ಲಾಕ್‌ಡೌನ್‌ ವಿಸ್ತರಣೆಯ ಕುರಿತಾಗಿ ತಜ್ಞರು ಸಚಿವರ ಜೊತೆ ಇಂದು ಸಿಎಂ ಬಿ.ಎಸ್‌ ಯಡಿಯೂರಪ್ಪ ಮಹತ್ವದ ಸಭೆ

ಬೆಂಗಳೂರು, ಜೂ. 2: ದೇಶಾದ್ಯಂತ ಕೊರೋನಾ ಅಬ್ಬರ ಹೆಚ್ಚಾಗಿದೆ. ಹೀಗಾಗಿ, ಕರ್ನಾಟಕದಲ್ಲಿ ಈಗಾಗಲೇ ಜೂನ್ 7ರವರೆಗೆ ಲಾಕ್​ಡೌನ್ ಜಾರಿಯಲ್ಲಿದೆ. ಅದಾದ ಬಳಿಕವೂ ಕರ್ನಾಟಕದಲ್ಲಿ ಲಾಕ್​ಡೌನ್ ವಿಸ್ತರಿಸಬೇಕೇ? ಬೇಡವೇ?, ಲಾಕ್​ಡೌನ್ ವಿಸ್ತರಣೆ ಮಾಡಿದರೆ ಅದರಿಂದ ಆಗುವ ತೊಂದರೆಗಳೇನು? ಮಾಡದಿದ್ದರೆ ಆಗುವ ಪರಿಣಾಮಗಳೇನು? ಎಂಬ ಬಗ್ಗೆ ತಜ್ಞರು ಮತ್ತು ತಾಂತ್ರಿಕ ಸಲಹಾ ಸಮಿತಿಯವರು ಈಗಾಗಲೇ ಸಿಎಂ ಯಡಿಯೂರಪ್ಪನವರಿಗೆ ವರದಿ ನೀಡಿದ್ದಾರೆ. ಇಂದು ಉನ್ನತ ಮಟ್ಟದ ತಜ್ಞರ ಜೊತೆ ತಮ್ಮ ಕೃಷ್ಣಾ ನಿವಾಸದಲ್ಲಿ ಸಂಜೆ 4.30ಕ್ಕೆ ಸಿಎಂ ಯಡಿಯೂರಪ್ಪ ಸಭೆ ನಡೆಸಲಿದ್ದಾರೆ.  ಬಳಿಕ, ಕೊರೋನಾ ತಜ್ಞರು ನೀಡಿರುವ ವರದಿ ಬಗ್ಗೆ‌ ಸಂಜೆ 6 ಗಂಟೆಗೆ ಕಾವೇರಿ ನಿವಾಸದಲ್ಲಿ ಚರ್ಚೆ ನಡೆಸಲಿದ್ದಾರೆ.

ಆರೋಗ್ಯ ಸಚಿವ ಡಾ. ಕೆ. ಸುಧಾಕರ್ ಸೇರಿದಂತೆ ಅನೇಕ ಸಚಿವರು ಜೂನ್ 7ರ ಬಳಿಕವೂ ಲಾಕ್​ಡೌನ್ ವಿಸ್ತರಣೆ ಮಾಡುವ ಬಗ್ಗೆ ಒಲವು ತೋರಿದ್ದಾರೆ. ಆದರೆ, ಡಿಸಿಎಂ ಅಶ್ವಥ್ ನಾರಾಯಣ ಜೂನ್ 7ರ ಬಳಿಕ ಹಂತಹಂತವಾಗಿ ಅನ್​ಲಾಕ್​ ಜಾರಿಗೊಳಿಸುವ ಸೂಚನೆ ನೀಡಿದ್ದಾರೆ. ಇಂದು ಸಂಜೆ 6 ಗಂಟೆಗೆ ನಡೆಯಲಿರುವ ಸಭೆಯಲ್ಲಿ ಜೂನ್​ 7ರ ನಂತರ ಲಾಕ್​ಡೌನ್​ ವಿಸ್ತರಣೆ ಮಾಡಬೇಕಾ? ಬೇಡವಾ? ಎಂಬುದನ್ನು ನಿರ್ಧರಿಸುವ ಸಾಧ್ಯತೆಯಿದೆ. ಹಲವು ತಜ್ಞರು ಈವರೆಗೆ ರಾಜ್ಯದಲ್ಲಿ ಕೊರೋನಾ ಸೋಂಕನ್ನು ನಿಯಂತ್ರಿಸಲು ಇವರು ಏಕೈಕ ಮಾರ್ಗ ಲಾಕ್​ಡೌನ್ ಮಾತ್ರ. ಹೀಗಾಗಿ ಲಾಕ್​ಡೌನ್​ ಅನ್ನು ಕಟ್ಟು ನಿಟ್ಟಾಗಿ ಜಾರಿಗೆ ತನ್ನಿ ಎಂದು ಸರ್ಕಾರಕ್ಕೆ ಶಿಫಾರಸು ಮಾಡಿದ್ದಾರೆ. ಅಲ್ಲದೆ, ಜೂನ್​ ಕೊನೆಯವರೆಗೆ ಲಾಕ್​ಡೌನ್ ಇದ್ದರೆ ಒಳ್ಳೆಯದು ಎನ್ನಲಾಗುತ್ತಿದೆ.

ರಾಜ್ಯದ ಪಾಸಿಟಿವಿಟಿ ದರ ಇನ್ನೂ ಶೇಕಡಾ 13.57ರಷ್ಟಿದೆ. ಆದರೂ ಕರ್ನಾಟಕ ಸರ್ಕಾರ ಲಾಕ್ಡೌನ್ ವಿಸ್ತರಣೆ ಮಾಡುವ ಬಗ್ಗೆ ಮೀನಾಮೇಷ ಎಣಿಸುತ್ತಿದೆ ಎಂದು ವಿರೋಧಗಳು ಕೇಳಿ ಬಂದಿದ್ದವು. ಈ ಎಲ್ಲಾ ವಿರೋಧಗಳ ಕಾರಣದಿಂದಾಗಿ ಇಂದು ಸಿಎಂ ಯಡಿಯೂರಪ್ಪ ತಮ್ಮ ಸಂಪುಟದ ಸಚಿವರ ಸಭೆ ಕರೆದಿದ್ದಾರೆ ಎನ್ನಲಾಗುತ್ತಿದೆ.

ರಾಜ್ಯಾದ್ಯಂತ ಕೊರೋನಾ ಸ್ಥಿತಿಗತಿಯ ಬಗ್ಗೆ ಸಚಿವರ ಜೊತೆ ಸಿಎಂ ಯಡಿಯೂರಪ್ಪ ಚರ್ಚಿಸಲಿದ್ದಾರೆ. ಸಚಿವರು, ತಜ್ಞರ ಜೊತೆ ಸಭೆ ನಡೆಸಿ ಅಭಿಪ್ರಾಯ ಸಂಗ್ರಹಿಸಲಿರುವ ಸಿಎಂ ಯಡಿಯೂರಪ್ಪ ಲಾಕ್‌ಡೌನ್ ವಿಸ್ತರಣೆಯಾ? ಅಥವಾ ಅನ್ ಲಾಕ್ ಮಾಡಲಾಗುತ್ತದಾ? ಎಂಬುದರ ಇಂದೇ ಅಂತಿಮ ನಿರ್ಧಾರವಾಗುವ ಸಾಧ್ಯತೆಯಿದೆ. ಲಾಕ್‌ಡೌನ್ ಮುಂದುವರಿದರೆ ಆಗುವ ಆರ್ಥಿಕ ಸಮಸ್ಯೆ ಬಗ್ಗೆ ತಜ್ಞರ ಸಮಿತಿ ಈಗಾಗಲೇ ಸಿಎಂ ಯಡಿಯೂರಪ್ಪನವರಿಗೆ ತಿಳಿಸಿದೆ. ಈ ಹಿನ್ನೆಲೆಯಲ್ಲಿ ಹಂತ ಹಂತವಾಗಿ ಲಾಕ್‌ಡೌನ್ ತೆರವು ಸೂಕ್ತ ಎಂದು ಅಧಿಕಾರಿಗಳಿಂದ ಸಿಎಂಗೆ ಅಭಿಪ್ರಾಯ ಸಲ್ಲಿಕೆ ಮಾಡಲಾಗಿದೆ. ರಾಜ್ಯಮತ್ತು ಬೆಂಗಳೂರಲ್ಲಿ ಕೊರೊನಾ ಪ್ರಕರಣಗಳ ಸಂಖ್ಯೆಯಲ್ಲಿ ಇಳಿಕೆಯಾಗಿದೆ. ಜೂನ್ 7ರ ಬಳಿಕ ಲಾಕ್‌ಡೌನ್‌ನಲ್ಲಿ ಸಡಿಲಿಕೆ ಮಾಡಿ, ಆರ್ಥಿಕ ಚಟುವಟಿಕೆಗಳಿಗೆ ಹಂತ ಹಂತವಾಗಿ ಅವಕಾಶ ಮಾಡಿಕೊಡಬೇಕು. ಲಾಕ್‌ಡೌನ್ ವೇಳೆ ಕೊರೊನಾ ನಿರ್ವಹಣೆಗಾಗಿ ಅಗತ್ಯವಿರುವ ಬೆಡ್ ಪ್ರಮಾಣ, ಆಕ್ಸಿಜನ್, ಐಸಿಯು ಬೆಡ್, ಸಿಸಿಸಿಗಳನ್ನು ಸರ್ಕಾರ ಏರಿಕೆ ಮಾಡಲಾಗುತ್ತಿದೆ. ಕೋವಿಡ್ ನಿರ್ವಹಣೆಗೆ ಬೇಕಾಗಿರುವ ಮೂಲಸೌಕರ್ಯಗಳನ್ನು ವೇಗವಾಗಿ ವೃದ್ಧಿಸಲಾಗುತ್ತಿದೆ. ಹಂತ ಹಂತವಾಗಿ ಅನ್​ಲಾಕ್ ಮಾಡುವುದು ಒಳಿತು ಎಂದು ಆರ್ಥಿಕ ಇಲಾಖೆ ಸಲಹೆ ನೀಡಿದೆ. ಬಹುತೇಕ ಸಚಿವರು ಲಾಕ್​ಡೌನ್ ವಿಸ್ತರಣೆಯ ಸಲಹೆ ನೀಡಿದ್ದಾರೆ. ಒಂದುವೇಳೆ ಅನ್​ಲಾಕ್ ಮಾಡುವುದಾದರೆ ಹಂತ ಹಂತವಾಗಿ ಮಾಡುವುದು ಒಳಿತು ಎಂದು ಸಚಿವರು ಸಲಹೆ ನೀಡಿದ್ದಾರೆ. ಇಂದಿನ ಸಭೆಯಲ್ಲಿ ಲಾಕ್​ಡೌನ್ ವಿಸ್ತರಣೆ ಬಗ್ಗೆ ನಿರ್ಧಾರವಾಗುವ ಸಾಧ್ಯತೆಯಿದೆ. ಕರ್ನಾಟಕದಲ್ಲಿ ಕೊರೋನಾ ಮೂರನೇ ಅಲೆ ಬಗ್ಗೆಯೂ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ.

ಇನ್ನೊಂದೆಡೆ, ಬೆಂಗಳೂರಿನಲ್ಲಿ ಹಂತ-ಹಂತವಾಗಿ ಲಾಕ್​ಡೌನ್ ತೆರವುಗೊಳಿಸುವ ಬಗ್ಗೆ ಬಿಬಿಎಂಪಿ ಕಮಿಷನರ್ ಗೌರವ್ ಗುಪ್ತ ಸುಳಿವು ನೀಡಿದ್ದಾರೆ. ಕರ್ನಾಟಕದಲ್ಲಿ  ನಿನ್ನೆ 14,304 ಕೊರೊನಾ ಕೇಸ್ ಪತ್ತೆಯಾಗಿದೆ. ನಿನ್ನೆ ಕೊರೋನಾದಿಂದ 464 ಜನರು ಸಾವನ್ನಪ್ಪಿದ್ದಾರೆ. ಬೆಂಗಳೂರಿನಲ್ಲಿ ಕೋವಿಡ್ ಕೇಸ್ ಸಂಖ್ಯೆ ಮೂರೂವರೆ ಸಾವಿರಕ್ಕೆ ಇಳಿದಿದೆ. ಹೀಗಾಗಿ, ಬೆಂಗಳೂರಿನಲ್ಲಿ ಲಾಕ್​ಡೌನ್ ತೆರವುಗೊಳಿಸಬಹುದು ಎನ್ನಲಾಗುತ್ತಿದೆ.

Exit mobile version