New Delhi: ಕೇಂದ್ರ ಸಂಸದೀಯ ವ್ಯವಹಾರಗಳ ಸಚಿವ ಪ್ರಲ್ಹಾದ್ ಜೋಶಿ (Prahlad Joshi) ಅವರು, ಬೆಂಗಳೂರಿನಲ್ಲಿರುವ ಎಲ್ಲಾ ಅಂಗಡಿ ಮಳಿಗೆಗಳಲ್ಲಿ ಶೇ 60ರಷ್ಟು ಕನ್ನಡ ನಾಮಫಲಕ ಕಡ್ಡಾಯವಾಗಿ ಇರಬೇಕೆಂಬ ರಾಜ್ಯ ಸರ್ಕಾರದ ಆದೇಶವನ್ನು ಬೆಂಬಲಿಸಿದ್ದಾರೆ. ಕರ್ನಾಟಕದಲ್ಲಿನ (Karnataka) ಅಂಗಡಿಗಳಲ್ಲಿನ ಫಲಕಗಳು ಮುಖ್ಯವಾಗಿ ಸ್ಥಳೀಯ ಭಾಷೆಯಲ್ಲಿಯೇ ಇರಬೇಕು ಎಂದು ಅವರು ಹೇಳಿಕೊಂಡಿದ್ದು, ಈ ವಿಚಾರದಲ್ಲಿ ಹಿಂಸಾಚಾರವನ್ನು ಬೆಂಬಲಿಸುವುದಿಲ್ಲ ಎಂದಿದ್ದಾರೆ.
ನಿನ್ನೆ(ಡಿ.27) ಕನ್ನಡಪರ ಸಂಘಟನೆಗಳು ನಡೆಸಿದ ಪ್ರತಿಭಟನೆ ನಂತರ ಖಾಸಗಿ ಸುದ್ದಿ ವಾಹಿನಿ ಜೊತೆ ಮಾತನಾಡಿದ ಜೋಶಿ ಅವರು ಅಂಗಡಿ ಮಾಲೀಕರು ಇಂಗ್ಲಿಷ್ (English) ನಲ್ಲಿ ಮಾತ್ರವೇ ನಾಮಫಲಕ ಹಾಕುವುದಾಗಿ ಪಟ್ಟು ಹಿಡಿಯುತ್ತಿರುವುದು ಏಕೆ ಎಂದು ಪ್ರಶ್ನಿಸಿದರು. “ಪ್ರತಿಯೊಬ್ಬರೂ ಫಲಕಗಳನ್ನು ಓದುವುದು ಸಾಧ್ಯವಾಗಬೇಕು. ಎಲ್ಲರಿಗೂ ಇಂಗ್ಲಿಷ್ ಓದಲು ಬರುವುದಿಲ್ಲ.
ಕನ್ನಡದ (Kannada) ಜೊತೆಗೆ ಇಂಗ್ಲಿಷ್ ಅಥವಾ ಹಿಂದಿಯಂತಹ ಬೇರೆ ಭಾಷೆಯಲ್ಲಿ ಬರೆಯುವುದರಿಂದ ಸಮಸ್ಯೆ ಏನು? ಇದು ಇಂಗ್ಲೆಂಡ್ ಅಲ್ಲವಲ್ಲ” ಎಂದು ಅವರು ಕಾಂಗ್ರೆಸ್ (Congress) ಎತ್ತಿರುವ ಉಪ- ರಾಷ್ಟ್ರೀಯತೆಯ ವಿಚಾರವು ಬಿಜೆಪಿಗೆ (BJP) ಚಿಂತೆ ಉಂಟುಮಾಡಿದೆಯೇ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದರು. ಈ ವಿಚಾರದಲ್ಲಿ ಹಿಂಸಾಚಾರ ನಡೆದರೆ ಅದನ್ನು ಒಪ್ಪುವುದು ಸಾಧ್ಯವಿಲ್ಲ. ಆದರೆ ಅಂಗಡಿ ಮಾಲೀಕರು ಭಾವನೆಗಳನ್ನು ಮತ್ತು ಅಗತ್ಯತೆಗಳನ್ನು ಅರ್ಥ ಮಾಡಿಕೊಳ್ಳಬೇಕು ಎಂದು ತಿಳಿಸಿದರು.
ಗಡುವು ಮುಗಿಯುವುದಕ್ಕೂ ಮುನ್ನ ಕರ್ನಾಟಕ ರಕ್ಷಣಾ ವೇದಿಕೆ (ಕರವೇ) ರಾಜಧಾನಿಯಲ್ಲಿ ಬುಧವಾರ ನಡೆಸಿದ ಅಭಿಯಾನ, ಉಗ್ರ ಸ್ವರೂಪ ಪಡೆದುಕೊಂಡಿತ್ತು. ರಕ್ಷಣಾ ವೇದಿಕೆ ಕಾರ್ಯಕರ್ತರು ವಿವಿಧ ವಾಣಿಜ್ಯ ಮಳಿಗೆಗಳ ಇಂಗ್ಲಿಷ್ ನಾಮಫಲಕಗಳನ್ನು ಧ್ವಂಸಗೊಳಿಸಿ ಆಕ್ರೋಶ ವ್ಯಕ್ತಪಡಿಸಿದರು.
ಬೆಂಗಳೂರಿ (Bengaluru)ನಲ್ಲಿರುವ ಅಂಗಡಿಗಳಲ್ಲಿ ಶೇ 60ರಷ್ಟು ಕನ್ನಡ ಇರಬೇಕು ಎಂದು ಸರ್ಕಾರ ಆದೇಶ ಹೊರಡಿಸಿದ್ದು, ಫೆಬ್ರವರಿ (February) 28ರ ಒಳಗೆ ಎಲ್ಲಾ ಅಂಗಡಿ ಮಳಿಗೆಗಳಲ್ಲಿಯೂ ಇದು ಕಡ್ಡಾಯವಾಗಿ ಜಾರಿಗೆ ಬರಬೇಕು. ಇದನ್ನು ಪಾಲಿಸದೆ ಇದ್ದರೆ ವ್ಯಾಪಾರ ಪರವಾನಗಿಯನ್ನು ರದ್ದುಗೊಳಿಸಬಹುದು ಅಥವಾ ವಹಿವಾಟಿಗೆ ಕಾನೂನಾತ್ಮಕ ಪರಿಣಾಮಗಳನ್ನು ಎದುರಿಸಬೇಕಾಗಬಹುದು ಎಂದು ಬಿಬಿಎಂಪಿ ಆಯುಕ್ತ ತುಷಾರ್ ಗಿರಿನಾಥ್ (Tushar Girinath) ಎಚ್ಚರಿಕೆ ನೀಡಿದ್ದರು.
ಹಲವಾರು ರಾಜ್ಯಗಳಿಂದ ಜನರು ವ್ಯವಹಾರ ನಡೆಸಲು ಬೆಂಗಳೂರಿಗೆ ಬರುತ್ತಾರೆ. ಆದರೆ ಅವರು ಇಂಗ್ಲಿಷ್ನಲ್ಲಿ ಮಾತ್ರ ನಾಮಫಲಕ ಹಾಕುತ್ತಾರೆ. ಅವರು ಬೆಂಗಳೂರಿನಲ್ಲಿ ಇರಬೇಕು ಎಂದರೆ ತಮ್ಮ ಅಂಗಡಿಗಳಲ್ಲಿ ಕನ್ನಡದಲ್ಲಿ ಫಲಕಗಳನ್ನು ಅಳವಡಿಸಬೇಕು. ಇಲ್ಲದಿದ್ದರೆ ಅವರು ಕರ್ನಾಟಕ ಬಿಟ್ಟು ಬೇರೆ ರಾಜ್ಯಕ್ಕೆ ಹೋಗಲಿ ಎಂದು ಕರವೇ ಅಧ್ಯಕ್ಷ ನಾರಾಯಣ ಗೌಡ (Narayana Gowda) ಆಗ್ರಹಿಸಿದ್ದಾರೆ.
ಭವ್ಯಶ್ರೀ ಆರ್ ಜೆ