ದೆಹಲಿ, ಏ. 08: ದೇಶದಲ್ಲಿ ಕಳೆದ 24ಗಂಟೆಗಳಲ್ಲಿ 1,26,789 ಹೊಸ ಕೊವಿಡ್ ಪ್ರಕರಣಗಳು ಪತ್ತೆಯಾಗಿವೆ. ಮಹಾರಾಷ್ಟ್ರದಲ್ಲಿ ಅತೀ ಹೆಚ್ಚು ಸೋಂಕಿತರಿದ್ದು, ಛತ್ತೀಸಗಡದಲ್ಲಿ ಇದೇ ಮೊದಲ ಬಾರಿ ಸೋಂಕಿತರ ಸಂಖ್ಯೆ 10,000 ಗಡಿದಾಟಿದೆ. ಈ ಮೂಲಕ ದೇಶದ ಒಟ್ಟು ಕೊರೊನಾವೈರಸ್ ಸೋಂಕಿತರ ಸಂಖ್ಯೆ 1,29,28,574ಕ್ಕೆ ತಲುಪಿದೆ. ಈ ಪೈಕಿ 8,43,473 ಸಕ್ರಿಯ ಪ್ರಕರಣಗಳಿದ್ದು 1,18,51,393 ಮಂದಿ ಚೇತರಿಸಿಕೊಂಡಿದ್ದಾರೆ. ಇಲ್ಲಿಯವರೆಗೆ 1,66,862 ಮಂದಿ ಸಾವಿಗೀಡಾಗಿದ್ದು, 9,01,98,673 ಮಂದಿ ಲಸಿಕೆ ಪಡೆದುಕೊಂಡಿದ್ದಾರೆ. ಕಳೆದ 24 ಗಂಟೆಗಳಲ್ಲಿ 59,258 ಮಂದಿ ಚೇತರಿಸಿಕೊಂಡಿದ್ದು 685 ಮಂದಿ ಮೃತಪಟ್ಟಿದ್ದಾರೆ.
ನಾಲ್ಕು ದಿನಗಳ ಅವಧಿಯಲ್ಲಿ ಹೊಸ ಕೊವಿಡ್ ಪ್ರಕರಣಗಳ ಸಂಖ್ಯೆ ಮೂರು ಬಾರಿ 1ಲಕ್ಷದ ಗಡಿದಾಟಿದೆ. ಏಪ್ರಿಲ್ 7ರವರೆಗೆ 25,26,77,379 ಮಾದರಿಗಳನ್ನು ಕೊವಿಡ್ ಪರೀಕ್ಷೆಗೊಳಪಡಿಸಲಾಗಿದೆ. ಈ ಪೈಕಿ ಬುಧವಾರ 12,37,781 ಮಾದರಿಗಳನ್ನು ಪರೀಕ್ಷಿಸಲಾಗಿದೆ ಎಂದು ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ (ICMR) ಹೇಳಿದೆ.
ಭಾರತೀಯ ವೈದ್ಯಕೀಯ ಸಂಘಟನೆ (IMA) ಸಾರ್ವತ್ರಿಕ ಲಸಿಕೆ ವಿತರಣೆಗೆ ಕರೆ ನೀಡಿದೆ. ಹಲವಾರು ಮುಖ್ಯಮಂತ್ರಿಗಳು ಸಾರ್ವತ್ರಿಕ ಲಸಿಕೆ ನೀಡುವಂತೆ ಒತ್ತಾಯಿಸಿದ್ದಾರೆ. ಇನ್ನೂ ಸಾರ್ವತ್ರಿಕ ವ್ಯಾಕ್ಸಿನೇಷನ್ ಅಗತ್ಯವಿಲ್ಲ ಎಂದು ಕೇಂದ್ರ ಸರ್ಕಾರ ಹೇಳುತ್ತದೆ. ಯಾವುದೇ ಪೂರ್ವ-ನೋಂದಣಿ ಇಲ್ಲದೆ ಎಲ್ಲಾ ವಯಸ್ಸಿನವರಿಗೆ ವಾಕ್-ಇನ್ ಲಸಿಕೆ ನೀಡುವುದು ಈ ಸಮಯದ ತುರ್ತು ಎಂದು ಕಾಂಗ್ರೆಸ್ ಹಿರಿಯ ನಾಯಕ ಪಿ.ಚಿದಂಬರಂ ಟ್ವೀಟ್ ಮಾಡಿದ್ದಾರೆ.