ಹಾಡಹಗಲೇ ಬಿಬಿಎಂಪಿ ಮಾಜಿ ಕಾರ್ಪೊರೇಟರ್‌ ಹತ್ಯೆ: ಟೆಂಡರ್ ವಿಷಯಕ್ಕೆ ವೈಮನಸ್ಯ ಶಂಕೆ

ಬೆಂಗಳೂರು,ಜೂ.24: ಹಾಡಹಗಲೇ ಬಿಬಿಎಂಪಿ ಮಾಜಿ ಪಾಲಿಕೆ‌ ಸದಸ್ಯೆಯನ್ನು ಕೊಚ್ಚಿ ಕೊಲೆಗೈದಿರುವ ಘಟನೆ ಬೆಂಗಳೂರಿನಲ್ಲಿ ಗುರುವಾರ ಬೆಳಗ್ಗೆ ನಡೆದಿದೆ.

ಬೃಹತ್ ಬೆಂಗಳೂರು ಮಹಾ ನಗರ ಪಾಲಿಕೆಯ ಛಲವಾದಿ ಪಾಳ್ಯದ ಮಾಜಿ ಪಾಲಿಕೆ ಸದಸ್ಯೆ ರೇಖಾ ಕದಿರೇಶ್ ಕೊಲೆಯಾದ ದುರ್ದೈವಿಯಾಗಿದ್ದು, ಇಂದು ಬೆಳಗ್ಗೆ ಛಲವಾದಿ ಪಾಳ್ಯದ ಫ್ಲವರ್ ಗಾರ್ಡನ್ ಬಳಿಯ ರೇಖಾ ಅವರ ನಿವಾಸದ ಮುಂದೆಯೇ ಈ ಕೃತ್ಯ ನಡೆದಿದೆ. ಈ ಹಿಂದೆ 2018ರಲ್ಲಿ ರೇಖಾ ಅವರ ಪತಿ ಕದಿರೇಶ್ ಅವರನ್ನು ಸಹ ಹತ್ಯೆ ಮಾಡಲಾಗಿತ್ತು.

ಛಲವಾದಿ ಪಾಳ್ಯದ ಮಾಜಿ ಪಾಲಿಕೆ ಸದಸ್ಯೆ ರೇಖಾ ಕದಿರೇಶ್ ಅವರನ್ನು ಅದೇ ಏರಿಯಾದ ಪೀಟರ್, ಸುರೇಶ್, ರಾಬರ್ಟ್ ಎಂಬುವವರೇ ಕೊಲೆಗೈದಿದ್ದಾರೆ ಎಂಬ ಆರೋಪಗಳು ಕೇಳಿಬರುತ್ತಿದ್ದು,  ಟೆಂಡರ್ ಕರೆದ ವಿಚಾರದಲ್ಲಿ ವೈಮನಸ್ಯ ಉಂಟಾಗಿ ಕೊಲೆ ನಡೆದಿರಬಹುದು ಎಂಬ ಶಂಕೆ ವ್ಯಕ್ತವಾಗಿದೆ. ಈ ಸಂಬಂಧ ತನಿಖೆ ಮುಂದುವರಿದಿದೆ.

Exit mobile version