ಮಡಿಕೇರಿ,ಜೂ.23: ಸಿನಿಮಾ ತಾರೆಯರಿಗೆ ಹಲವು ಬಗೆಯ ಹುಚ್ಚು ಅಭಿಮಾನಿಗಳು ಇರುವುದನ್ನು ಕಂಡಿದ್ದೇವೆ. ಆದರೆ ಇಲ್ಲೊಬ್ಬ ಅಭಿಮಾನಿ ತೆಲಂಗಾಣದಿಂದ ವೀರಾಜಪೇಟೆಗೆ ಶನಿವಾರ ರಾತ್ರಿ ಬಂದಿದ್ದಾನೆ.
ಮೈಸೂರಿನವರೆಗೂ ರೈಲಿನ್ನಲ್ಲಿ ಬಂದು ಬಳಿಕ ಗೂಡ್ಸ್ ಆಟೋದಲ್ಲಿ ವೀರಾಜಪೇಟೆ ತಲುಪಿದ ಆತ ಗೂಗಲ್ ಮ್ಯಾಪ್ ಹಾಕಿಕೊಂಡು ಮಗ್ಗುಲ ಗ್ರಾಮದಲ್ಲಿ ಮಂದಣ್ಣ ಎನ್ನುವವರಿಗೆ ಸೇರಿದ ಜಾಗ ಇರುವುದರಿಂದ ಇಲ್ಲಿಯೇ ರಶ್ಮಿಕಾ ಮಂದಣ್ಣ ಮನೆ ಇರಬೇಕು ಅಂದುಕೊಂಡು ಆಟೋದಲ್ಲಿ ಮಗ್ಗುಲ ಗ್ರಾಮಕ್ಕೆ ಬಂದಿಳಿದು ಅಕ್ಕಪಕ್ಕದ ಜನರನ್ನು ರಶ್ಮಿಕಾ ಮಂದಣ್ಣ ಮನೆಯೆಲ್ಲಿ? ಎಂದು ವಿಚಾರಿಸಿ ಬಹಳ ಹೊತ್ತು ಹುಡುಕಾಟ ನಡೆಸಿದ್ದಾನೆ.
ಇಂಗ್ಲೀಷಿನ್ನಲ್ಲಿ ಮಾತನಾಡುತ್ತಾ ರಾತ್ರಿ ಹೊತ್ತಿನ್ನಲ್ಲಿ ರಶ್ಮಿಕಾ ಮಂದಣ್ಣನನ್ನು ಭೇಟಿಯಾಗಬೇಕು ಎಂದು ಹೇಳುತ್ತಿದ್ದನ್ನು ಕೇಳಿ ಸಾರ್ವಜನಿಕರಿಗೆ ಭಯವಾಗಿ ಪೊಲೀಸರಿಗೆ ಕರೆಮಾಡಿ ತಿಳಿಸಿದ್ದಾರೆ. ಬಳಿಕ ಸ್ಥಳಕ್ಕೆ ಬಂದ ಪೊಲೀಸರು ಈತನ ಬಗ್ಗೆ ವಿಚಾರಿಸಿದಾಗ ಆತನ ಡ್ರೈವಿಂಗ್ ಲೈಸೆನ್ಸ್ ತೋರಿಸಿದ ಅದರಲ್ಲಿಯೂ ತೆಲಂಗಾಣದ ವಿಳಾಸವಿತ್ತು. ಮತ್ತು ಆತನ ಹೆಸರು ಆಕಾಶ್ ತ್ರಿಪಾಠಿ ಎಂದು ಬರೆದಿತ್ತು.
ನಂತರ ಪೊಲೀಸರು ಆತನ ಸಂಬಂಧಿಕರಿಗೆ ಕರೆಮಾಡಿ ವಿಷಯ ತಿಳಿಸಿದಾಗ ಆತ ರಶ್ಮಿಕಾ ಅವರ ಹುಚ್ಚು ಅಭಿಮಾನಿಯಾಗಿದ್ದು, ಹೀಗಾಗಿ ಆಕೆಯನ್ನು ಬೇಟಿಯಾಗಲು ಕೊಡಗಿಗೆ ಬಂದಿರುವುದಾಗಿ ತಿಳಿಸಿದ್ದಾರೆ. ನಂತರ ಪೊಲೀಸರೆ ಆತನನ್ನು ಅವನ ಊರಿಗೆ ಕಳುಹಿಸಿಕೊಟ್ಟಿದ್ದಾರೆ.