ಸಲಾಂ “ಮೇಜರ್” ಸಂದೀಪ್ ಉನ್ನಿಕೃಷ್ಣನ್ ಸರ್ ಎಂದ ಸಿನಿಪ್ರೇಕ್ಷಕರು : ಮೇಜರ್ ಸಿನಿಮಾದ ವಿಮರ್ಶೆ ಇಲ್ಲಿದೆ!

Major

ಸಿನಿಪ್ರೇಕ್ಷಕರಿಗೆ ಈಗ ಒಂದಕ್ಕಿಂತ ಒಂದು ಅದ್ಬುತ, ರೋಮಾಂಚನಕಾರಿ ಸಿನಿಮಾಗಳನ್ನು ಕಣ್ತುಂಬಿಕೊಳ್ಳುವ ಸಮಯ ಸಮೀಪಿಸುತ್ತಿದೆ.

ಇತ್ತೀಚಿನ ದಿನಗಳಲ್ಲಿ ಬಿಡುಗಡೆಗೊಳ್ಳುತ್ತಿರುವ ಪ್ರತಿಯೊಂದು ಸಿನಿಮಾಗಳು ಕೂಡ ಸಿನಿಪ್ರೇಕ್ಷಕರ ಮುಂದೆ ಹಾಜರಾಗಿ ಸೈ ಎನ್ನಿಸಿಕೊಳ್ಳುತ್ತಿವೆ.

ಈ ಸಾಲಿನಲ್ಲಿ ಭಾರತದ ಹೆಮ್ಮೆಯ(Proud) ಸೈನಿಕ(Soldier) ಮೇಜರ್ ಸಂದೀಪ್ ಉನ್ನಿಕೃಷ್ಣನ್(Major Sandeep Unnikrishnan) ಅವರ ಜೀವನ, ತ್ಯಾಗ, ಧೈರ್ಯ, ಆತ್ಮಸ್ಥೈರ್ಯ, ಬದುಕಿದ ಹಾದಿಯನ್ನು ಕೇವಲ 2 ಗಂಟೆ 10 ನಿಮಿಷಗಳ ಅವಧಿಯಲ್ಲಿ ಸಿನಿಮಾ(Cinema) ಮೂಲಕ ಜನಸಾಮಾನ್ಯರ ಕಣ್ಣಿಗೆ ಕಟ್ಟಿಕೊಡುವ ಕೆಲಸವನ್ನು ಮೇಜರ್ ಚಿತ್ರತಂಡ ಯಶಸ್ವಿಯಾಗಿ ಈಡೇರಿಸಿದೆ. ನಮ್ಮ ಕರ್ನಾಟಕದ ಬೆಂಗಳೂರಿನಲ್ಲಿ(Bengaluru) ಅವರು ಜನಿಸದೇ ಇದ್ದರೂ,

ನಮ್ಮ ನಾಡಿನ ಶಾಲೆಯೊಂದರಲ್ಲಿ ವ್ಯಾಸಂಗ ಮುಗಿಸಿ ಸೈನಿಕನಾಗಿ ದೇಶಕ್ಕೆ ಸೇವೆ ಸಲ್ಲಿಸಿ, ದೇಶಕ್ಕಾಗಿ ಹುತಾತ್ಮರಾದ(Martyred) ಅವರು, ಕೊನೆಗೂ ಮರಳಿದ್ದು ನಮ್ಮ ನಾಡಿಗೆ ಎಂಬುದು ನಮಗೆ ಹೆಮ್ಮೆಯ ಸಂಗತಿ. ಮೇಜರ್ ಸಂದೀಪ್ ಉನ್ನಿಕೃಷ್ಣನ್ ಅವರ ಬದುಕು ಹೇಗಿತ್ತು? ಯಾವ ಹೋರಾಟದಲ್ಲಿ ಅವರು ನಮ್ಮನ್ನು ಅಗಲಿದರು? ಎಂಬ ಸಂಪೂರ್ಣ ಮಾಹಿತಿ `ಮೇಜರ್'(Major) ಸಿನಿಮಾ ಮೂಲಕ ಮತ್ತಷ್ಟು ಬಲವಾಗಿ ಪರಿಚಯಗೊಂಡಿದೆ. ಮೇಜರ್ ಸಿನಿಮಾ ವೀಕ್ಷಿಸಿದ ಪ್ರೇಕ್ಷಕರು ಹೇಳಿದ್ದೇನು? ಸಿನಿಮಾ ಹೇಗಿತ್ತು? ಯಾವ ಅಂಶ ನಮಗೆ ಏನನ್ನು ತಿಳಿಸಿತು? ಈ ಎಲ್ಲಾ ಪ್ರಶ್ನೆಗಳಿಗೆ ಇಂದಿನ ನನ್ನ ವಿಮರ್ಶೆ ನಿಮಗೆ ಉತ್ತರ ನೀಡಲಿದೆ. ಮುಂದುವರೆಸಿ ಈ ನಿಮ್ಮ ಓದುವ ಹವ್ಯಾಸವ…..
`ಮೇಜರ್' ಹಿಂದಿ ಭಾಷೆಯ ಸಿನಿಮಾವಾಗಿದ್ದು, ಈ ಚಿತ್ರವನ್ನು ಭಾರತಕ್ಕೆ ಸೇವೆ ಸಲ್ಲಿಸಿ ಹುತಾತ್ಮರಾದ ಮೇಜರ್ ಸಂದೀಪ್ ಉನ್ನಿಕೃಷ್ಣನ್ ಅವರ ಜೀವನವನ್ನು ಆಧಾರಿಸಿ ಚಿತ್ರಿಸಲಾಗಿದೆ. ಶಶಿ ಕಿರಣ್ ಟಿಕ್ಕಾ(Shashi Kiran Tikka) ಅವರ ನಿರ್ದೇಶನದಲ್ಲಿ ಅರಳಿದ ಮೇಜರ್ ಚಿತ್ರ, ಸೋನಿ ಪಿಕ್ಚರ್ಸ್ ಇಂಟರ್‍ನ್ಯಾಷನಲ್ ಪ್ರೋಡಕ್ಷನ್ಸ್(Sony Pictures International Productions) ಸಂಸ್ಥೆಯಿಂದ ನಿರ್ಮಾಣ ಮಾಡಲಾಗಿದೆ. ಏಕಕಾಲಕ್ಕೆ ಹಿಂದಿ(Hindi) ಮತ್ತು ತೆಲುಗು ಬಾಷೆಯಲ್ಲಿ(Telugu Language) ಮೇಜರ್ ಸಿನಿಮಾವನ್ನು ಬಿಡುಗಡೆ ಮಾಡಲಾಗಿದೆ. 
ಚಿತ್ರದಲ್ಲಿ ತೆಲುಗು ನಟ, ಬರಹಗಾರ ಅಡಿವಿ ಶೇಷ್(Adivi Sesh), ಸಂದೀಪ್ ಉನ್ನಿಕೃಷ್ಣನ್ ಅವರ ಪಾತ್ರದಲ್ಲಿ ನಟಿಸಿದ್ದಾರೆ. ನಾಯಕಿಯಾಗಿ ಸಾಯಿ ಮಂಜರೇಖರ್(ಇಶಾ), ಪ್ರಕಾಶ್ ರಾಜ್(Prakash Raj), ಶೋಬಿತಾ ದುಲಿಪಾಲ, ರೇವತಿ(Revathi) ಸೇರಿದಂತೆ ಮತ್ತಷ್ಟು ಕಲಾವಿದರು ಚಿತ್ರದಲ್ಲಿ ಭಾಗಿಯಾಗಿದ್ದಾರೆ. ಸಂದೀಪ್ ಉನ್ನಿಕೃಷ್ಣನ್ ಅವರ ಪರಿಶ್ರಮ, ತಾವು ಕಂಡ ಕನಸು, ಬದುಕಿದ ಪರಿ ನಿಜಕ್ಕೂ ಮಾದರಿ, ಸ್ಪೂರ್ತಿದಾಯಕ ಎಂಬುದು ಈ ಸಿನಿಮಾದ ಒಂದೊಂದು ತುಣಕು ನಮಗೆ ಅರ್ಥೈಸುತ್ತ ಹೋಗುತ್ತದೆ. 

ಸಿನಿಮಾ ಪ್ರಾರಂಭದ ಮೊದಲೇ ಈ ಸಿನಿಮಾ ಹೇಗೆ ರೂಪುಗೊಂಡಿದೆ ಎಂಬುದನ್ನು 2 ನಿಮಿಷಗಳ ಕಾಲ ಪ್ರೇಕ್ಷಕನ ಗಮನಕ್ಕೆ ತರಲಾಗುವುದು. ಈ ಸಿನಿಮಾ ಮುಖ್ಯವಾಗಿ ಮೇಜರ್ ಸಂದೀಪ್ ಉನ್ನಿಕೃಷ್ಣನ್ ಅವರ ಜೀವನಗಾಥೆ ಆಧಾರಿತ ಸಿನಿಮಾ, ಜೊತೆಗೆ ಕೆಲ ಸನ್ನಿವೇಶಗಳನ್ನು ಸಿನಿಮಾದ ಪ್ರದರ್ಶನದ ಅವಧಿಯನ್ನು ಸರಿದೂಗಿಸಲು ಸೇರಿಸಲಾಗಿದೆ ಎಂಬುದನ್ನು ಸ್ಪಷ್ಟಪಡಿಸಲಾಗಿದೆ. ಸಂದೀಪ್ ಉನ್ನಿಕೃಷ್ಣನ್ ಅವರು ಬಾಲ್ಯದಲ್ಲೇ ಧೈರ್ಯವನ್ನು ಹೊತ್ತುಕೊಂಡು, ಒಬ್ಬ ಸೈನಿಕನಾಗಿ ಸೇವೆ ಸಲ್ಲಿಸಬೇಕು, ದೇಶಕ್ಕೆ ತಮ್ಮದೊಂದು ಕೊಡುಗೆ ನೀಡಬೇಕು ಎಂದು ಅಪಾರ ಗೌರವ, ಪ್ರೀತಿ ಹೊಂದಿದ್ದರು.

ಸದಾ ಶಾಲಾ-ಕಾಲೇಜಿನ ಆಟ-ಪಾಠಗಳಲ್ಲಿ ಮುಂದಿದ್ದ ಅವರು, ಎಲ್ಲರಿಂದಲೂ ಮೆಚ್ಚುಗೆ ಪಡೆದವರು. ಧೈರ್ಯವನ್ನು ಕವಚವಾಗಿಸಿಕೊಂಡ ಸಂದೀಪ್ ಅವರು ಭಾರತೀಯ ನೌಕಪಡೆ(Indian Navy Force) ಸೇರಲು ಬಯಸುತ್ತಾರೆ. ಆದ್ರೆ, ಅಲ್ಲಿ ವಿಫಲವಾಗ್ತಾರೆ. ವಿಫಲವಾದೇ ಎಂದು ಧೃತಿಗೆಡದೆ, ಭಾರತೀಯ ಸೇನೆಗೆ(Indian Army) ಸೇರಿ, ಟ್ರೈನಿಂಗ್ ಪಡೆದು ಎಲೈಟ್ 51 ಸ್ಪೆಷಲ್ ಆಕ್ಷನ್ ಗ್ರೂಪ್ ನಲ್ಲಿ ನ್ಯಾಷನಲ್ ಸೆಕ್ಯೂರಿಟಿ ಗಾಡ್ಸ್ ನ(National Security Guards) ಮುಖ್ಯ ಟ್ರೇನರ್ ಆಗಿ ಸೇವೆ ಸಲ್ಲಿಸುತ್ತಾರೆ. ಸದಾ ಸೇವೆಗೆ ¨ಬದ್ಧರಾದ ಸಂದೀಪ್ ಅವರು, ಕುಟುಂಬಕ್ಕೆ ಸಮಯ ಕೊಡಲು ವಿಫಲರಾಗ್ತಾರೆ, ಕಾರಣ ದೇಶದ ಜನರ ಉಳಿವಿಗಾಗಿ ತಮ್ಮ ಪ್ರಾಣವನ್ನು ಲೆಕ್ಕಿಸದೇ ಶ್ರಮಿಸುತ್ತಾರೆ.

ಸಿನಿಮಾದ ಮೊದಲರ್ಧ ಭಾರತೀಯ ಸೇನೆಗೆ ಅವರ ಸೇರ್ಪಡೆ ಪಯಣ ಹೇಗಿತ್ತು ಎಂಬುದನ್ನು ಕಂಡರೆ, ಸೆಕೆಂಡ್ ಆಫ್ ನಲ್ಲಿ ಸಂದೀಪ್ ಅವರ ಕೊನೆಕ್ಷಣಗಳು ಹೇಗಿತ್ತು? ಎಂಬುದು ಅನಾವರಣಗೊಳ್ಳುತ್ತದೆ. ನವೆಂಬರ್ 27 2008 ರಲ್ಲಿ ಮುಂಬೈನ ಪ್ರತಿಷ್ಠಿತ ತಾಜ್ ಹೋಟಲ್ ನಲ್ಲಿ ಭಯೋತ್ಪಾದಕರ(Terrorists) ದಾಳಿ ಸಂಭವಿಸುತ್ತದೆ. ಆ ಸಮಯದಲ್ಲಿ ಸಂದೀಪ್ ಉನ್ನಿಕೃಷ್ಣನ್ ಅವರ ದಿಟ್ಟ ಹೆಜ್ಜೆ, ತೆಗೆದುಕೊಂಡ ನಿರ್ಣಯ, ತಂಡವನ್ನು ಮುನ್ನಡೆಸಿದ ಪರಿ ನಿಜಕ್ಕೂ ನಮ್ಮನ್ನು ರೋಮಾಂಚನಕಾರಿಯಾಗಿಸುತ್ತದೆ.

ಭಯೋತ್ಪಾದಕರು ರೂಪಿಸಿದ ತಾಜ್ ಹೋಟೆಲ್ ದಾಳಿ(Taj Hotel Attack), ಬಲಿಯಾದ ನೂರಾರು ಮುಗ್ದ ಜೀವ, ಬಾಂಬ್ ದಾಳಿಗಳ ಚಿತ್ರಣ ನಿಜಕ್ಕೂ ಅಂದಿನ ಘಟನೆಯನ್ನು ಕಣ್ಮುಂದೆ ತರುತ್ತದೆ. ತಾಜ್ ಹೋಟೆಲ್ ಮೇಲಾದ ದಾಳಿಯಲ್ಲಿ ಮಾಧ್ಯಮ(Media) ಮಾಡಿದ ಯಡವಟ್ಟು ತೀವ್ರ ಪರಿಣಾಮ ಬೀರಿತ್ತು ಎಂಬುದನ್ನು ಕೂಡ ಸ್ಪಷ್ಟವಾಗಿ ತಿಳಿಸಿದ್ದಾರೆ. ಭಯೋತ್ಪಾದಕರ ಹುಟ್ಟಡಗಿಸುವವರೆಗೂ ತಮ್ಮ ಉಸಿರಿನ ಅಂತ್ಯದವರೆಗೂ ಹೋರಾಡಬೇಕು ಎಂಬ ಕಿಚ್ಚು ಅವರ ಕಣ್ಣಿನಲ್ಲಿ ಕಾಣಿಸುತ್ತದೆ. ತಮ್ಮ ಪ್ರಾಣವನ್ನು ತ್ಯಾಗ ಮಾಡುವ ಮುಖೇನ 14 ಒತ್ತೆಯಾಳುಗಳನ್ನು ಭಯೋತ್ಪಾದಕರ ಗುರಿಯಿಂದ ರಕ್ಷಿಸುತ್ತಾರೆ.

ಇಂದಿಗೂ ಕೂಡ ಆ 14 ಜನರ ಉಸಿರು ಹಸಿರಾಗಿರಲು ಕಾರಣವೇ ಮೇಜರ್ ಸಂದೀಪ್ ಉನ್ನಿಕೃಷ್ಣನ್ ಅವರ ಉಸಿರು ತ್ಯಾಗವಾಗಿದ್ದಕ್ಕೇ ಎಂಬ ಸಂಗತಿ ನಿಜಕ್ಕೂ ನಮ್ಮನ್ನು ಹೆಮ್ಮೆ ಪಡಿಸುತ್ತದೆ. 27 ನವೆಂಬರ್ 2008ರ ತಾಜ್ ಹೋಟೆಲ್ ದಾಳಿ ಇಂದಿಗೂ ಮರೆಯಲಾಗದಂತ ಘೋರ ಘಟನೆ! ಮೇಜರ್ ಸಂದೀಪ್ ಉನ್ನಿಕೃಷ್ಣನ್ ಅವರ ತ್ಯಾಗಕ್ಕೆ, ದೈರ್ಯ, ಶೌರ್ಯಕ್ಕೆ ಜನವರಿ 26 2009ರ ಗಣರಾಜ್ಯೋತ್ಸವ(Republic Day) ಕಾರ್ಯಕ್ರಮದಲ್ಲಿ ರಾಷ್ಟ್ರಪತಿ ಪ್ರತಿಭಾ ಪಾಟೀಲ್(Prathibha Patel) ಅವರಿಂದ ಭಾರತದ ಅತ್ಯುನ್ನತ ಶಾಂತಿಕಾಲದ ಮಿಲಿಟರಿ ಶ್ರೇಷ್ಟ ಪ್ರಶಸ್ತಿಯಾದ `ಅಶೋಕ ಚಕ್ರ’(Ashok Chakra) ನೀಡಿ ಗೌರವಿಸಿತು.

ಈ ಪ್ರಶಸ್ತಿಯನ್ನು ಸಂದೀಪ್ ಉನ್ನಿಕೃಷ್ಣನ್ ಅವರ ತಾಯಿ ಸ್ವೀಕರಿಸಿದರು. ಈ ಸಿನಿಮಾ ವೀಕ್ಷಿಸಿದ ಸಿನಿಪ್ರೇಕ್ಷಕರು ಅಂತಿಮವಾಗಿ ಎದ್ದು ನಿಂತು ಪರದೆ ಮೇಲೆ ಬಂದ ಸಂದೀಪ್ ಅವರ ಫೋಟೊಗೆ ಕೈಮುಗಿದು ಸಲಾಂ ಎಂದು ನಮನ ಸಲ್ಲಿಸಿದರು. ಒಟ್ಟಾರೆ ನಮ್ಮ ದೇಶ, ನಮ್ಮ ಸೈನಿಕರ ಜೀವನ, ಸಾಧನೆಯನ್ನು ಸಿನಿಮಾ ಮೂಲಕ ಪ್ರೇಕ್ಷಕರಿಗೆ ಪರಿಚಯಿಸುವುದು ನಿಜಕ್ಕೂ ಒಳ್ಳೆಯ ಪ್ರಯತ್ನ. ಇದರಿಂದ ಕೇವಲ ಮನರಂಜನೆ ಮಾತ್ರವಲ್ಲದೇ, ಒಂದು ವಿಷಯ, ಮುಖ್ಯ ಸಂಗತಿ, ಅದರ ಮಹತ್ವ, ಉತ್ತಮ ಸಂದೇಶ ಪ್ರೇಕ್ಷಕರಿಗೆ ಲಭಿಸುತ್ತದೆ.

ಕುಟುಂಬ ಸಮೇತ ನೋಡುವಂತ ಸಿನಿಮಾ ಇದಾಗಿದ್ದು, ನಮ್ಮ ದೇಶ, ಸೇನೆ, ಯೋಧರು, ಯೋಧರ ತ್ಯಾಗ, ಘಟನೆಗಳು ಅಧ್ಯಾಯದ ರೀತಿ ನಮ್ಮನ್ನು ತಲುಪುತ್ತದೆ ಹಾಗೂ ಮತ್ತಷ್ಟು ಸುಲಭವಾಗಿ ಅರ್ಥೈಸುತ್ತದೆ ಎಂಬುದರಲ್ಲಿ ಅನುಮಾನವೇ ಇಲ್ಲ. “ಸಲಾಂ ಮೇಜರ್ ಸಂದೀಪ್ ಉನ್ನಿಕೃಷ್ಣನ್ ಸರ್”.
Exit mobile version