ಪತಿ ರಾಮು ಅಗಲಿಕೆ ನೋವು ತೋಡಿಕೊಂಡ ಮಾಲಾಶ್ರೀ

ಬೆಂಗಳೂರು, ಮೇ. 10: ನಟಿ ಮಾಲಾಶ್ರೀ ಅವರು ತಮ್ಮ ಪತಿ, ನಿರ್ಮಾಪಕ ರಾಮು ಅವರು ಅಗಲಿದ ನಂತರ ಮೊದಲ ಬಾರಿಗೆ ತಮ್ಮ ಮನದಾಳದ ಮಾತನ್ನು ಅಭಿಮಾನಿಗಳೊಂದಿಗೆ ಹಂಚಿಕೊಂಡಿದ್ದಾರೆ.

ಸಾಮಾಜಿಕ ಜಾಲತಾಣಗಳಲ್ಲಿ ತಮ್ಮ ಅಭಿಮಾನಿಗಳಿಗೆ, ಸಿನಿಮಾ ರಂಗದ ಸ್ನೇಹಿತರಿಗೆ ಪತ್ರ ಬರೆದಿರುವ ಅವರು ಕಷ್ಟದ ಸಮಯದಲ್ಲಿ ಬೆನ್ನಿಗೆ ನಿಂತಿದ್ದಕ್ಕೆ ಧನ್ಯವಾದ ಹೇಳಿದ್ದಾರೆ.

ಪತಿ ರಾಮು ಸಾವಿನ ಹಿನ್ನೆಲೆಯಲ್ಲಿ ನಾನು ಮತ್ತು ನಮ್ಮ ಕುಟುಂಬ ಕಳೆದ 12 ದಿನಗಳಿಂದ ನೋವಿನಲ್ಲಿದ್ದೇವೆ. ಮುಂದೆ ಏನು ಮಾಡಬೇಕು ಎಂಬುದು ಮಸುಕು ಮಸಕಾಗಿ ಕಾಣುತ್ತಿದೆ. ಅವರು ಯಾವಾಗಲೂ ನಮ್ಮ ಬೆನ್ನಿಗೆ ನಿಂತಿದ್ದರು. ಮುಂದೇನು ಮಾಡಬೇಕು ಎಂದು ಗೊತ್ತಾಗದಿದ್ದಾಗ ಬೆಳಕಿನಂತೆ ಬಂದು ಮಾರ್ಗದರ್ಶನ ಮಾಡುತ್ತಿದ್ದರು.

ಇಂತಹ ಕರಾಳ ದಿನಗಳಲ್ಲಿ ಸಿನಿಮಾ ರಂಗದ ಸ್ನೇಹಿತರು, ಅಭಿಮಾನಿಗಳು ರಾಮು ಅವರ ಬಗ್ಗೆ ತೋರಿದ ಪ್ರೀತಿಗೆ ಅಪಾರ ಧನ್ಯವಾದಗಳು.

ರಾಮು ಅವರ ಆರೋಗ್ಯ ಏರುಪೇರಾದಾಗ ಅವರು ಗುಣಮುಖರಾಗುವಂತೆ ಪ್ರಾರ್ಥಿಸಿದ ಅವರ ಅಭಿಮಾನಿಗಳು, ಸ್ನೇಹಿತರು, ಮಾಧ್ಯಮದವರು ಹಾಗೂ ಚಿತ್ರರಂಗದವರಿಗೆ ನಾನು ಧನ್ಯವಾದ ಹೇಳುತ್ತೇನೆ.

ಇಂತಿ
ಮಾಲಾಶ್ರೀ ಮತ್ತು ಕುಟುಂಬ

Exit mobile version