ಇನ್ಮುಂದೆ ರಸ್ತೆ ಗುಂಡಿಗಳಿಂದ ಅಪಘಾತವಾದ್ರೆ ಸಿಗುತ್ತೆ ಪರಿಹಾರ

ಬೆಂಗಳೂರು, ಡಿ. 04: ರಾಜ್ಯ ರಾಜಧಾನಿಯಲ್ಲಿ ಹೆಲ್ಮೆಟ್ ಹಾಕಿದ್ದರೇ ದಂಡ ಹಾಕ್ತೀರಿ, ಮಾಸ್ಕ್ ಹಾಕದಿದ್ದರೇ ದಂಡ ಹಾಕ್ತೀರಿ, ಹೀಗೆ ರಸ್ತೆ ಗುಂಡಿ ಸರಿ ಮಾಡದಿರೋ ಬಿಬಿಎಂಪಿ ವಿರುದ್ಧ ಯಾವ ಕ್ರಮ ಕೈಗೊಳ್ಳುತ್ತೀರಿ ಎಂಬ ಸಾರ್ವಜನಿಕರ ಬಹುಕಾಲದ ಪ್ರಶ್ನೆಗೆ ಉತ್ತರ ಸಿಕ್ಕಂತಾಗಿದೆ. ಬೆಂಗಳೂರಿನಲ್ಲಿ ರಸ್ತೆ ಗುಂಡಿಯಿಂದ ಉಂಟಾದಂತ ಅಪಘಾತಗಳಿಗೆ ಬಿಬಿಎಂಪಿ ಪರಿಹಾರ ನೀಡಲು ಮುಂದಾಗಿದೆ.

ರಾಜ್ಯ ಹೈಕೋರ್ಟ್ ಚಾಟಿ ಏಟಿನಿಂದ ಎಚ್ಚೆತ್ತುಕೊಂಡಿರುವಂತ ಬಿಬಿಎಂಪಿ, ಇದೀಗ ರಸ್ತೆ ಗುಂಡಿಗಳಿಂದ ಅಪಘಾತಗೊಂಡು, ಸಂತ್ರಸ್ತರಾದವರಿಗೆ ಪರಿಹಾರ ನೀಡಲು ಮುಂದಾಗಿದೆ. ಇದಕ್ಕಾಗಿ ಬಿಬಿಎಂಪಿ ಮಾರ್ಗಸೂಚಿ ಕೂಡ ಬಿಡುಗಡೆ ಮಾಡಿದ್ದು, ನಗರದಲ್ಲಿ ಪುಟ್ ಪಾತ್ ಗಳ ಎಡವಟ್ಟಿನಿಂದ, ರಸ್ತೆ ಗುಂಡಿಗಳಿಂದ ಆಗುವ ಅಪಘಾತ, ಗಾಯಗೊಂಡವರಿಗೆ, ಸಾವಿಗೀಡಾದ ಕುಟುಂಬದವರಿಗೆ ಪರಿಹಾರ ಸಿಗಲಿದೆ.

ಬೆಂಗಳೂರಿನಲ್ಲಿ ರಸ್ತೆ ಗುಂಡಿಗಳಿಂದ ಅಪಘಾತಗೊಂಡು ಸಂತ್ರಸ್ತರಾದವರು, ಪೊಲೀಸರ ದೂರಿನ ಪ್ರತಿಯೊಂದಿಗೆ ಬಿಬಿಎಂಪಿ ವಲಯ ಆಯುಕ್ತರಿಗೆ ಅಪಘಾತಗೊಂಡ 30 ದಿನಗಳೊಳಗೆ ಪರಿಹಾರಕ್ಕಾಗಿ ಅರ್ಜಿ ಸಲ್ಲಿಸಬೇಕಾಗುತ್ತದೆ. ಹೀಗೆ ಸಲ್ಲಿಸಲಾಗುವಂತ ಅರ್ಜಿಯನ್ನು ಸಾಕ್ಷಿಗಳು, ಪ್ರತ್ಯಕ್ಷ ದರ್ಶಿಗಳ ಹೇಳಿಕೆ, ಸಿಸಿಟಿವಿ ದೃಶ್ಯಾವಳಿ ಆದರಿಸಿ, ಪರಿಹಾರ ನೀಡಲಾಗುತ್ತದೆ.

ನಗರದಲ್ಲಿ ಹಾಳಾದ ರಸ್ತೆಯಲ್ಲಿನ ಗುಂಡಿಗಳಿಂದಾಗಿ ಬಿದ್ದು ಗಾಯ, ಸಾವಿನಂತ ಸಂದರ್ಭದಲ್ಲಿ ಒಂದೊಂದು ರೀತಿಯ ಪರಿಹಾರವನ್ನು ನೀಡಲು ಬಿಬಿಎಂಪಿ ನಿರ್ಧರಿಸಿದೆ. ರಸ್ತೆ ಗುಂಡಿಯಿಂದ ಬಿದ್ದು ಅಪಘಾತಗೊಂಡರೇ ಗರಿಷ್ಠ 15 ಸಾವಿರ, ಮೃತಪಟ್ಟರೇ 3 ಲಕ್ಷ ಪರಿಹಾರ ನೀಡಲಿದೆ. ಅಲ್ಲದೇ ಸಣ್ಣ ಪ್ರಮಾಣದಲ್ಲಿ ಗಾಯಗಳಾಗಿದ್ದರೇ 5 ಸಾವಿರ, ಮೂರು ದಿನಗಳ ಕಾಲ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದರೇ 10 ಸಾವಿರ ಪರಿಹಾರ ನೀಡಲಿದೆ.

ಬಿಬಿಎಂಪಿ ರಸ್ತೆ ಗುಂಡಿಗಳಿಂದಾಗಿ ಅಪಘಾತಗೊಂಡು ಸಂತ್ರಸ್ತರಾದವರು ಅರ್ಜಿ ಸಲ್ಲಿಸಲು 30 ದಿನಗಳ ಗಡುವು ನೀಡಿದೆ. ಒಂದು ವೇಳೆ 30 ದಿನಗಳ ಕಾಲಾವಕಾಶದೊಳಗೆ ನೀವು ಅರ್ಜಿ ಸಲ್ಲಿಸದೇ ಹೋದಲ್ಲಿ, ನಿಮ್ಮ ಅರ್ಜಿಯನ್ನು ತಿರಸ್ಕರಿಸಲಿದೆ. ಅಲ್ಲದೇ ರಸ್ತೆ ಗುಣಮಟ್ಟದ ಬಗ್ಗೆ ಎಚ್ಚರಿಕೆಯ ನಾಮಫಲಕ ಹಾಕಿದ್ದೂ, ನೀವು ಅಜಾಗರೂಕತೆಯಿಂದ ವಾಹನ ಚಾಲನೆ ಮಾಡಿ, ಅಪಘಾತಕ್ಕೆ ಈಡಾಗಿ, ಸಂತ್ರಸ್ತರಾದ್ರೂ ಪರಿಹಾರದ ಹಣ ಸಿಗೋದಿಲ್ಲ.

Exit mobile version