ಬಿ.ಎನ್.ಗಂಗಾಧರ್ ಎಂದೊಡನೆ ‘ಅಂಜದ ಗಂಡು’, ‘ಯಾರಿಗೆ ಸಾಲತ್ತೆ ಸಂಬಳ’ ಮುಂತಾದ ಯಶಸ್ವಿ ಚಿತ್ರಗಳ ನೆನಪಾಗುವುದು ಖಚಿತ. ಅವುಗಳ ನಿರ್ಮಾಪಕರಾದ ಗಂಗಾಧರ್ ಅವರ ನಿರ್ಮಾಣದ 27ನೇ ಚಿತ್ರ ‘ಜಿಗ್ರಿದೋಸ್ತ್’ ಇದೇ ಸೆಪ್ಟೆಂಬರ್ 17ರಂದು ತೆರೆಕಾಣಲಿದೆ.
ನಟ, ನಿರ್ದೇಶಕ ಎಸ್.ಮೋಹನ್ ನಿರ್ದೇಶನದ ‘ಜಿಗ್ರಿದೋಸ್ತ್’ ಮೂಲಕ ಸ್ನೇಹದ ಕತೆ ತೋರಿಸಲಿದ್ದಾರೆ. “ನನಗೆ ಗಂಗಾಧರ್ ಅವರು ಸುಮಾರು 22ವರ್ಷಗಳಿಂದ ಪರಿಚಯ. ಅವರ ‘ಯಾರಿಗೆ ಸಾಲತ್ತೆ ಸಂಬಳ’ ಚಿತ್ರದಲ್ಲಿ ನಟಿಸಲು ನನಗೆ ಅವಕಾಶ ನೀಡಿದ್ದರು. ಈಗ ಅವರದೇ ನಿರ್ಮಾಣದ ಚಿತ್ರ ನಿರ್ದೇಶಿಸಿದ್ದೇನೆ. ಪ್ರಪಂಚದಲ್ಲಿ ಎಲ್ಲಾ ಸಂಬಂಧಿಗಳನ್ನು ನಮಗೆ ಅಪ್ಪ – ಅಮ್ಮ ಪರಿಚಯ ಮಾಡಿಕೊಟ್ಟರಷ್ಟೇ ತಿಳಿಯುತ್ತದೆ. ಆದರೆ ನಾವು ಇಷ್ಟ ಪಟ್ಟು ಪಡೆಯುವ ಸಂಬಂಧ ಸ್ನೇಹ. ಹಾಗಾಗಿ ಎಲ್ಲಕ್ಕಿಂತ ಮೀರಿದ್ದು ಸ್ನೇಹ. ಇದನ್ನೇ ನಮ್ಮ ಚಿತ್ರದಲ್ಲಿ ಹೇಳಿದ್ದೇವೆ.
ಸ್ಕಂದ ಅಶೋಕ್ ಹಾಗೂ ಚೇತನ್ ಇಬ್ಬರೂ ಸ್ನೇಹಿತರಾಗಿ ಕಾಣಿಸಿಕೊಂಡಿದ್ದಾರೆ. ಅಕ್ಷತ, ಸುಷ್ಮ ನಾಯಕಿಯರು. ಪಂಚಭಾಷಾ ನಟ ವಿನೋದ್ ಆಳ್ವ, ಮಾಜಿ ಸಚಿವರಾದ ಟಿ.ಬಿ.ಜಯಚಂದ್ರ, ಚಿತ್ಕಳಾ ಬಿರಾದಾರ್ , ಇರ್ಫಾನ್, ಮಂಜುನಾಥ್, ರಮೇಶ್ ಪಂಡಿತ್, ಟಿನ್ನಿಸ್ ಕೃಷ್ಣ ಮುಂತಾದವರು ಈ ಚಿತ್ರದಲ್ಲಿ ಅಭಿನಯಿಸಿದ್ದಾರೆ” ಎಂದು ಚಿತ್ರ ಹಾಗೂ ಚಿತ್ರತಂಡದ ಬಗ್ಗೆ ಮಾಹಿತಿ ನೀಡಿದರು ಮೋಹನ್.
” ಕೋವಿಡ್ ಬರದಿದ್ದರೆ ಕಳೆದವರ್ಷ ನಮ್ಮ ಚಿತ್ರ ಬಿಡುಗಡೆ ಅಗಬೇಕಿತ್ತು. ಆದರೆ ಈಗ ಬಿಡುಗಡೆ ಮಾಡುತ್ತಿದ್ದೇವೆ ನೋಡಿ ಹರಸಿ” ಎಂದರು ನಿರ್ಮಾಪಕ ಬಿ.ಎನ್.ಗಂಗಾಧರ್.
ನಾಯಕರಲೊಬ್ಬರಾದ ಚೇತನ್ ಮತಾನಾಡುತ್ತಾ, ನಾನು ಅಧಿಕಾರಿಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದೇನೆ. ಪಾತ್ರ ನೀಡಿದ ನಿರ್ಮಾಪಕ – ನಿರ್ದೇಶಕರಿಗೆ ಧನ್ಯವಾದ ಎಂದರು. ನಟಿಯರಾದ ಅಕ್ಷತ, ಸುಷ್ಮ ಕಲಾವಿದರಾದ ಇರ್ಫಾನ್ ಹಾಗೂ ಚಿತ್ರದ ಸಹ ನಿರ್ಮಾಪಕ ಹಾಗೂ ನಟ ಮಂಜುನಾಥ್ ಹಾಗೂ ಸಂಗೀತ ನಿರ್ದೇಶಕ ದಿನೇಶ್ ಕುಮಾರ್ ಮಾಧ್ಯಮದ ಮುಂದೆ ಚಿತ್ರದ ಬಗ್ಗೆ ಮಾಹಿತಿ ನೀಡಿದರು.
ಪ್ರಸಾದ್ ಬಾಬು ಛಾಯಾಗ್ರಹಣ, ಶಿವಪ್ರಸಾದ್ ಯಾದವ್ ಸಂಕಲನ, ಕೌರವ ವೆಂಕಟೇಶ್ ಸಾಹಸ ನಿರ್ದೇಶನ ಹಾಗೂ ಮದನ್ – ಹರಿಣಿ ಅವರ ನೃತ್ಯ ನಿರ್ದೇಶನ ಈ ಚಿತ್ರಕ್ಕಿದೆ.