ಸಾಹಿತಿ, ಪದ್ಮಶ್ರೀ ಪುರಸ್ಕೃತ ಡಾ.ದೊಡ್ಡರಂಗೇಗೌಡ ಅವರ ಪ್ರಥಮ ನಿರ್ದೇಶನದ ಚಿತ್ರ ಬಿಡುಗಡೆಗೆ ತಯಾರಾಗಿದೆ.
‘ಹಾರುವ ಹಂಸಗಳು’ ಹೆಸರಿನ ಈ ಚಿತ್ರವು ‘ನಮ್ಮ ಫ್ಲಿಕ್ಸ್’ ಮೂಲಕ ಆಗಸ್ಟ್ 12ರಂದು ಬಿಡುಗಡೆಯಾಗಲಿದೆ. ಚಿತ್ರ ಬಿಡುಗಡೆಗೂ ಪೂರ್ವಭಾವಿಯಾಗಿ ಆಯೋಜಿಸಲಾಗಿದ್ದ ಸುದ್ದಿಗೋಷ್ಠಿಯಲ್ಲಿ ಚಿತ್ರತಂಡದ ಸದಸ್ಯರು ತಮ್ಮ ಅನುಭವ ಹಂಚಿಕೊಂಡರು. ಅದಕ್ಕೂ ಮುನ್ನ ಒಂದು ಹಾಡು ಹಾಗೂ ಟ್ರೇಲರ್ ಪ್ರದರ್ಶಿಸಲಾಯಿತು.
“ನಾನು ಒಂದು ದಿನ ಬೆಳಗ್ಗೆ ವಾಯುವಿಹಾರಕ್ಕೆ ಹೊರಟಾಗ ಚಿಕ್ಕಚಿಕ್ಕ ಮಕ್ಕಳ ಕೈಯಲ್ಲಿ ಮೊಬೈಲ್ ಫೋನ್ ನೋಡಿ ಏನಿದು? ಚಿಕ್ಕ ಮಕ್ಕಳು ಸಹ ಬೆಳಗ್ಗೆ, ಸಂಜೆ ಅನ್ನದೇ ಸದಾ ಮೊಬೈಲ್ ಹಿಡಿದಿರುತ್ತಾರೆ. ಇದರಿಂದ ಮಕ್ಕಳಿಗಾಗುವ ಉಪಯೋಗ, ದುರುಪಯೋಗ ಏನು? ಎಂದು ತಮ್ಮ ಸ್ನೇಹಿತರ ತಂಡದ ಮುಂದೆ ಹೇಳಿಕೊಂಡಾಗ, ಅವರೆಲ್ಲಾ ನೀವೆ ಇದರ ಬಗ್ಗೆ ಬರೆಯಿರಿ ಎಂದರು. ಆಗ ಒಂದು ನಾಟಕ ಬರೆದೆ. ಈ ನಾಟಕ ನೋಡಿದ ನನ್ನ ಸ್ನೇಹಿತ ವಾಸುಪ್ರಸಾದ್ ಅವರು ಈ ನಾಟಕವನ್ನು ಚಲನಚಿತ್ರ ಮಾಡೋಣ ಎಂದರು. ಅಷ್ಟೇ ಅಲ್ಲದೇ, ನೀವೇ ನಿರ್ದೇಶನವನ್ನೂ ಮಾಡಬೇಕು ಎಂದರು. ಅವರೆಲ್ಲರ ಒತ್ತಾಯಕ್ಕೆ ಮಣಿದು ನಾನು ಎಪ್ಪತ್ತೈದನೇ ವಯಸ್ಸಿಗೆ ನಿರ್ದೇಶನಕ್ಕೆ ಮುಂದಾದೆ. ಕಥೆ, ಚಿತ್ರಕಥೆ, ಸಂಭಾಷಣೆ ಹಾಗೂ ಎರಡು ಹಾಡುಗಳನ್ನು ನಾನೇ ಬರೆದಿದ್ದಾನೆ. ದುಂಡಿರಾಜ್ ಅವರ ಒಂದು ಹಾಡನ್ನು ಸಹ ಈ ಚಿತ್ರದಲ್ಲಿ ಬಳಸಿಕೊಂಡಿದ್ದೇವೆ” ಎಂದು ದೊಡ್ಡರಂಗೇಗೌಡರು ಮಾಹಿತಿ ನೀಡಿದರು.
ನಿರ್ಮಾಪಕ ವಾಸುಪ್ರಸಾದ್ ಅವರು ಚಿತ್ರ ಉತ್ತಮವಾಗಿ ಮೂಡಿಬಂದಿರುವುದಕ್ಕೆ ಸಂತಸಪಟ್ಟರು. ತಮ್ಮ ಮಗ ಮಾಸ್ಟರ್ ಓಜಸ್ ದೀಪ್ ಸಹ ಈ ಚಿತ್ರದ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾನೆ. ನಾನು ನಿರ್ದೇಶಕರ ಬಳಿ ಚಿತ್ರ ಆರಂಭವಾಗುವ ವೇಳೆ ನನ್ನ ಮಗನ ಬಳಿ ಒಂದು ಪಾತ್ರ ಮಾಡಿಸಿ ಎಂದು ಕೇಳಿದಾಗ ಅವರು ಒಪ್ಪಿ, ಉತ್ತಮ ಪಾತ್ರ ನೀಡಿದ್ದಾರೆ ಎಂದರು.
ಸೆನ್ಸಾರ್ ಮಂಡಳಿ ಸದಸ್ಯರು ಈ ಚಿತ್ರದ ಬಗ್ಗೆ ಮೆಚ್ಚುಗೆ ಮಾತುಗಳಾಡಿದರು. ವಿವಿಧ ಕಡೆ ಅಧ್ಯಪನ ವೃತ್ತಿಯಲ್ಲಿರುವ ಸುಮಾರು ಎಪ್ತತ್ತಕ್ಕು ಹೆಚ್ಚು ಜನರಿಗೆ ಈ ಚಿತ್ರ ತೋರಿಸಿದಾಗ ಅವರು ನೀಡಿದ ಪ್ರತಿಕ್ರಿಯೆ ನಮ್ಮ ಆನಂದವನ್ನು ಇಮ್ಮಡಿಗೊಳಿಸಿತ್ತು ಎಂದರು ನಿರ್ಮಾಪಕರು.
ನಮ್ಮ ಫ್ಲಿಕ್ಸ್ ನಲ್ಲಿ ಈಗಾಗಲೇ ಸಾವಿರ ಟಿಕೆಟ್ ಬುಕ್ ಆಗಿದೆ ಎಂದು ತಿಳಿಸಿದ ವಿಜಯ ಪ್ರಕಾಶ್ ಅವರು ಇದೊಂದು ಉತ್ತಮ ಸಂದೇಶವಿರುವ ಚಿತ್ರ .ಹಾಗಾಗಿ ನಾವು ಯಾವ ಕಮಿಷನ್ ಪಡೆಯದೆ, ಇಡೀ ಹಣವನ್ನು ನಿರ್ಮಾಪಕರಿಗೆ ನೀಡುತ್ತೇವೆ. ಅದನ್ನು ಅವರು ಕೊರೋನ ಬಂದ ಮೇಲೆ ಸಾಕಷ್ಟು ಶಿಕ್ಷಕರು ಹೊಟ್ಟಪಾಡಿಗಾಗಿ ಬೇರೆ ಬೇರೆ ವೃತ್ತಿ ಹಿಡಿದಿದ್ದಾರೆ. ಅಂತಹವರಿಗೆ ಈ ಹಣದಿಂದ ಸಹಾಯ ಮಾಡಲಿ ಎಂದರು.
ಚಿತ್ರದ ಒಂದು ಹಾಡಿಗೆ ಉಪಾಸನ ಮೋಹನ್ ಸಂಗೀತ ನೀಡಿದ್ದರೆ, ಮಿಕ್ಕ ಹಾಡುಗಳಿಗೆ ಸುರೇಶ್ ಸಂಗೀತ ನೀಡಿದ್ದಾರೆ. ಪಿ.ವಿ.ಆರ್ ಸ್ವಾಮಿ ಈ ಚಿತ್ರದ ಛಾಯಾಗ್ರಹಕರು.
ಮಾಸ್ಟರ್ ಓಜಸ್ ದೀಪ್, ಮಾಸ್ಟರ್ ಚಿನ್ಮಯ್, ದೊಡ್ಡರಂಗೇಗೌಡ, ಕುಮಾರಿ ರೂಪ, ಪ್ರಣವ ಮೂರ್ತಿ, ಶಿವಾನಂದ ಮುಂತಾದವರು ಈ ಚಿತ್ರದ ತಾರಾಬಳಗದಲ್ಲಿದ್ದಾರೆ.