ಅನ್ಯಕೋಮಿನ ಪುರುಷರ ಜೊತೆ ಲಾಡ್ಜ್‌ನಲ್ಲಿ ತಂಗಿದ ಮಹಿಳೆ ಮೇಲೆ ಹಿಂದೂ ಜಾಗರಣ ವೇದಿಕೆ ಕಾರ್ಯಕರ್ತರಿಂದ ಹಲ್ಲೆ

ಪುತ್ತೂರು ಸೆ 22 : ಅನ್ಯಕೋಮಿನ ಪುರುಷರೊಂದಿಗೆ ಮಹಿಳೆಯೊಬ್ಬರು ಲಾಡ್ಜ್​ನಲ್ಲಿ ತಂಗಿದ್ದ ಹಿನ್ನಲೆಯಲ್ಲಿ ಹಿಂದೂ ಜಾಗರಣ ವೇದಿಕೆ ಕಾರ್ಯಕರ್ತರು ಲಾಡ್ಜ್​ ಮೇಲೆ ದಾಳಿ ನಡೆಸಿ ಮಹಿಳೆ ಹಾಗೂ ಆಕೆಯ ಜೊತೆಗಿದ್ದವರ ಮೇಲೆ ಹಲ್ಲೆ ನಡೆಸಿರುವ ಘಟನೆ ಪುತ್ತೂರಿನಲ್ಲಿ ನಡೆದಿದೆ

ಪುತ್ತೂರಿನ ಬೈಪಾಸ್ ರಸ್ತೆಯಲ್ಲಿರುವ ಲಾಡ್ಜ್​ನಲ್ಲಿ ಎರಡು ದಿನಗಳಿಂದ ಬೆಂಗಳೂರು ಮೂಲದ ಮಹಿಳೆ ತಂಗಿದ್ದರು. ಸೆಪ್ಟಂಬರ್ 17 ರಂದು ಬೆಂಗಳೂರಿನಿಂದ ಪುತ್ತೂರಿಗೆ ಬಂದಿದ್ದು, ಸೆಪ್ಟಂಬರ್ 18 ರಂದು ಪುತ್ತೂರಿಗೆ ತಲುಪಿ ಲಾಡ್ಜ್​ನಲ್ಲಿ ತಂಗಿದ್ದರು. ಪುತ್ತೂರು ನಗರ ಪೊಲೀಸರ ವಶದಲ್ಲಿದ್ದ ತನ್ನ ಕಾರನ್ನು ಬಿಡಿಸಿಕೊಳ್ಳುವ ಹಿನ್ನೆಲೆಯಲ್ಲಿ ಬೆಂಗಳೂರಿನಿಂದ ಪುತ್ತೂರಿಗೆ ಬಂದಿದ್ದ ಈ ಮಹಿಳೆಯ ಜೊತೆ ಆಕೆಯೊಂದಿಗೆ ಕಾರ್ಯ ನಿರ್ವಹಿಸುತ್ತಿರುವ ಉಳ್ಳಾಲ ಮತ್ತು ಬೆಂಗಳೂರಿನ ಕೊಟ್ಟಿಗೇರಿ ನಿವಾಸಿಗಳಿಬ್ಬರು ಸಹ ಆಗಮಿಸಿದ್ದರು. ಮಹಿಳೆಯ ಜೊತೆ ಅನ್ಯಕೋಮಿನ ಪುರುಷರು ಲಾಡ್ಜ್​ನಲ್ಲಿ ತಂಗಿದ್ದಾರೆ ಎನ್ನುವ ಮಾಹಿತಿ ಪಡೆದ ಹಿಂದೂ ಜಾಗರಣ ವೇದಿಕೆಯ ಕಾರ್ಯಕರ್ತರು ಸೆಪ್ಟಂಬರ್ 20 ರಂದು ತಡರಾತ್ರಿ ಲಾಡ್ಜ್​ ಮೇಲೆ ದಾಳಿ ಮಾಡಿ ಮಹಿಳೆ ಹಾಗೂ ಆಕೆಯ ಜೊತೆಗಿದ್ದವರಿಗೆ ಅವಾಚ್ಯ ಶಬ್ದಗಳಿಂದ ನಿಂದಿಸಿ ಹಲ್ಲೆ ಮಾಡಿದ್ದಾರೆ.

ಸುಮಾರು 10 ರಿಂದ 15 ಜನರಿದ್ದ ಗುಂಪು ಲಾಡ್ಜ್ ಮುಂಭಾಗದಲ್ಲಿ ಸೇರಿದ್ದು, ಇದರಲ್ಲಿ ನಾಲ್ಕೈದು ಜನರ ಗುಂಪು ಲಾಡ್ಜ್​ಗೆ ನುಗ್ಗಿ ಮಹಿಳೆ ಹಾಗೂ ಆಕೆಯ ಸಹೋದ್ಯೋಗಿಗಳು ತಂಗಿದ್ದ ರೂಂಗೆ ನುಗ್ಗಿದ್ದಾರೆ. ಈ ಸಂದರ್ಭದಲ್ಲಿ ಸಂಘಟನೆಯ ಕಾರ್ಯಕರ್ತರು ಪೊಲೀಸರಿಗೂ ಮಾಹಿತಿ ನೀಡಿದ್ದು, ಪುತ್ತೂರು ಡಿವೈಎಸ್ಪಿ ಗಾನ ಕುಮಾರ್ ನೇತೃತ್ವದ ತಂಡ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಅಲ್ಲದೆ ಮಹಿಳೆ ಹಾಗೂ ಆಕೆಯ ಜೊತೆಗಿದ್ದವರನ್ನು ಪೊಲೀಸ್ ಠಾಣೆಗೆ ಕರೆಸಿ ತನಿಖೆ ನಡೆಸಿದ್ದಾರೆ. ಘಟನೆಗೆ ಸಂಬಂಧಿಸಿದಂತೆ ಮಹಿಳೆ ಪುತ್ತೂರು ನಗರ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದು, ಈ ಹಿನ್ನಲೆಯಲ್ಲಿ ಅವರ ಹಲ್ಲೆ ಮಾಡಿದ ಇಬ್ಬರನ್ನು ಪೊಲೀಸರು ಬಂಧಿಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

Exit mobile version