ಹೊಂಬಾಳೆ ಫಿಲಂಸ್‌ನ ಬಹುದೊಡ್ಡ ಘೋಷಣೆಯ ನಿರೀಕ್ಷೆಯಲ್ಲಿ ನೆಟ್ಟಿಗರು

ಹೊಂಬಾಳೆ ಫಿಲಂಸ್ ಸ್ಯಾಂಡಲ್‌ವುಡ್‌ನ ಖ್ಯಾತ ಚಿತ್ರ ನಿರ್ಮಾಣ ಸಂಸ್ಥೆಯಾಗಿದ್ದು, ವಿಜಯ್ ಕಿರಗಂದೂರು ಅವರ ಚಿತ್ರ ನಿರ್ಮಾಣ ಸಂಸ್ಥೆ. ಈ ಸಂಸ್ಥೆಯು ಇದೀಗ ಹೊಚ್ಚ ಹೊಸ ಸಾಹಸಕ್ಕೆ ಮುಂದಾಗಿದೆ. ಎಂಟೇ ವರ್ಷಗಳಲ್ಲಿ ಇಡೀ ವಿಶ್ವವೇ ತಿರುಗಿನೋಡುವಂಥ ಸಿನಿಮಾಗಳನ್ನು ನೀಡಿ, ಇದೀಗ ಏಕಕಾಲದಲ್ಲಿ ಹಲವಾರು ಭಾಷೆಗಳಲ್ಲಿ ಇಂಡಿಯನ್ ಸಿನಿಮಾ ನಿರ್ಮಾಣ ಮಾಡಲು ಸಂಸ್ಥೆ ದಾಪುಗಾಲಿಟ್ಟಿದೆ. ಈ ಚಿತ್ರದ ಕುರಿತು ಡಿಸೆಂಬರ್ ೨ರ ಮಧ್ಯಾಹ್ನ ೨.೦೯ಕ್ಕೆ ಸಂಪೂರ್ಣ ಮಾಹಿತಿಯನ್ನು ಹಂಚಿಕೊಳ್ಳಲಿದೆ.
ಹೊಂಬಾಳೆ ಫಿಲಂಸ್‌ನ ಸಿನಿಮಾ ನಿರ್ಮಾಣ ಪಯಣವು ೨೦೧೪ರ ನಿನ್ನಿಂದಲೇ ಸಿನೆಮಾದ ಮೂಲಕ ಆರಂಭವಾಗಿದ್ದು, ಮಾಸ್ಟರ್ ಪೀಸ್, ಕೆಜಿಎಫ್, ಕೆಜಿಎಫ್-೨, ಯುವರತ್ನ ಹೀಗೆ ಹಿಟ್ ಚಿತ್ರಗಳನ್ನು ನಿರ್ಮಿಸುತ್ತಾ ಬಂದಿದೆ. ಒಟ್ಟಾರೆಯಾಗಿ ಏಳು ವರ್ಷಗಳಲ್ಲಿ ಏಳು ಸಿನೆಮಾಗಳನ್ನು ನೀಡಿದ ಕೀರ್ತಿ ಈ ಸಂಸ್ಥೆಗಿದೆ. ಅವುಗಳಲ್ಲಿಯು ಮೂರು ಚಿತ್ರಗಳು ಪ್ಯಾನ್ ಇಂಡಿಯಾ ಚಿತ್ರಗಳಾಗಿದ್ದು, ಇದೀಗ ಈ ಎಲ್ಲಾ ಸಿನೆಮಾಗಳಿಗಿಂತ ಮಹೊನ್ನತ ಪ್ರಾಜೆಕ್ಟ್ ಘೋಷಣೆಗೆ ಈ ಸಂಸ್ಥೆ ಮುಂದಾಗಿದೆ. ಏಕಕಾಲದಲ್ಲಿ ಹಲವಾರು ಭಾಷೆಗಳಲ್ಲಿ ಇಂಡಿಯನ್ ಚಿತ್ರವೊಂದನ್ನು ಘೋಷನೆ ಮಾಡಲಿದೆ ಎಂಬ ಮಾತುಗಳು ಕೇಳಿ ಬರುತ್ತಿದ್ದು, ಡಿಸೆಂಬರ್ ೨ ರಂದು ಮಧ್ಯಾಹ್ನ ಈ ವಿಶೇಷ ಪ್ರಾಜೆಕ್ಟ್ನ ಕುರಿತಾಗಿ ಅಸಲಿಯತ್ತನ್ನು ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಘೋಷಿಸಲಿದೆ. ಯಾವ ಚಿತ್ರ, ನಿರ್ದೇಶಕರು ಯಾರು, ಯಾವ ಪಾತ್ರವರ್ಗವಿರಲಿದೆ ಎಂಬುದಾಗಿ ಒಂದೊಂದೆ ಮಾಹಿತಿಯನ್ನು ಬಿಟ್ಟುಕೊಡಲಿದೆ.
ಪ್ಯಾನ್ ಇಂಡಿಯಾ ಕಾನ್ಸೆಪ್ಟ್ ಸಾಕಷ್ಟು ಬೆಳೆವಣಿಗೆ ಹೊಂದಿದ್ದು, ಕನ್ನಡದ ಕೆಜಿಎಫ್ ಸಿನಿಮಾ ಈಗಾಗಲೇ ದೊಡ್ಡ ಮೈಲಿಗಲ್ಲನ್ನು ಸೃಷ್ಟಿಸಿದೆ. ಅದರ ೧೦ ಪಟ್ಟು ಕೆಜಿಎಫ್ ಚಾಪ್ಟರ್ ೨ನ ಮೇಲೆ ನೆಟ್ಟಿಗರು ನಿರೀಕ್ಷೆಯನ್ನಿಟ್ಟುಕೊಂಡಿರುವುದಂತೂ ನಿಜವಾದ ಸಂಗತಿ. ಇಡೀ ವಿಶ್ವವೇ ಈ ಸಿನಿಮಾಕ್ಕೆ ಕಾಯುತ್ತಿದೆ. ಅದಲ್ಲದೇ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ನಟನೆಯ ಯುವರತ್ನ ಚಿತ್ರವೂ ಕನ್ನಡದ ಜತೆಗೆ ತೆಲುಗಿನಲ್ಲಿ ಬಿಡುಗಡೆ ಆಗುತ್ತಿದೆ. ಹೀಗೆ ಈ ಸಿನಿಮಾಗಳನ್ನು ನಿರ್ಮಾಣ ಮಾಡಿರುವ ಹೊಂಬಾಳೆ ಸಂಸ್ಥೆಯೇ ಇದೀಗ ಇಡೀ ಭಾರತದಲ್ಲಿ ಯಾರೂ ಮಾಡದ ಹೊಸ ಸಾಹಸಕ್ಕೆ ಕೈ ಹಾಕಿದೆ. ಆ ಬಗ್ಗೆ ಹೆಚ್ಚಿನ ಮಾಹಿತಿ ಲಭ್ಯವಾಗಬೇಕೆಂದರೆ, ಇನ್ನೆರಡು ದಿನ ಕಾಯಲೇ ಬೇಕು.

Exit mobile version