂತದವರೆಗೂ ಪ್ರೇಕ್ಷಕನ ಮನ ಸೆಳೆಯುತ್ತದೆ. ಸಿನಿಮಾದ ಪ್ರತಿಯೊಂದು ಹಾಡುಗಳು ಕೂಡ ಚಾರ್ಲಿಯನ್ನು ವಿಶೇಷವಾಗಿ ಚಿತ್ರಿಸಿದೆ. ಚಾರ್ಲಿ-ಧರ್ಮನ ಕಚ್ಚಾಟ, ನೋವು-ನಲಿವು, ಪ್ರೀತಿ, ಮೌನ, ಖುಷಿ ಎಲ್ಲಾ ಭಾವನೆಗಳು ಕೇವಲ 2 ಗಂಟೆ 40 ನಿಮಿಷಗಳ ಅವಧಿಯಲ್ಲಿ, ಪ್ರೇಕ್ಷಕನಿಗೆ ಮಂದಹಾಸ ಮೂಡಿಸಿ ಕಣ್ಣಂಚಲಿ ನೀರು ಮೂಡಿಸುವಲ್ಲಿ ಯಶಸ್ವಿಯಾಗಿದೆ.

ಮೂಖ ಪ್ರಾಣಿಯ ಮೌನದ ಸಂಭಾಷಣೆಗೆ ಕಣ್ಣೀರಿನ ಅಭಿಪ್ರಾಯ ವ್ಯಕ್ತಪಡಿಸಿದ ಪ್ರೇಕ್ಷಕರು, ಧರ್ಮನ ಜೀವನಕ್ಕೆ ಅರ್ಥವೇ ಚಾರ್ಲಿ ಎಂದು ಹೇಳಿದರು. ಮೂಖ ಪ್ರಾಣಿಯಾದ ಚಾರ್ಲಿ ಮಾತನಾಡುವ ಮನುಷ್ಯರನ್ನೇ ಮೂಕವಿಸ್ಮಿತರನ್ನಾಗಿ ಮಾಡಿದಳು. ಮೌನದಲ್ಲೇ ಭಾವನಾತ್ಮಕವಾಗಿ ಸೆಳೆದ ಚಾರ್ಲಿಗೆ ಸಿನಿಪ್ರೇಕ್ಷಕರು ಕುಳಿತ ಜಾಗದಿಂದ ಎದ್ದು ನಿಂತು ಚಪ್ಪಾಳೆ, ಶಿಳ್ಳೆ ಹೊಡೆಯುವ ಮುಖೇನ ರಕ್ಷಿತ್ ಶೆಟ್ಟಿ, ಚಾರ್ಲಿ, ಕಿರಣ್ ರಾಜ್ ಹಾಗೂ ತಂಡದ ಪರಿಶ್ರಮಕ್ಕೆ ಈ ಮುಖೇನ ಗೌರವ ಸೂಚಿಸಿದ್ದಾರೆ.

ಒಟ್ಟಾರೆ “ಮಾತನಾಡುವ ಮನುಷ್ಯರಿಗಿಂತ ಮೂಖ ಪ್ರಾಣಿಯೇ ಲೇಸು ಎಂಬುದಕ್ಕೆ ಚಾರ್ಲಿ ಅದ್ಬುತ ಸಾಕ್ಷಿ”! ಜೀವನದ ಅವಿಭಾಜ್ಯ ಭಾಗವನ್ನು ಬಿಳ್ಕೊಡುವ ಸಮಯ ಸಮೀಪಿಸಿದಾಗ ಉಂಟಾಗುವ ನೋವು ಹೇಳಲಾಗದ, ಅನುಭವಿಸಲಾಗದ ಸಂಗತಿ. ಈ ಎಲ್ಲಾ ಅನುಭವವನ್ನು ನೀಡುವುದೇ ಚಾರ್ಲಿ. ಪ್ರಾಣಿ ಪ್ರಿಯರಿಗೆ ಈ ಸಿನಿಮಾ ಹೇಳಿ ಮಾಡಿಸಿದ್ದು, ಚಿತ್ರದ ಅಂತ್ಯದಲ್ಲಿ ಸಿನಿಪ್ರೇಕ್ಷಕರಿಗೆ ಒಂದೊಳ್ಳೆ ಸಂದೇಶ ತಲುಪಲಿದೆ!
ಕನ್ನಡಿಗರಲ್ಲಿ ಮನವಿ : “ಕನ್ನಡ ಸಿನಿಮಾಗಳನ್ನು ಚಿತ್ರಮಂದಿರಗಳಿಗೆ ಹೋಗಿ ವೀಕ್ಷಿಸಿ ವಿನಃ ಪೈರಸಿಯಲ್ಲಿ ಬಂದ ಲಿಂಕ್ ಅಥವಾ ಓಟಿಟಿ ರಿಲೀಸ್ಗೆ ಕಾಯಬೇಡಿ. ಕನ್ನಡ ಚಿತ್ರಗಳನ್ನು ಚಿತ್ರಮಂದಿರಕ್ಕೆ ಹೋಗಿ ವೀಕ್ಷಿಸುವ ಮೂಲಕ ಆಯಾ ಸಿನಿಮಾದ ನಟ, ನಟಿ, ತಂತ್ರಜ್ಞರು ಸೇರಿದಂತೆ ತೆರೆ ಹಿಂದಿನ ತಂತ್ರಜ್ಞರು ಎಲ್ಲರ ಶ್ರಮಕ್ಕೆ ಪ್ರೋತ್ಸಾಹ ನೀಡಿದಂತೆಯೇ ಸರಿ”.
Exit mobile version