ನವದೆಹಲಿ, ಫೆ. 09: ಪಾಕಿಸ್ತಾನಕ್ಕೆ ಎಂದೂ ಕಾಲಿಡದ ಅದೃಷ್ಟವಂತರಲ್ಲಿ ನಾನು ಕೂಡ ಒಬ್ಬನಾಗಿದ್ದು, ಪಾಕ್ ಸಮಾಜದ ದುರಂತ ಸನ್ನಿವೇಶಗಳ ಕುರಿತು ಓದಿದಾಗ ನಾನು ನನ್ನನ್ನು ಭಾರತೀಯ ಮುಸಲ್ಮಾನ ಎಂದು ಹೆಮ್ಮೆಯಿಂದ ಹೇಳಿಕೊಳ್ಳುತ್ತೇನೆ ಎಂದು ಹಿರಿಯ ಕಾಂಗ್ರೆಸ್ ಸಂಸದ ಗುಲಾಂ ನಬಿ ಆಜಾದ್ ಹೇಳಿದರು.
ಇಂದು ವಿಪಕ್ಷ ನಾಯಕ, ಹಿರಿಯ ಕಾಂಗ್ರೆಸ್ ಸಂಸದ ಗುಲಾಂ ನಬಿ ಆಜಾದ್ ರಾಜ್ಯಸಭೆಯಿಂದ ನಿವೃತ್ತಿಯಾಗುತ್ತಿದ್ದು, ರಾಜ್ಯಸಭೆಯಲ್ಲಿ ವಿದಾಯ ಭಾಷಣ ಮಾಡಿದರು. ಮಾತನಾಡುತ್ತಾ ಗದ್ಗದಿತರಾದ ನಬಿ, ‘ನನ್ನನ್ನು ಅತ್ಯಂತ ಬಾವನಾತ್ಮಕವಾಗಿ ಬೀಳ್ಕೊಟ್ಟ ಪ್ರಧಾನಿ ಮೋದಿ ಅವರಿಗೆ ತುಂಬು ಹೃದಯದ ಧನ್ಯವಾದ ಅರ್ಪಿಸುತ್ತೇನೆ. ಮೋದಿ ಅವರ ಭಾವುಕ ಭಾಷಣದಿಂದ ಎದೆ ತುಂಬಿ ಬಂದಿದೆ’ ಎಂದರು. ನನ್ನ ಬೀಳ್ಕೊಡುಗೆ ಇಷ್ಟೊಂದು ಭಾವನಾತ್ಮಕವಾಗಿರುತ್ತದೆ ಎಂದು ನಿರೀಕ್ಷಿಸಿರಲಿಲ್ಲ. ನಿವೆಲ್ಲರೂ ನನಗೆ ತೋರಿದ ಗೌರವ ಹಾಗೂ ಪ್ರೀತಿಗೆ ನಾನು ಆಭಾರಿಯಾಗಿದ್ದೇನೆ ಎಂದು ಹೇಳಿದರು.
ಇನ್ನು ಈ ವೇಳೆ ಪಾಕಿಸ್ತಾನದ ಬಗ್ಗೆ ಮಾತನಾಡಿದ ಅವ್ರು, ‘ಪಾಕಿಸ್ತಾನದಲ್ಲಿ ನಡೆಯುತ್ತಿರುವ ಬೆಳವಣಿಗೆಗಳನ್ನು ಗಮನಿಸಿದರೆ ಸ್ವರ್ಗ ಅನ್ನೋದು ನಿಜವಾಗಿಯೂ ಭಾರತದಲ್ಲಿದೆ ಅನ್ನೋ ಸತ್ಯದ ಅರಿವಾಗುತ್ತೆ. ನಾವು ನಮ್ಮನ್ನ ಭಾರತೀಯ ಮುಸಲ್ಮಾನರು ಎಂದು ಹೆಮ್ಮೆಯಿಂದ ಹೇಳಿಕೊಳ್ಳುತ್ತೇವೆ. ಈ ನೆಲದಲ್ಲಿ ಹುಟ್ಟಿದ್ದೇವೆ, ಈ ನೆಲದ ಸೇವೆ ಮಾಡಿ ಇದೇ ನೆಲದಲ್ಲಿ ಸಾಯುತ್ತೇವೆ ಎಂದು ಭಾವುಕರಾದ್ರು.