ಪ್ರಯೋಗ್ ಸ್ಟುಡಿಯೋದ ‘ಓನ್ಲಿ ಕನ್ನಡ ಓಟಿಟಿ’

ನಾಲ್ಕು ವರ್ಷಗಳ ಹಿಂದೆ ಪ್ರದೀಪ್ ಅವರು  ಪ್ರಯೋಗ್ ಸ್ಟುಡಿಯೋ ಆರಂಭಿಸಿದ್ದರು. ಅದರಲ್ಲಿ ಹಲವು ಕಾರ್ಯಕ್ರಮಗಳು ನಡೆದಿವೆ. ಈಗ ಮುಂದಿನ ಹೆಜ್ಜೆಯಾಗಿ ಓಟಿಟಿ ಯೊಂದನ್ನು ಆರಂಭಿಸಲಾಗುತ್ತಿದೆ. ಇದು ಬರೀ ಕನ್ನಡಕ್ಕೆ ಮಾತ್ರ ಸೀಮಿತ. ಆದರೆ ಕರ್ನಾಟಕದ ಪ್ರಾದೇಶಿಕ ಭಾಷೆಗಳಾದ ಕೊಡವ, ತುಳು, ಕೊಂಕಣಿ, ಬ್ಯಾರಿ ಭಾಷೆಗಳಿಗೂ ಈ ಓಟಿಟಿ ಲಭ್ಯವಿದೆ.

“ಇದು ನಾನು ಹಾಗೂ ನಿರ್ಮಾಪಕ  ಮಂಜುನಾಥ್ ತುಂಬಾ ದಿನಗಳ ಹಿಂದೆ ಇದರ ಬಗ್ಗೆ ಯೋಚನೆ ಮಾಡಿದ್ದೆವು. ನಂತರ ಇದರ ಬಗ್ಗೆ ತಲೆ ಕೆಡಿಸಿಕೊಳ್ಳಲಿಲ್ಲ. ಈಗ ಕಾರ್ಯರೂಪಕ್ಕೆ ತಂದಿದ್ದೀನಿ. ಇದಕ್ಕೆ ಹಲವರ ಸಹಕಾರವಿದೆ.‌ ಇದರಲ್ಲಿ ಬರೀ ಸಿನಿಮಾವಷ್ಟೇ ಅಲ್ಲದೇ ಯಕ್ಷಗಾನ, ಸಂಗೀತ, ನಾಟಕ, ನೃತ್ಯ ಮುಂತಾದ ಕಾರ್ಯಕ್ರಮಗಳನ್ನು ಓಟಿಟಿ ಮೂಲಕ ಬಿತ್ತರಿಸಲಾಗುವುದು. ಈ ಸಂಬಂಧ ನವೆಂಬರ್ ನಲ್ಲಿ ರಾಜ್ಯಪ್ರವಾಸ ಕೈಗೊಳ್ಳುತ್ತೇವೆ. ಎಲ್ಲಾ ಜಿಲ್ಲೆಗಳಲ್ಲೂ ಇದರ ಬಗ್ಗೆ ತಿಳಿಸಲಾಗುವುದು” ಎನ್ನುತ್ತಾರೆ ಪ್ರದೀಪ್.

ತಮ್ಮ ಒಟಿಟಿಯಲ್ಲಿ ಯಾವುದೇ ಅಶ್ಲೀಲ ಸಂಭಾಷಣೆಯ ಸಿನಿಮಾಗಳನ್ನಾಗಲಿ ಅಥವಾ ಕಾರ್ಯಕ್ರಮಗಳನ್ನಾಗಲಿ ಪ್ರಸಾರ ಮಾಡುವುದಿಲ್ಲ. ಡಬ್ಬಿಂಗ್ ಸಿನಿಮಾಗಳು ಕೂಡ ಪ್ರಸಾರವಾಗುವುದಿಲ್ಲ ಎಂದು ಪ್ರದೀಪ್ ಮಾಹಿತಿ ನೀಡಿದರು. ಅಪ್ಲಿಕೇಷನ್ ಡೆವಲಪರ್ ತೇಜ್ ಪಾಂಡೆ ಓಟಿಟಿಯ ಕಾರ್ಯವೈಖರಿ ಬಗ್ಗೆ ವಿವರಿಸಿದರು.

ಓಟಿಟಿ ಉದ್ಘಾಟನಾ ಸಮಾರಂಭಕ್ಕೆ ಮುಖ್ಯ ಅತಿಥಿಯಾಗಿ ಆಗಮಿಸಿದ ವಿ.ಮನೋಹರ್ ಮಾತನಾಡುತ್ತಾ “ಸಿನಿಮಾವನ್ನು ಚಿತ್ರಮಂದಿರಗಳಲ್ಲಿ ನೋಡುವುದೇ ಚೆಂದ..ಆದರೆ ಲಾಕ್ ಡೌನ್ ಸಮಯದಿಂದ ಜನ‌ ಈ ರೀತಿ ಬದಲಾಗಿದ್ದಾರೆ. ಕಾಲ ಬದಲಂತೆ ಎಲ್ಲರೂ ಬದಲಾಗಬೇಕು. ಓನ್ಲಿ ಕನ್ನಡ ಓಟಿಟಿಗೆ ಒಳ್ಳೆಯದಾಗಲಿ. ಪ್ರದೀಪ್ ಅವರನ್ನು ಬಹಳ ದಿನಗಳಿಂದ ಬಲ್ಲೆ. ಅವರ ಬಳಿ ಹಣ ಅಷ್ಟಿಲ್ಲದಿದ್ದರೂ, ಇಂತಹ ಕಾರ್ಯಗಳಿಗೆ ಕೈ ಹಾಕುತ್ತಾರೆ . ಅವರ ಧೈರ್ಯ ಮೆಚ್ಚುವಂಥದ್ದು” ಎಂದರು.

ಸಮಾಜ ಸೇವಕಿ ಹಾಗೂ ಉದ್ಯಮಿ ರೇವತಿ ಕಾಮತ್, ರಾಷ್ಟ್ರಪ್ರಶಸ್ತಿ ವಿಜೇತ ನಿರ್ದೇಶಕ ಚೇತನ್ ಮುಂಡಾಡಿ, ನಿರ್ದೇಶಕ ಸುಧೀರ್ ಶಾನುಭೋಗ್, ನಿರ್ದೇಶಕ ವರುಣ್ ಕಟ್ಟೀಮನಿ, ನಿರ್ದೇಶಕ ಜಗದೀಶ್, ಹೊಂಬಾಳೆ ಸ್ಟುಡಿಯೋ ಮಾಲೀಕರಾದ ಪರಮೇಶ್ ಹಾಗೂ ನಿರ್ಮಾಪಕ ಮಂಜುನಾಥ್ ಮುಖ್ಯ ಅತಿಥಿಗಳಾಗಿ ಆಗಮಿಸಿ ಓನ್ಲಿ ಕನ್ನಡ ಓಟಿಟಿ ಬಗ್ಗೆ ತಮ್ಮ ಅಭಿಪ್ರಾಯ ತಿಳಿಸಿದರು

Exit mobile version