ಕೋವಿಡ್‌ ಭಯ: ಮೃತನ ಅಂತ್ಯಕ್ರಿಯೆಗೆ ಗ್ರಾಮಸ್ಥರ ನಕಾರ… ಬೈಕ್‌ನಲ್ಲೇ ಶವಸಾಗಿಸಿ ಅಂತ್ಯಸಂಸ್ಕಾರ

ಚಾಮರಾಜನಗರ, ಮೇ. 10: ಕೋವಿಡ್‌ ಸೋಂಕಿನಿಂದ ಮೃತಪಟ್ಟ ವ್ಯಕ್ತಿಯ ಶವವನ್ನು ಬೈಕ್‌ನಲ್ಲಿ ಸಾಗಿಸಿ ಅಂತ್ಯಕ್ರಿಯೆ ಮಾಡುವ ಮೂಲಕ ಪಿಎಫ್‌ಐ ಸಂಘಟನೆ ಮಾನವೀಯತೆ ಮೆರೆದಿದ್ದಾರೆ.
ಕೊಳ್ಳೇಗಾಲ ತಾಲ್ಲೂಕಿನ‌ ಆಲದಹಳ್ಳಿಯಲ್ಲಿ ಮೃತಪಟ್ಟಿದ್ದ ಮಾದೇವ (65) ವೃದ್ಧನ ಶವವನ್ನು ಬೈಕ್‌ನಲ್ಲಿ ಸಾಗಿಸಿ ಅಂತ್ಯಕ್ರಿಯೆ ನಡೆಸಲಾಯಿತು.

ಹೆಂಡತಿ, ಮಕ್ಕಳಿಲ್ಲದ ಮಾದೇವ ಭಾನುವಾರ ಮನೆಯಲ್ಲಿ ಮೃತಪಟ್ಟಿದ್ದಾರೆ. ಆದರೆ ಈಕೆ ಕೊರೊನಾದಿಂದ ಮೃತಪಟ್ಟಿರಬಹುದು ಎಂದು ಗ್ರಾಮಸ್ಥರು ಅಂತ್ಯಕ್ರಿಯೆ ನಡೆಸಲು ಹೆದರಿದರು. ನಂತರ ಪಿಎಫ್‌ಐ ಸಂಘಟನೆಗೆ ಕರೆ ಮಾಡಿದಾಗ, ಸ್ಥಳಕ್ಕೆ ಆಗಮಿಸಿದ ಕಾರ್ಯಕರ್ತರು ಶವಸಂಸ್ಕಾರಕ್ಕೆ ಗ್ರಾಮಸ್ಥರ ನೆರವು ಕೋರಿದರು.

ಕೋವಿಡ್‌ ಭಯದಿಂದ ವ್ಯಕ್ತಿಯ ಅಂತ್ಯಸಂಸ್ಕಾರಕ್ಕೆ ಗ್ರಾಮಸ್ಥರು ಯಾರೂ ಮುಂದೆ ಬರಲಿಲ್ಲ. ವಾಹನ ಕೂಡ ನೀಡಲಿಲ್ಲ. ತಾಲ್ಲೂಕು ಆಡಳಿತದ ಸಹಾಯವೂ ಸಿಗಲಿಲ್ಲ. ಕೊನೆಗೆ ಪಿಎಫ್‌ಐ ಸಂಘಟನೆ ಕಾರ್ಯಕರ್ತರು ದ್ವಿಚಕ್ರ ವಾಹನದಲ್ಲಿ ಶವವನ್ನು ಸಾಗಿಸಿದ್ದಾರೆ.

ಈ ವೇಳೆ ಗ್ರಾಮಾಂತರ ಠಾಣೆ ಪೊಲೀಸರು ಶವ ಹೂಳಲು ಗೋಮಾಳದಲ್ಲಿ ಜಾಗ ತೋರಿಸಿದ್ದಾರೆ. ನಂತರ ಸಂಘಟನೆಯವರು ಶವಸಂಸ್ಕಾರ ಮಾಡಿದರು.

Exit mobile version