ಬೊಮ್ಮಾಯಿ ಸುದ್ದಿಗೋಷ್ಠಿ: ರೈತರ ಮಕ್ಕಳಿಗೆ ಬೊಮ್ಮಾಯಿ ಬಂಪರ್ ಕೊಡುಗೆ

ಬೆಂಗಳೂರು, ಜು. 28: ಬಸವರಾಜ ಬೊಮ್ಮಾಯಿ ಇಂದು ಕರ್ನಾಟಕದ ನೂತನ ಸಿಎಂ ಆಗಿ ಪ್ರಮಾಣ ವಚನ ಸ್ವೀಕರಿಸಿದ್ದಾರೆ. ಬಳಿಕ ಹಿರಿಯ ಅಧಿಕಾರಿಗಳೊಂದಿಗೆ ಸಭೆ ನಡೆಸಿ ಆಡಳಿತ ಯಂತ್ರಕ್ಕೆ ಬಿಸಿ ಮುಟ್ಟಿಸಿದ್ದಾರೆ. ಜೊತೆಗೆ ಅಧಿಕಾರಿಗಳಿಗೆ ನೀತಿ ಪಾಠವನ್ನೂ ಕೂಡ ಮಾಡಿದ್ದಾರೆ. ಸಭೆ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಸಿಎಂ ಬೊಮ್ಮಾಯಿ, ನಾನೊಬ್ಬನೇ ಪ್ರಮಾಣ ವಚನ ತೆಗೆದುಕೊಂಡಿದ್ದೇನೆ.  ಸಚಿವ ಸಂಪುಟ ಸಭೆ ನಡೆಸಿದ್ದೇನೆ. ಹಿರಿಯ ಅಧಿಕಾರಿಗಳ ಸಭೆ ನಡೆಸಿದ್ದೇನೆ. ಸರ್ಕಾರದ ದಿಕ್ಸೂಚಿ ಯಾವ ರೀತಿ ಇರಬೇಕು ಎಂದು ಅಧಿಕಾರಿಗಳಿಗೆ ಹೇಳಿದ್ದೇನೆ ಎಂದು ಹೇಳಿದರು.

ದಲಿತ, ಬಡವ, ಕೂಲಿ ಕಾರ್ಮಿಕರ ಪರ ಸರ್ಕಾರ ಇರುತ್ತೆ. ಆದೇಶಗಳಿಂದಲ್ಲ ಆದೇಶದ ಅನುಷ್ಟಾನದಿಂದ ಸರ್ಕಾರ ಇರುತ್ತೆ.  ಇಲಾಖೆಗಳ ಸಂಪೂರ್ಣ ಜವಾಬ್ದಾರಿ ಅಧಿಕಾರಿಗಳ ಮೇಲಿರುತ್ತೆ. ಟೈಮ್ ಬಾಂಡ್ ಅನುಷ್ಠಾನ ಆಗಬೇಕು. ತಡವಾದರೆ ಭ್ರಷ್ಟಾಚಾರಕ್ಕೆ ಮತ್ತು ಹೆಚ್ಚುವರಿ ಖರ್ಚಿಗೆ ಎಡೆ ಮಾಡಿಕೊಡುತ್ತೆ ಎಂದು ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದ್ದಾರೆ.

ಚಲ್ತಾ ಹೈ ಆಟಿಟ್ಯುಡ್ ನಡೆಯಲ್ಲ. ಕಚೇರಿಗೆ ಬಂದು ಯಾವಾಗ ಬೇಕಾದರೂ ಅಧಿಕಾರಿಗಳು ಚರ್ಚೆ ಮಾಡಬಹುದು. ಹಣಕಾಸಿನ ಶಿಸ್ತು ಬಹಳ ಅವಶ್ಯಕತೆ ಇದೆ. ಮುಂದಿನ ಮಾರ್ಚ್ 31ರೊಳಗೆ ಅನಗತ್ಯ ಖರ್ಚಿಗೆ ಕಡಿವಾಣಕ್ಕೆ ಅಧಿಕಾರಿಗಳಿಗೆ ಸೂಚಿಸಲಾಗಿದೆ.  ಫೈಲ್ ಕ್ಲಿಯರ್ ಆದೇಶ ಮಾಡಲಾಗುವುದು.  15 ದಿನದೊಳಗೆ ಫೈಲ್ ಕ್ಲಿಯರ್ ಆಗಬೇಕು. ಆಡಳಿತದಲ್ಲಿ ದಕ್ಷತೆ ಮತ್ತು ಚುರುಕು ತರಲಾಗುವುದು.  ಅಭಿವೃದ್ಧಿ ಕಾರ್ಯಗಳು ಆದಷ್ಟು ಬೇಗ ಮುಗಿಯಲಿದೆ.  ಆರ್ಥಿಕ ಶಿಸ್ತು ತರಲಾಗುವುದು.  ಕೋವಿಡ್ ಮತ್ತು ನೆರೆ ನಮ್ಮ ಮುಂದೆ ಇದೆ ಎಂದು ಬೊಮ್ಮಾಯಿ ತಿಳಿಸಿದರು.

ರೈತರ ಮಕ್ಕಳಿಗೆ ಬೊಮ್ಮಾಯಿ ಬಂಪರ್ ಕೊಡುಗೆ

ಮುಂದುವರೆದ ಅವರು, ರೈತರ ಮಕ್ಕಳಿಗಾಗಿ ಉನ್ನತ ಶಿಕ್ಷಣಕ್ಕೆ ಪ್ರೋತ್ಸಾಹ ನೀಡಲು
ರೈತರ ಮಕ್ಕಳಿಗೆ ಹೊಸ ಶಿಷ್ಯ ವೇತನ ನೀಡಲಾಗುತ್ತದೆ. ಇದಕ್ಕಾಗಿ 1 ಸಾವಿರ ಕೋಟಿ ಮೀಸಲು ಇಡಲಾಗಿದೆ.ಸಂಧ್ಯಾ ಸುರಕ್ಷಾ ಯೋಜನೆಯಲ್ಲಿ 1000 ರೂ. ಇದ್ದ ಹಣವನ್ನು 1200ಕ್ಕೆ  ಹೆಚ್ಚಿಸಲಾಗಿದೆ. ಇದಕ್ಕಾಗಿ 863.52 ಕೋಟಿ ಮೀಸಲಿಡಲಾಗಿದೆ. ಈ ಯೋಜನೆಯಿಂದ 35.92 ಫಲಾನುಭವಿಗಳು ಅನುಕೂಲ ಪಡೆಯಲಿದ್ದಾರೆ.

ವಿಧವಾ ವೇತನವನ್ನು 600 ರೂ ಗಳಿಂದ 800 ರೂಪಾಯಿಗೆ ಹೆಚ್ಚಿಸಲಾಗಿದೆ. ಈ ಯೋಜನೆಗೆ ಒಟ್ಟು 414 ಕೋಟಿ ಹೆಚ್ಚುವರಿ ವೆಚ್ಚವಾಗಲಿದೆ. ಅಂಗವಿಕಲರಿಗೆ 600 ರೂಗಳಿಂದ 800 ರೂಪಾಯಿಗೆ ಹೆಚ್ಚಿಸಲಾಗಿದ್ದು, ಇದಕ್ಕೆ 90 ಕೋಟಿ ಹೆಚ್ಚುವರಿ ವೆಚ್ಚವಾಗಲಿದೆ.

Exit mobile version