ಕ್ಷುಲ್ಲಕ ಕಾರಣಕ್ಕೆ ತಂದೆ-ಮಗನ ಹತ್ಯೆ: ಮೂವರು ಆರೋಪಿಗಳ ಬಂಧನ

ಮೈಸೂರು, ಜ. 09: ಮನೆ ಮುಂದೆ ಓಡಾಡುವಾಗ ವಿನಾಕಾರಣ ತೊಂದರೆ ಕೊಡುತ್ತಿದ್ದರೆಂದು ಅಪ್ಪ, ಮಗನನ್ನು ಕೊಲೆ ಮಾಡಿದ್ದ ಮೂವರನ್ನು ಮೈಸೂರು ದಕ್ಷಿಣ ಠಾಣೆಯ ಪೊಲೀಸರು ಬಂಧಿಸಿದ್ದಾರೆ.

ಮೈಸೂರು ತಾಲೂಕು ಮಂಡಕಳ್ಳಿ ನಿವಾಸಿ ಮರಿಕೋಟೆಗೌಡ (48) ಮತ್ತು ಪುತ್ರ ಸತೀಶ್‌ಕುಮಾರ್(25) ಕೊಲೆಯಾದವರು. ಇದೇ ಗ್ರಾಮದ ನಿವಾಸಿಗಳಾದ ಮಂಜುನಾಥ್(22), ಮಹದೇವಸ್ವಾಮಿ(22) ಮತ್ತು ಸತೀಶ್(22) ಬಂಧಿತರು.

ಸತೀಶ್‌ಕುಮಾರ್ ಡಿ.26ರ ರಾತ್ರಿ ತನ್ನ ಸ್ನೇಹಿತನಿಗೆ ಪ್ಯಾನ್ ಕಾರ್ಡ್ ಕೊಟ್ಟು ಬರಲು ದ್ವಿಚಕ್ರವಾಹನದಲ್ಲಿ ಹೋಗುತ್ತಿದ್ದನು. ಈತನನ್ನು ಹಿಂಬಾಲಿಸಿಕೊಂಡು ಹೋದ ಆರೋಪಿಗಳು, ಬಂಡಿಪಾಳ್ಯ ಎಪಿಎಂಸಿ ಮುಂಭಾಗದ ಪೊದೆ ಬಳಿ ಮೂತ್ರ ವಿಸರ್ಜನೆ ಮಾಡಲು ನಿಂತಿದ್ದ ಸತೀಶ್‌ಕುಮಾರ್ ಮೇಲೆ ದೊಣ್ಣೆಯಿಂದ ಹೊಡೆದು ಕೊಲೆ ಮಾಡಿ, ಪೊದೆಯೊಳಗೆ ಬಿಸಾಡಿದ್ದರು. ಈ ಸಂಬಂದ ಮರಿಕೋಟೆಗೌಡ ತಮ್ಮ ಪುತ್ರ ಸತೀಶ್‌ಕುಮಾರ್ ಕಾಣೆಯಾಗಿರುವುದಾಗಿ ಮೈಸೂರು ದಕ್ಷಿಣ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು.

ಹಾಗೆಯೇ, ಮರಿಕೋಟೆಗೌಡ ಮೈಸೂರಿನ ಮಹದೇವಪುರದಿಂದ ಮಂಡಕಳ್ಳಿಗೆ ಹೋಗುವ ಮಾರ್ಗ ಮಧ್ಯೆಯ ಕಾಲುವೆ ಬಳಿ ಜ.2ರ ಬೆಳಗ್ಗೆ ಅಡ್ಡಗಟ್ಟಿರುವ ಆರೋಪಿಗಳು ದೊಣ್ಣೆಯಿಂದ ತೀವ್ರ ಹಲ್ಲೆ ನಡೆಸಿ ಕೊಲೆ ಮಾಡಿ ಪರಾರಿಯಾಗಿದ್ದರು.

ಈ ಸಂಬಂಧ ಮೈಸೂರು ದಕ್ಷಿಣ ಠಾಣೆಯ ಪೊಲೀಸರು ಕೊಲೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡು, ಶುಕ್ರವಾರ ಬೆಳಗ್ಗೆ ಮೂವರು ಆರೋಪಿಗಳನ್ನು ಬಂಧಿಸಿದ್ದಾರೆ.

ಮರಿಕೋಟೆಗೌಡ ಕೊಲೆ ಪ್ರಕರಣದ ವಿಚಾರಣೆ ನಡೆಸಿದಾಗ ಆರೋಪಿಗಳು ಮರಿಕೋಟೆಗೌಡ ಪುತ್ರ ಸತೀಶ್‌ಕುಮಾರ್‌ನನ್ನು ಸಹ ಕೊಲೆ ಮಾಡಿದ್ದ ವಿಚಾರವನ್ನು ಬಾಯಿಬಿಟ್ಟಿದ್ದಾರೆ.

ಆರೋಪಿಗಳು ನೀಡಿದ ಮಾಹಿತಿ ಮೇರೆಗೆ ಬಂಡಿಪಾಳ್ಯ ಎಪಿಎಂಸಿ ಮುಂಭಾಗದಲ್ಲಿ ಪೊದೆಯಲ್ಲಿದ್ದ ಸತೀಶ್‌ಕುಮಾರ್ ಮೃತದೇಹವನ್ನು ಪೊಲೀಸರು ಶವಾಗಾರಕ್ಕೆ ಸಾಗಿಸಿದ್ದಾರೆ.

Exit mobile version