`ವರ್ಣತರಂಗ’ಕ್ಕೆ ಶುಭಾರಂಭ

ತಿಲಕ್ ನಾಯಕರಾಗಿ ನಟಿಸುತ್ತಿರುವ ಹೊಸ ಚಿತ್ರ ವರ್ಣತರಂಗದ ಮುಹೂರ್ತ ಬನಶಂಕರಿಯ ಭದ್ರಗಿರಿ ಮಂಜುನಾಥ ದೇವಸ್ಥಾನದಲ್ಲಿ ನೆರವೇರಿದೆ. ತೀರ್ಥೇಶ್ ಎನ್ನುವ ನವ ನಿರ್ದೇಶಕರ ಈ ಚಿತ್ರದಲ್ಲಿ ಸಾಕ್ಷಿ ಮೇಘನಾ ನಾಯಕಿಯಾಗಿ ನಟಿಸುತ್ತಿದ್ದಾರೆ. ಎರಡು ಕಾಲಘಟ್ಟದ ಕತೆ ಹೇಳುವ ಈ ಸಿನಿಮಾ ಒಂದು ಕ್ರೈಂ ಸಸ್ಪೆನ್ಸ್ ಸಬ್ಜೆಕ್ಟ್ ಹೊಂದಿದೆ ಎಂದು ನಿರ್ದೇಶಕರು ತಿಳಿಸಿದ್ದಾರೆ.

ಪ್ರಸ್ತುತ ಕಾಲದ ಜೊತೆಗೆ 1865ರ ಕಾಲಘಟ್ಟವನ್ನು ಕೂಡ ಪರದೆಯ ಮೇಲೆ ತೋರಿಸುವ ಪ್ರಯತ್ನ ನಿರ್ದೇಶಕರದ್ದು. ಚಿತ್ರದಲ್ಲಿ ವರ್ಧನ್ ತೀರ್ಥಹಳ್ಳಿ ಒಂದು ಪ್ರಧಾನ ಪಾತ್ರವನ್ನು ನಿರ್ವಹಿಸುತ್ತಿದ್ದಾರೆ. ಉಳಿದಂತೆ ಹಿರಿಯನಟ ರಮೇಶ್ ಪಂಡಿತ್ ಕೂಡ ಚಿತ್ರದ ತಾರಾಗಣದಲ್ಲಿದ್ದಾರೆ. ತಿಲಕ್ ಅವರು ಅಂಡರ್ ಕವರ್ ಏಜೆಂಟ್ ಆಗಿ ಪ್ರತ್ಯಕ್ಷವಾಗುವ ಇನ್ವೆಸ್ಟಿಗೇಟಿಂಗ್ ಆಫೀಸರ್ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರಂತೆ. ನಾಯಕಿ ಮೇಘನಾ ಅವರು ಜಾಹ್ನವಿ ಎನ್ನುವ ಪತ್ರಕರ್ತೆಯಾಗಿ ನಟಿಸಲಿದ್ದಾರೆ.
ವರ್ಧನ್ ತೀರ್ಥಹಳ್ಳಿಯವರು ಸೈಕಿಯಾಟ್ರಿಸ್ಟ್ ಪಾತ್ರವನ್ನು ನಿಭಾಯಿಸಲಿದ್ದಾರೆ. ರಮೇಶ್ ರಾಜ್ ಛಾಯಾಗ್ರಹಣ, ವಿಜಯ್ ಆರ್ಯನ್ ಸಂಗೀತ ಚಿತ್ರದ ಹೈಲೈಟ್ ಆಗಲಿದೆ ಎನ್ನುವ ಭರವಸೆ ಚಿತ್ರತಂಡದ್ದಾಗಿದೆ. ಶಿವಕುಮಾರ್ ಬಿ ಚಿತ್ರದ ನಿರ್ಮಾಣ ಮಾಡಿದ್ದಾರೆ.

Exit mobile version