ಅಧಿಕಾರ ಹೋದ್ರೆ ಗೂಟ ಹೋಯ್ತು ಅನ್ಕೊತಿನಿ: ಸಚಿವ ಕೆ.ಎಸ್.ಈಶ್ವರಪ್ಪ

ಶಿವಮೊಗ್ಗ, ಜು. 19: ನಾನೇನು ಅಧಿಕಾರಕ್ಕೆ ಗೂಟ ಹೊಡ್ಕೊಂಡು ಕುಂತಿಲ. ಆಧಿಕಾರ ಹೋದ್ರೆ ಗೂಟ ಹೋಯ್ತು ಅನ್ಕೊತಿನಿ. ಮಂತ್ರಿ ಸ್ಥಾನ ಇಲ್ಲಾಂದ್ರೆ ಸಂಘಟನೆ ಮಾಡ್ತಿನಿ ಎಂದು ಸಚಿವ ಕೆ.ಎಸ್. ಈಶ್ವರಪ್ಪ ಹೇಳಿದರು.

ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್ ಅವರದ್ದು ಎನ್ನಲಾದ ಆಡಿಯೋವೊಂದು ವೈರಲ್ ಆಗಿದ್ದು ಬಿಜೆಪಿಯಲ್ಲಿ ಭಾರಿ ಸಂಚಲನ ಮೂಡಿಸಿದ್ದು ಸೋಮವಾರ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಅವರು, ಮಂತ್ರಿಸ್ಥಾನ ಹೋದರೆ ಹೋಗಲಿ. ನಾನೇನೂ ಗೂಟ ಹೊಡ್ಕೊಂಡು ಕೂರಲು ಬಂದಿಲ್ಲ. ಅಧಿಕಾರ ಹೋದರೆ ಗೂಟ ಹೋಯ್ತು ಅಂದುಕೊಳ್ತೀನಿ. ಮಂತ್ರಿ ಸ್ಥಾನ ಇಲ್ಲಾಂದರೆ ಸಂಘಟನೆಯ ಕೆಲಸ ಮಾಡ್ತೀನಿ. ಸಂಘಟನೆ ಹಿರಿಯರು ವಹಿಸಿಕೊಡುವ ಜವಾಬ್ದಾರಿ ನಿರ್ವಹಿಸುತ್ತೇನೆ ಎಂದು ತಿಳಿಸಿದರು.

ಸಿಎಂ ಯಡಿಯೂರಪ್ಪ ಪದಚ್ಯುತರಾಗಲಿದ್ದಾರೆ. ಈಶ್ವರಪ್ಪ, ಶೆಟ್ಟರ್ ಟೀಂ ಹೊರ ಹೋಗುತ್ತಾರೆ. ಮೂವರಲ್ಲಿ ಒಬ್ಬರು ಅಧಿಕಾರ ಹಿಡಿತಾರೆ ಎಂದು  ಬಿಜೆಪಿ ರಾಜ್ಯಾಧ್ಯಕ್ಷರು ಹೇಳಿದ್ದಾರೆ ಎನ್ನಲಾದ ಆಡಿಯೋ ವೈರಲ್ ಬಗ್ಗೆ ಪ್ರತಿಕ್ರಿಯಿಸಿದ ಕೆ.ಎಸ್ ಈಶ್ವರಪ್ಪ, ನಾನು ಅದನ್ನ ಹೇಳಿಲ್ಲ, ಯಾರೋ ಹುಚ್ಚರು ಮಾಡಿದ್ದು, ಅದು ನಕಲಿ ಅಂತ ಕಟೀಲ್ ಹೇಳಿದ್ದಾರೆ. ಅವರ ಹೇಳಿಕೆಗೆ ನನ್ನ ಸಂಪೂರ್ಣ ಸಹಮತವಿದೆ. ಆಡಿಯೋದಲ್ಲಿ ಇರುವುದನ್ನು ಕಟೀಲ್ ಹೇಳಿಲ್ಲ, ಅವರು ಹೇಳಲು ಸಾಧ್ಯವೂ ಇಲ್ಲ ಎಂದು ನಳೀನ್ ಕುಮಾರ್ ಕಟೀಲ್ ಪರ ಬ್ಯಾಟ್ ಬೀಸಿದರು.

ಹಾಗೆಯೇ ಅದು ನಕಲಿ ಆಡಿಯೋ ಅಂತ ಕಟೀಲ್ ಹೇಳಿದ ಮೇಲೆ ತನಿಖೆ ಮಾಡುವುದೇನೂ ಉಳಿದಿಲ್ಲ. ಆದರೆ ತನಿಖೆ ನಡೆಯಲೇಬೇಕು ಎಂದಾದರೆ ತನಿಖೆ ಆಗಲಿ ಎಂದು ಸಚಿವ ಈಶ್ವರಪ್ಪ ತಿಳಿಸಿದರು.

Exit mobile version