ಕಾರ್ಮಿಕರಿಗೆ ಗಿಫ್ಟ್ ಕೊಟ್ಟ ‘ಬಡವ ರಾಸ್ಕಲ್’..!

ಡಾಲಿ ಧನಂಜಯ ನಾಯಕನಾಗಿ ನಟಿಸುತ್ತಿರುವ ‘ಬಡವ ರಾಸ್ಕಲ್’ ಚಿತ್ರದ ಚಿತ್ರೀಕರಣ ಪೂರ್ಣವಾಗಿದೆ. ಶನಿವಾರ ಸಂಜೆ ಬೆಂಗಳೂರಲ್ಲಿ ಕುಂಬಳಕಾಯಿ ಒಡೆಯಲಾಗಿದೆ.ಬೆಂಗಳೂರು, ಮೈಸೂರು ಹಾಗೂ ಪಾಂಡವಪುರದಲ್ಲಿ ಚಿತ್ರೀಕರಣ ನಡೆದಿದೆ.ಕನ್ನಡ ಚಿತ್ರರಂಗದಲ್ಲಿ ಸಾಕಷ್ಟು ಚಿತ್ರಗಳು ನಿರ್ಮಾಣವಾಗುತ್ತದೆ. ಆದರೆ ಚಿತ್ರಕ್ಕಾಗಿ ದುಡಿದ ಎಲ್ಲ ವರ್ಗದವರನ್ನು ನೆನಪಿಸಿಕೊಳ್ಳುವುದು ವಿರಳ.‌

ಆದರೆ ‘ಬಡವ ರಾಸ್ಕಲ್’ ಚಿತ್ರದ ನಿರ್ಮಾಪಕರೂ ಆಗಿರುವ ಡಾಲಿ ಧನಂಜಯ ಅವರು ಚಿತ್ರೀಕರಣದ ಕೊನೆಯ ದಿವಸ ಚಿತ್ರಕ್ಕಾಗಿ ದುಡಿದ ನೂರಕ್ಕೂ ಹೆಚ್ಚು ಕಾರ್ಮಿಕರಿಗೆ ದಿನಬಳಕೆಯ ‌ವಸ್ತುಗಳಾದ ಕುಕ್ಕರ್, ತವ, ಹಾಟ್ ವಾಟರ್ ಬಾಟಲ್ ಮುಂತಾದ ವಸ್ತುಗಳನ್ನು ಉಡುಗೊರೆ ನೀಡಿ, ತಮ್ಮ ಚಿತ್ರದ ಚಿತ್ರೀಕರಣವನ್ನು ಸಂತಸದಿಂದ ಪೂರ್ಣಗೊಳಿಸಿದ್ದಾರೆ.

ಧನಂಜಯ ಅವರ ಈ ಗುಣವನ್ನು ಚಿತ್ರಕ್ಕಾಗಿ ದುಡಿದ ಕಾರ್ಮಿಕರು ಮುಕ್ತಕಂಠದಿಂದ ಶ್ಲಾಘಿಸಿದ್ದಾರೆ.
ಎಲ್ಲಕ್ಕಿಂತ ಮುಖ್ಯವಾಗಿ ಮಧ್ಯಮ ವರ್ಗದ ಜನರ ದಿನನಿತ್ಯದ ಜೀವನದಲ್ಲಿ ನಡೆಯುವ ಘಟನೆಗಳೇ ಈ ಚಿತ್ರದ ಕಥಾಹಂದರ! ಹಾಗಾಗಿ ಸಿನಿಮಾದ ಜೊತೆಗೆ ನಿಜ ಜೀವನದಲ್ಲಿಯೂ ಮಧ್ಯಮ ವರ್ಗದವರ ಕುರಿತಾದ ಕಾಳಜಿ ತೋರುವುದು ತನ್ನ ಕರ್ತವ್ಯ ಎಂದು ಧನಂಜಯ ತಿಳಿದುಕೊಂಡಂತಿದೆ.

ಡಾಲಿ ಪಿಕ್ಚರ್ಸ್ ಲಾಂಛನದಲ್ಲಿ ಸಾವಿತ್ರಮ್ಮ ಅಡವಿಸ್ವಾಮಿ ನಿರ್ಮಿಸುತ್ತಿರುವ `ಬಡವ ರಾಸ್ಕಲ್’ ಚಿತ್ರವನ್ನು
ಶಂಕರ್ ಗುರು ನಿರ್ದೇಶಿಸುತ್ತಿದ್ದು, ಕಥೆ, ಚಿತ್ರಕಥೆ, ಸಂಭಾಷಣೆಯನ್ನು ಅವರೇ ಬರೆದಿದ್ದಾರೆ. ಇದು ಇವರ ಚೊಚ್ಚಲ ನಿರ್ದೇಶನದ ಚಿತ್ರ.
ಡಾಲಿ ಧನಂಜಯ ಹಾಗೂ ಶಂಕರ್ ಗುರು ಈ ಚಿತ್ರದ ಹಾಡುಗಳನ್ನು ಬರೆದಿದ್ದು, ವಾಸುಕಿ ವೈಭವ್ ಸಂಗೀತ ನೀಡಿದ್ದಾರೆ.

ಪ್ರೀತ ಜಯರಾಮನ್ ಛಾಯಾಗ್ರಹಣ, ನಿರಂಜನ್ ದೇವರಮನೆ ಸಂಕಲನ ಹಾಗೂ ವಿನೋದ್ ಸಾಹಸ ನಿರ್ದೇಶನ ಈ ಚಿತ್ರಕ್ಕಿದೆ.
ಧನಂಜಯ ಅವರಿಗೆ ನಾಯಕಿಯಾಗಿ ಅಮೃತ ಅಯ್ಯಂಗಾರ್ ಅಭಿನಯಿಸುತ್ತಿದ್ದಾರೆ. ರಂಗಾಯಣ ರಘು, ತಾರಾ, ಸ್ಪರ್ಶ ರೇಖ, ನಾಗಭೂಷಣ್, ಪೂರ್ಣಚಂದ್ರ ಮುಂತಾದವರು ಈ ಚಿತ್ರದ ತಾರಾಬಳಗದಲ್ಲಿದ್ದಾರೆ‌.

Exit mobile version