ಮುಖ್ಯಮಂತ್ರಿಗಳಿಂದ `ತನುಜಾ’ ಫಸ್ಟ್ ಲುಕ್ ಬಿಡುಗಡೆ

ಬಿಯಾಂಡ್ ವಿಶನ್ಸ್ ಸಿನಿಮಾಸ್ ಲಾಂಛನದಲ್ಲಿ ನಿರ್ಮಿಸಲ್ಪಡುತ್ತಿರುವ ಚಿತ್ರ `ತನುಜಾ’. ಸಿನಿಮಾದ ಫಸ್ಟ್ ಲುಕ್ ಪೋಸ್ಟರ್ ಬಿಡುಗಡೆಯನ್ನು ರಾಜ್ಯದ ಮುಖ್ಯಮಂತ್ರಿ ನೆರವೇರಿಸಿದ್ದಾರೆ. ಈ ಸಂದರ್ಭದಲ್ಲಿ ಆರೋಗ್ಯ ಸಚಿವ ಸುಧಾಕರ್ ಉಪಸ್ಥಿತರಿದ್ದರು.

ಪತ್ರಕರ್ತ ವಿಶ್ವೇಶ್ವರ ಭಟ್ ಅವರ ಲೇಖನವೊಂದರಿಂದ ಪ್ರಭಾವಿತರಾಗಿ ಹರೀಶ್ ಎಂ ಡಿ ಹಳ್ಳಿಯವರು ಈ ಚಿತ್ರವನ್ನು ನಿರ್ದೇಶಿಸಲಿರುವುದಾಗಿ ತಿಳಿಸಿದ್ದಾರೆ. ನೈಜ ಘಟನೆ ಆಧಾರಿತ ಈ ಸಿನಿಮಾದ ಚಿತ್ರೀಕರಣ ಮಾರ್ಚ್ ಎರಡನೇ ವಾರದಲ್ಲಿ ಶುರುವಾಗಲಿದೆ. ಸಿನಿಮಾದ ಚಿತ್ರೀಕರಣವು ಬೆಂಗಳೂರು ಮತ್ತು ಶಿವಮೊಗ್ಗದ ವಿವಿಧ ಪ್ರದೇಶಗಳನ್ನು ಕೇಂದ್ರೀಕರಿಸಿ ನಡೆಯಲಿದೆ. ಐದು ವರ್ಷಗಳ ಹಿಂದೆ ಅಂತರ್ಜಲ’ ಎನ್ನುವ ಸಿನಿಮಾ ನಿರ್ದೇಶಿಸಿದ್ದ ಹರೀಶ್ ಎಂ.ಡಿ ಅದರ ಮೂಲಕ ರಾಜ್ಯ ಪ್ರಶಸ್ತಿಯನ್ನು ಪಡೆದುಕೊಂಡಿದ್ದರು. ಇದು ಅವರ ನಿರ್ದೇಶನದಲ್ಲಿ ಮೂಡಿ ಬರುತ್ತಿರುವ ಎರಡನೆಯ ಸಿನಿಮಾ. ಈ ಹಿಂದೆ ರಿಷಬ್ ಶೆಟ್ಟಿ ನಿರ್ದೇಶನದಸರ್ಕಾರಿ ಹಿ.ಪ್ರಾ. ಶಾಲೆ ಕಾಸರಗೋಡು’ ಸಿನಿಮಾದಲ್ಲಿ ಪ್ರಮುಖ ಪಾತ್ರವನ್ನು ನಿಭಾಯಿಸಿದ್ದ ಸಪ್ತ ಪಾವೂರು ಈ ಸಿನಿಮಾದ ನಾಯಕಿಯಾಗಿದ್ದಾರೆ. ಉಳಿದಂತೆ ತಾರಾಬಳಗದ ಆಯ್ಕೆ ಇನ್ನಷ್ಟೇ ನಡೆಯಬೇಕಿದೆ. ಆರ್ ಚಂದ್ರಶೇಖರ ಪ್ರಸಾದ್ ಸಂಭಾಷಣೆ ಇರುವ ಈ ಸಿನಿಮಾಕ್ಕೆ ಪ್ರದ್ಯೋತನ್ ಸಂಗೀತ ನಿರ್ದೇಶನ ಮತ್ತು ರವೀಂದ್ರನಾಥ್ ಅವರ ಛಾಯಾಗ್ರಹಣ ಇದೆ.

Exit mobile version