Siliguri: ಇಂದು ಬೆಳಿಗ್ಗೆ ಪಶ್ಚಿಮ ಬಂಗಾಳದ ಡಾರ್ಜಿಲಿಂಗ್ (Darjeeling) ಜಿಲ್ಲೆಯಲ್ಲಿ ಭೀಕರ ರೈಲು ದುರಂತ ಸಂಭವಿಸಿದ್ದು ಮೃತರಾದವರ ಸಂಖ್ಯೆ 8 ರಿಂದ 15ಕ್ಕೆ ಏರಿಕೆ ಆಗಿದೆ. ಸೀಲ್ದಾಹ್ಗೆ ಹೊರಟಿದ್ದ ಪ್ರಯಾಣಿಕ ರೈಲು ಕಾಂಚನಜುಂಗಾ ಎಕ್ಸ್ಪ್ರೆಸ್ಗೆ ಗೂಡ್ಸ್ ರೈಲೊಂದು ಡಿಕ್ಕಿ ಹೊಡೆದ ಪರಿಣಾಮ ಈ ದುರಂತ ಸಂಭವಿಸಿದೆ. ವರದಿಗಳ ಪ್ರಕಾರ ಅಪಘಾತದ ರಭಸಕ್ಕೆ ರೈಲಿನ ಎರಡು ಬೋಗಿಗಳು ಹಳಿಯಿಂದ ಕಳಚಿ ಬೇರೆಡೆ ಎಸೆಯಲ್ಪಟ್ಟಿವೆ. ಈ ಘಟನೆಯಲ್ಲಿ ಮೊದಲಿಗೆ ಐವರು ಸಾವನ್ನಪ್ಪಿ, 30ಕ್ಕೂ ಹೆಚ್ಚು ಪ್ರಯಾಣಿಕರು ಗಾಯಗೊಂಡಿದ್ದಾರೆ ಎಂಬುದಾಗಿ ತಿಳಿದು ಬಂದಿತ್ತು. ಆದರೆ ಇದೀಗ ಬಂದಿರುವ ವರದಿಯ ಪ್ರಕಾರ ಮೃತರ ಸಂಖ್ಯೆ 15ಕ್ಕೆ ಏರಿದೆ 60 ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ.
ಸೀಲ್ದಾಹ್ಗೆ ಹೊರಟಿದ್ದ ಕಂಚನ್ಜುಂಗ್ ಎಕ್ಸ್ಪ್ರೆಸ್ ರೈಲಿಗೆ (Goods Train to Kanchenjunga Express) ಇಂದು ಮುಂಜಾನೆ ನ್ಯೂ ಜಲಪೈಗುರಿ ಬಳಿ ಗೂಡ್ಸ್ ರೈಲು ಡಿಕ್ಕಿ ಹೊಡೆದಿದೆ. ಈ ಕಂಚನ್ಗುಂಜ್ ರೈಲು ತ್ರಿಪುರಾದ ಅಗರ್ತಲಾದಿಂದ ಹೊರಟಿದ್ದು ಸೀಲ್ದಾಹ್ನತ್ತ ಹೋಗುತ್ತಿತ್ತು. ಆದರೆ ನ್ಯೂ ಜಲಫೈಗುರಿ ರೈಲು ನಿಲ್ದಾಣಕ್ಕಿಂತ ಸ್ವಲ್ಪ ಹಿಂದೆ ರಂಗಪಾನಿ ಎಂಬಲ್ಲಿ ಈ ಅಪಘಾತ ಸಂಭವಿಸಿದೆ. ಈ ದುರಂತದಲ್ಲಿ 5 ಜನ ಸ್ಥಳದಲ್ಲೇ ಸಾವನ್ನಪ್ಪಿ ಅನೇಕರು ಗಾಯಗೊಂಡಿದ್ದರು. ಗಾಯಾಳುಗಳು ಹಾಗೂ ಬೋಗಿಯೊಳಗೆ ಸಿಲುಕಿರುವವರ ರಕ್ಷಣಾ ಕಾರ್ಯ ಭರದಿಂದ ಸಾಗಿದೆ ಎಂದು ಸುದ್ದಿ ಸಂಸ್ಥೆ ಎಎನ್ಐ (ANI) ವರದಿ ಮಾಡಿದೆ.
ಇನ್ನು ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ (Mamatha Banerjee) ಅವರು ಟ್ವೀಟ್ನಲ್ಲಿ ಡಾರ್ಜಿಲಿಂಗ್ ಜಿಲ್ಲೆಯ ಫನ್ಸಿಡೆವಾ ಪ್ರದೇಶದಲ್ಲಿ ಸಂಭವಿಸಿದ ದುರಂತ ರೈಲು ಅಪಘಾತದ ಬಗ್ಗೆ ತಿಳಿದು ಆಘಾತವಾಯಿತು,ಎಂದು ಹೇಳಿದ್ದಾರೆ. ಇನ್ನು ಈ ಕುರಿತಾಗಿ ಪ್ರತಿಕ್ರಿಯೆ ನೀಡಿರುವ ಪ್ರಧಾನಿ ಮೋದಿ ಮೃತ ಪಟ್ಟವರ ಕುರಿತು ಸಂತಾಪ ಸೂಚಿಸಿ ಇನ್ನು ಈ ಅಪಘಾತ ಪ್ರಕರಣದಲ್ಲಿ ಮೃತರ ಕುಟುಂಬಕ್ಕೆ ತಲಾ 2 ಲಕ್ಷ ರೂಪಾಯಿ ಪರಿಹಾರವನ್ನು ಘೋಷಣೆ ಮಾಡಿದ್ದಾರೆ.
ಇನ್ನು ಈ ಕುರಿತಾಗಿ ಪ್ರತಿಕ್ರಿಯೆ ನೀಡಿರುವ ಕೇಂದ್ರ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ (Ashwini Vaishnav) ಸಾಮಾಜಿಕ ಮಾಧ್ಯಮದಲ್ಲಿ ಪ್ರತಿಕ್ರಿಯಿಸಿ, ಇದೊಂದು ಎನ್ಎಫ್ಆರ್ ವಲಯದಲ್ಲಿ ದುರದೃಷ್ಟಕರ ಅಪಘಾತ. ರಕ್ಷಣಾ ಕಾರ್ಯಾಚರಣೆಗಳು ನಡೆಯುತ್ತಿವೆ. ರೈಲ್ವೆ, ಎನ್ಡಿಆರ್ಎಫ್ ಮತ್ತು ಎಸ್ಡಿಆರ್ಎಫ್ (SDRF) ನಿಕಟ ಸಮನ್ವಯದಿಂದ ಕಾರ್ಯನಿರ್ವಹಿಸುತ್ತಿವೆ. ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದಿದ್ದಾರೆ .