Bengaluru: ಲೋಕಸಭೆ ಚುನಾವಣೆಗೆ ಅಭ್ಯರ್ಥಿಗಳನ್ನು ಆಯ್ಕೆ ಮಾಡುವುದು ಕಾಂಗ್ರೆಸ್ (Lok Sabha Election 2024) ಮತ್ತು ಬಿಜೆಪಿ ಎರಡಕ್ಕೂ ಸವಾಲಾಗಿ ಪರಿಣಮಿಸಿದ್ದು,

ಬಿಜೆಪಿಗೆ ಹಲವು ಕ್ಷೇತ್ರಗಳಲ್ಲಿ ಹೊಸಬರನ್ನು ಹುಡುಕುವ ಅವಶ್ಯಕತೆಯಿದೆ. ಕಾಂಗ್ರೆಸ್ಗೆ ಬಹುತೇಕ ಕಡೆ ಅಭ್ಯರ್ಥಿಗಳ ಕೊರತೆ ಇದ್ದು, ವಿಧಾನಸಭೆ ಚುನಾವಣೆಯಲ್ಲಿ ಅಭೂತಪೂರ್ವ ಗೆಲುವು
ದಾಖಲಿಸಿರುವ ಕಾಂಗ್ರೆಸ್ ಇದೇ ಸರಣಿಯನ್ನು ಪಾರ್ಲಿಮೆಂಟ್ ಎಲೆಕ್ಷನ್ಗೆ ವಿಸ್ತರಿಸುವ ಉತ್ಸಾಹದಲ್ಲಿದೆ. ಕನಿಷ್ಠ 20 ಸ್ಥಾನವನ್ನಾದರೂ ಗೆಲ್ಲಬೇಕು ಎಂಬುದು ಕಾಂಗ್ರೆಸ್ ಪಕ್ಷದ ಆಲೋಚನೆಯಾಗಿದೆ.
ಈ ವಿಚಾರಕ್ಕಾಗಿ ಈಗಾಗಲೇ ಹೊರಗಡೆ ಸದ್ದುಗದ್ದಲ (Lok Sabha Election 2024) ಆರಂಭವಾಗಿದೆ.
ಲೋಕಸಭೆ ಚುನಾವಣೆಗೆ ಕೆಲವೇ ತಿಂಗಳು ಮಾತ್ರ ಇದ್ದು, ಈ ಹಿನ್ನೆಲೆ ಕರ್ನಾಟಕದಲ್ಲಿ ಕಾಂಗ್ರೆಸ್ ಹಾಗೂ ಬಿಜೆಪಿ ಭಾರೀ ಸಿದ್ಧತೆ ನಡೆಸುತ್ತಿವೆ. ರಾಜ್ಯದಲ್ಲಿ ಬಿಜೆಪಿ ಎಲೆಕ್ಷನ್ ಅಲ್ಲಿ ಸೋತ ನಂತರ
ಅಸೆಂಬ್ಲಿಗೆ ನಾವಿಕನೇ ಇಲ್ಲದಂತಾಗಿದ್ದು, ಪ್ರಧಾನಿ ನರೇಂದ್ರ ಮೋದಿ ವರ್ಚಸ್ಸಿನ ಮೇಲೆ ಸಂಸತ್ ಚುನಾವಣೆ ಹೇಗೋ ದಾಟಿಕೊಂಡು ಹೋಗುತ್ತದೆ ಎನ್ನುವ ಬಲವಾದ ನಂಬಿಕೆ ಬಿಜೆಪಿಯ ಮುಖಂಡರಿಗೆ
ಇದೆ. ಆದರೆ ಕೆಲ ಕ್ಷೇತ್ರಗಳಲ್ಲಿ ಹಾಲಿ ಸಂಸದರಿಗೆ ವಯಸ್ಸಾಗಿದ್ದು, ಇನ್ನು ಕೆಲವು ಕ್ಷೇತ್ರಗಳಲ್ಲಿ ಜನತಾ ದರ್ಶನವನ್ನೇ ಮಾಡದ ಸಂಸದರನ್ನು ವಾನಪ್ರಸ್ಥಾಶ್ರಮಕ್ಕೆ ಕಳುಹಿಸಬೇಕು ಎಂಬ ಆಕ್ರೋಶವು ಇದೆ.
ಇನ್ನು ರಾಜ್ಯದಲ್ಲಿ ಪ್ರಬಲ ಪಕ್ಷವಾಗಿ ಕಾಂಗ್ರೆಸ್ ಇರುವುದರಿಂದ ಲೋಕಸಭೆ ಚುನಾವಣೆ ಬಿರುಸಿನಿಂದ ಕೂಡಿರಲಿದೆ ಎಂಬ ಸುಳಿವು ಸಿಕ್ಕಿದ್ದು ಇದು ಬಿಜೆಪಿ ಪಕ್ಷಕ್ಕೆ ಸವಾಲಾಗಿದೆ. ಕೆಲ ಲೋಕಸಭಾ
ಕ್ಷೇತ್ರಗಳಲ್ಲಿ ಕಾಂಗ್ರೆಸ್ ಟಿಕೆಟ್ಗಾಗಿ ಭಾರೀ ಲಾಬಿ ಈಗಲೇ ಪ್ರಾರಂಭವಾಗಿದೆ. ಇನ್ನು ಕೆಲವು ಕ್ಷೇತ್ರಗಳಲ್ಲಿ ಅಭ್ಯರ್ಥಿಗಳ ಕೊರತೆಯೂ ಎದ್ದು ಕಾಣುತ್ತಿದೆ. ಆದ್ರೆ ಶತಾಯ ಗತಾಯ 20 ಕ್ಷೇತ್ರಗಳಲ್ಲಿ
ಗೆಲುವು ಸಾಧಿಸಬೇಕೆಂಬ ಹಠ ತೊಟ್ಟ ಕೆಪಿಸಿಸಿ ಅಧ್ಯಕ್ಷ ಹಾಗೂ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರು ಅದಕ್ಕಾಗಿ ಭರ್ಜರಿ ಸ್ಟ್ರಾಟರ್ಜಿ ಮಾಡುತ್ತಿದ್ದಾರೆ.

ಬಿಜೆಪಿ ಮುಂದಿನ ಸವಾಲು!
ಬಿಜೆಪಿಯಲ್ಲಿ ಹಿರಿಯ ಸಂಸದರಿಗೆ ವಿಶ್ರಾಂತಿ ನೀಡುವ ಬಗ್ಗೆ ಈಗಾಗಲೇ ಸಂದೇಶ ಹೋಗಿದ್ದು, ಆದರೆ ಸತತ ಗೆಲುವು ಕಾಣುತ್ತಿದ್ದ ಕ್ಷೇತ್ರಗಳಲ್ಲಿ ಸಮರ್ಥರಾದ ಹೊಸಬರನ್ನು ಗುರುತಿಸುವುದು
ಕಷ್ಟವಾಗುತ್ತಿದೆ. ಅಲ್ಲದೆ ಪರ್ಯಾಯ ನಾಯಕರ ಬೆಳವಣಿಗೆಗೆ ಅವಕಾಶ ನೀಡದಿರುವುದೇ ಈ ಪರಿಸ್ಥಿತಿಗೆ ಕಾರಣ. ಮತ್ತು ಬೆಂಗಳೂರು ಉತ್ತರ, ದಾವಣಗೆರೆ, ತುಮಕೂರು, ಚಾಮರಾಜನಗರ,
ವಿಜಯಪುರ ಕ್ಷೇತ್ರದಲ್ಲಿನ ಹಾಲಿ ಸಂಸದರು ಹಿರಿಯರಾದ ಕಾರಣ ಬೇರೆಯವರಿಗೆ ಅವಕಾಶ ನೀಡುವ ನಿರೀಕ್ಷೆಯಿದ್ದು, ಆದರೆ ಅದು ಯಾರು ಎಂಬುದು ಖಚಿತವಾಗಿಲ್ಲ.ಇನ್ನು ಉತ್ತರ ಕನ್ನಡ,
ದಕ್ಷಿಣ ಕನ್ನಡದಲ್ಲೂ ಬದಲಾವಣೆಯ ಪ್ರಸ್ತಾಪವಿದ್ದು, ಚಿಕ್ಕಬಳ್ಳಾಪುರದ ಸಂಸದರು ಪುನಃ ಸ್ಪರ್ಧಿಸುವುದಿಲ್ಲವೆಂದು ಈಗಾಗಲೇ ಘೋಷಿಸಿದ್ದಾರೆ. ಹಾಗೂ ಬೆಂಗಳೂರು, ಹಾವೇರಿ, ಕೊಪ್ಪಳ
ಸೆಂಟ್ರಲ್ನ ಸಂಸದರಿಗೂ ಆಸಕ್ತಿಯಿಲ್ಲ ಎಂಬ ಮಾತು ಕೇಳಿ ಬರುತ್ತಿದೆ.
ಕಾಂಗ್ರೆಸ್ನ ವಾಸ್ತವಿಕತೆ!
1999ರ ಬಳಿಕ ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ರಾಜ್ಯದಲ್ಲಿ ಡಬಲ್ ಡಿಜಿಟ್ ತಲುಪಿರಲಿಲ್ಲ. ಹಾಗಾಗಿ 1999ರಲ್ಲಿ ವಾಜಪೇಯಿ ನೇತೃತ್ವದ ಎನ್ಡಿಎ ಸರಕಾರದ ಅಲೆಯ ನಡುವೆಯೂ ಕಾಂಗ್ರೆಸ್ಗೆ
18 ಸ್ಥಾನಗಳು ಬಂದಿದ್ದವು. ಆ ವರ್ಷ ವಿಧಾನಸಭೆ, ಲೋಕಸಭೆಗೆ ಏಕಕಾಲದಲ್ಲಿ ಚುನಾವಣೆ ನಡೆದಿತ್ತು. ಮತ್ತು ಕಾಂಗ್ರೆಸ್ ಸಾರಥ್ಯವನ್ನು ವಹಿಸಿಕೊಂಡಿದ್ದ ಎಸ್ಎಂ ಕೃಷ್ಣ ಅವರು ಪಕ್ಷಕ್ಕೆ ಗೆಲುವನ್ನು
ತಂದುಕೊಟ್ಟು ಯಶಸ್ವಿಯನ್ನಾಗಿಸಿದ್ದರು. ಆದರೆ 2004ರಲ್ಲಿ ವಿಧಾನಸಭೆ, ಲೋಕಸಭೆಗೆ ಒಟ್ಟಿಗೆ ನಡೆದ ಚುನಾವಣೆಯಲ್ಲಿ ಕಾಂಗ್ರೆಸ್ ಹಿನ್ನಡೆ ಅನುಭವಿಸಿತ್ತು. ತದ ನಂತರ ಬಿಜೆಪಿ 18 ಸಂಸದರನ್ನು
ದಿಲ್ಲಿಗೆ ಕಳುಹಿಸಿತ್ತು. ಅಲ್ಲದೆ 2009, 2014 ಹಾಗೂ 2019ರಲ್ಲೂ ರಾಜ್ಯದಲ್ಲಿ ಸಂಸತ್ ಚುನಾವಣೆಯಲ್ಲಿ ಬಿಜೆಪಿ ಮುನ್ನಡೆ ಸಾಧಿಸಿತ್ತು. ಈ ಹಿನ್ನೆಲೆಯಲ್ಲಿ ಕಳೆದ ಒಂದೂವರೆ ದಶಕದಿಂದಲೂ
ಲೋಕಸಭೆ ಚುನಾವಣೆ ವಿಚಾರದಲ್ಲಿ ಕಾಂಗ್ರೆಸ್ ಸರ್ಕಾರವು ಇಳಿಮುಖವಾಗಿ ಚಲಿಸುತ್ತಿದೆ.
ಪ್ರಬಲ ಅಭ್ಯರ್ಥಿಗಳು ಸ್ಪರ್ಧೆಗೆ ಇನ್ನು ತಯಾರಾಗಿಲ್ಲ !
ಇದರ ನಡುವೆ ಸಂಸತ್ ಚುನಾವಣೆಗೆ ಸ್ಪರ್ಧಿಸಬಲ್ಲ ಪ್ರಬಲ ಅಭ್ಯರ್ಥಿಗಳೂ ತಯಾರಾಗಿಲ್ಲದ ಕಾರಣ ಕೋಲಾರದಲ್ಲಿ ಸತತ 7 ಬಾರಿ ಗೆಲುವು ದಾಖಲಿಸಿದ್ದ ಕೆಎಚ್ ಮುನಿಯಪ್ಪ ಕಳೆದ ಬಾರಿ
ಸೋಲು ಕಂಡಿದ್ದರು. ಈಗ ಸಿದ್ದರಾಮಯ್ಯನವರ ಸಂಪುಟದ ಸದಸ್ಯರು, ಶಾಸಕರು, ಹಾಗೂ ಮುನಿಯಪ್ಪ ಅವರು ಲೋಕಸಭೆ ಅಖಾಡಕ್ಕೆ ಇಳಿಯಲಾರರು. ಹಾಗಾಗಿ ಮತ್ತೊಂದೆಡೆ ಸೋಲಿಲ್ಲದ
ಸರದಾರರೆಂದೇ ಖ್ಯಾತರಾಗಿದ್ದ ಮಲ್ಲಿಕಾರ್ಜುನ ಖರ್ಗೆ ಅವರೂ 2019ರಲ್ಲಿ ಜನರ ಪ್ರೀತಿಗೆ ಪಾತ್ರರಾಗಿದ್ದು, ಖರ್ಗೆ ಈಗ ಎಐಸಿಸಿ ಅಧ್ಯಕ್ಷರಾಗಿ ದೊಡ್ಡ ಜವಾಬ್ದಾರಿಯನ್ನು ನಿಭಾಯಿಸುತ್ತಿದ್ದಾರೆ.
ಇನ್ನು ಅವರ ರಾಜ್ಯಸಭೆ ಸದಸ್ಯತ್ವದ ಅವಧಿ ಸುಮಾರು 3 ವರ್ಷ ಬಾಕಿಯಿದ್ದು, ಕಾರಣಾಂತರಗಳಿಂದ ಅವರೂ ಸ್ಪರ್ಧಿಸುವುದನ್ನು ಸ್ಪಷ್ಟಪಡಿಸಿಲ್ಲ. ಮತ್ತು ಪಕ್ಷದ ಅಧ್ಯಕ್ಷರಾಗಿ ದೇಶಾದ್ಯಂತ ಪ್ರವಾಸ
ಮಾಡಬೇಕಿರುವ ಖರ್ಗೆ ವೈಯಕ್ತಿಕವಾಗಿ ಸ್ಪರ್ಧೆಯಿಂದ ದೂರವಿರುವ ಸಾಧ್ಯತೆ ಇದ್ದು, ಇದನ್ನು ತಳ್ಳಿ ಹಾಕುವಂತಿಲ್ಲ ಎಂಬ ಮಾತಿದೆ.
ರಾಜಧಾನಿ ಬೆಂಗಳೂರಿನ 3 ಕ್ಷೇತ್ರಗಳ ಪೈಕಿ ಬೆಂಗಳೂರು ಉತ್ತರಕ್ಕೆ ಹಾಲಿ ಸಚಿವರೊಬ್ಬರ ಹೆಸರು ಸೇರಿ ಕೆಲವರ ಹೆಸರು ಕೇಳಿ ಬರುತ್ತಿದ್ದು, ಆದರೆ ಅದು ಸ್ಪಷ್ಟವಾಗಿಲ್ಲ. ಒಟ್ಟಾರೆ
ಚಾಮರಾಜನಗರದಿಂದ ಬೀದರ್ವರೆಗೂ ಕಾಂಗ್ರೆಸ್ಗೆ ಸೂಕ್ತ ಅಭ್ಯರ್ಥಿಗಳ ಕೊರತೆ ಇದ್ದು ,ಈ ಕಾರಣದಿಂದ ಬೇರೆ ಪಕ್ಷಗಳ ಮುಖಂಡರಿಗೆ ಗಾಳ ಹಾಕುವ ಯತ್ನ ಹಾಗೂ ಕೆಲ ಸಚಿವರನ್ನು
ಕಣಕ್ಕಿಳಿಸಬೇಕೆಂಬ ಪ್ರಸ್ತಾಪವೂ ಪಕ್ಷದ ಮುಂದಿದೆ.
- ಮೇಘಾ ಮನೋಹರ ಕಂಪು