ಮತ್ತೆ ಹೊಸಬರ ಚಿತ್ರದಲ್ಲಿ ಶಿವಣ್ಣ!

ಹೊಸ ನಿರ್ದೇಶಕರ ಹೊಸ ರೀತಿಯ ಪ್ರಯೋಗಗಳಿಗೆ ಸದಾ ಸಿದ್ಧರಾಗಿರುವ ನಟನೆಂದೇ ಶಿವರಾಜ್ ಕುಮಾರ್ ಗುರುತಿಸಿಕೊಳ್ಳುತ್ತಿರುತ್ತಾರೆ. ಅದರಲ್ಲಿ ಗೆಲುವನ್ನು ಸಾಬೀತು ಪಡಿಸುವ ಮೂಲಕ ಹೊಸ ತಲೆಮಾರಿಗೆ ಉತ್ಸಾಹ ತುಂಬಿಸುವಲ್ಲಿ ಅವರು ಯಶಸ್ವಿಯಾಗಿದ್ದಾರೆ. ಅಂಥದೇ ಹೊಸ ಪ್ರಯತ್ನವೇ ಕೊಟ್ರೇಶ್ ಚಪ್ಪರದಹಳ್ಳಿ ನಿರ್ದೇಶನದ ಹೊಸ ಚಿತ್ರ.

ಎಆರ್‌ಕೆ ಪ್ರೊಡಕ್ಷನ್ಸ್ ಚೌಧರಿ ಅವರು ನಿರ್ಮಿಸುತ್ತಿರುವ ನೂತನ ಚಿತ್ರದಲ್ಲಿ ಕರುನಾಡ ಚಕ್ರವರ್ತಿ ಶಿವರಾಜಕುಮಾರ್ ನಾಯಕರಾಗಿದ್ದಾರೆ. ಕೊಟ್ರೇಶ್ ಚಪ್ಪರದಹಳ್ಳಿ ಈ ಚಿತ್ರವನ್ನು ನಿರ್ದೇಶಿಸುತ್ತಿದ್ದಾರೆ. ಎ.ಹರ್ಷ, ಯೋಗಿ
ಜಿ ರಾಜ್ ಅವರ ಬಳಿ ಸಹಾಯಕ ನಿರ್ದೇಶಕರಾಗಿ ಕಾರ್ಯನಿರ್ವಹಿಸಿರುವ ಕೊಟ್ರೇಶ್ ಅವರಿಗೆ ಇದು ಚೊಚ್ಚಲ ನಿರ್ದೇಶನದ ಚಿತ್ರ. ಸಾಮಾಜಿಕ ಕಾಳಜಿಯಿರುವ ಈ ಚಿತ್ರದ ಕಥೆಯನ್ನು ಶಿವರಾಜಕುಮಾರ್ ಅವರ ಬಳಿ ಹೇಳಿದಾಗ, ಕಥೆ ತುಂಬಾ ಚೆನ್ನಾಗಿದೆ ಎಂದು ಚಿತ್ರದಲ್ಲಿ ನಟಿಸಲು ಒಪ್ಪಿಕೊಂಡಿದ್ದಾರೆ.

“ಶಿವಣ್ಣ ಹೊಸಬರಿಗೆ ನೀಡುವ ಪ್ರೋತ್ಸಾಹ ನಿಜಕ್ಕೂ ನನ್ನಂಥಹ ನೂತನ ನಿರ್ದೇಶಕರಿಗೆ ಕಾರ್ಯ ನಿರ್ವಹಿಸಲು ‌ಮತ್ತಷ್ಟು ಸ್ಪೂರ್ತಿದಾಯಕ” ಎನ್ನುತ್ತಾರೆ ಕೊಟ್ರೇಶ್ ಚಪ್ಪರದಹಳ್ಳಿ. ಈಗಷ್ಟೇ ಶಿವರಾಜಕುಮಾರ್ ಅವರು ನಾಯಕರಾಗಿ ನಟಿಸಲು ಒಪ್ಪಿಗೆ ನೀಡಿದ್ದು, ಇನ್ನು ಮುಂದೆ ಉಳಿದ ತಾರಾಬಳಗ ಹಾಗೂ ತಾಂತ್ರಿಕ ವರ್ಗದ ಆಯ್ಕೆ ಪ್ರಾರಂಭಿಸುವುದಾಗಿ ನಿರ್ದೇಶಕರು ತಿಳಿಸಿದ್ದಾರೆ.

Exit mobile version