ಬೆಂಗಳೂರು ಅ 23 : ಕೊರೋನಾ ಕಡಿಮೆಯಾದ ಹಿನ್ನೆಲೆ ದಸರಾ ಬಳಿಕ ಪ್ರಾಥಮಿಕ ಶಾಲೆ ಆರಂಭಗೊಳ್ಳುತ್ತೆ ಎಂದು ಶಿಕ್ಷಣ ಇಲಾಖೆ ಭರವಸೆ ನೀಡಿತ್ತು. ಅಂತೆಯೇ ಕೆಲ ದಿನಗಳ ಹಿಂದೆ ಶಿಕ್ಷಣ ಸಚಿವ ಬಿಸಿ ನಾಗೇಶ್ ಪತ್ರಿಕಾಗೋಷ್ಠಿ ನಡೆಸಿ 25ರಂದು ಶಾಲೆ ಆರಂಭ ಎಂದು ಶುಭ ಸುದ್ದಿ ನೀಡಿದರು. ಕಳೆದ 20 ತಿಂಗಳಿನಿಂದ ಶಾಲೆ ಮುಖ ನೋಡದ ಮಕ್ಕಳು ಇದೀಗ ಇಂದಿನಿಂದ ಶಾಲೆಗೆ ಆಗಮಿಸುತ್ತಿದ್ದಾರೆ. ಆದರೆ ಆರಂಭದಲ್ಲೇ ಮಕ್ಕಳಿಗೆ ಪೂರ್ಣಾವಧಿ ತರಗತಿಗಳು ಇರುವುದಿಲ್ಲ. ಈಗಾಗಲೇ ಕೊರೋನಾ ಹಾಗೂ ಇನ್ನಿತರ ವಿಚಾರಗಳಿಂದ ಮಕ್ಕಳು ಮಾನಸಿಕವಾಗಿ ಕುಗ್ಗಿ ಹೋಗಿದ್ದಾರೆ. ಹೀಗಾಗಿ ಏಕಾಏಕಿಯಾಗಿ ಪೂರ್ಣಾವಧಿ ತರಗತಿಗಳು ಮಾಡದೆ ಮಧ್ಯಾಹ್ನದವರೆಗೆ ಮಾತ್ರ ಕ್ಲಾಸ್ ನಡೆಸಲು ಇಲಾಖೆ ಮುಂದಾಗಿದೆ.
ಇನ್ನೂ ಶಾಲೆ ಪ್ರಾರಂಭವಾಗುತ್ತಿದ್ದಂತೆ ಇತ್ತ ಸರ್ಕಾರಿ ಶಾಲಾ ಶಿಕ್ಷಕರು ವಿವಿಧ ಬೇಡಿಕೆಗಳಿಗೆ ಆಗ್ರಹಿಸಿ ಪ್ರತಿಭಟನೆಗೆ ಕರೆಕೊಟ್ಟಿದ್ದಾರೆ. ರಾಜ್ಯದಲ್ಲಿ ಸರ್ಕಾರಿ ಪ್ರಾಥಮಿಕ ಶಾಲಾ ಶಿಕ್ಷಕರು 1 ಲಕ್ಷ 63 ಸಾವಿರ ಶಿಕ್ಷಕರು ಇದ್ದಾರೆ. ಇವರೆಲ್ಲಾ ಇಂದು ಕೈಗೆ ಕಪ್ಪು ಪಟ್ಟಿ ಧರಿಸಿ ಶಾಲೆಗಳಲ್ಲಿ ಸರ್ಕಾರದ ವಿರುದ್ಧ ಪ್ರತಿಭಟನೆ ನಡೆಸಲಿದ್ದಾರೆ.
ಶಾಲಾ ಶಿಕ್ಷಕರ ಬೇಡಿಕೆಗಳು
- ಪದವೀಧರ ಶಿಕ್ಷಕರ ಸಮಸ್ಯೆ ಸರ್ಕಾರ ಆಲಿಸಬೇಕು
- ವೃಂದ ಮತ್ತು ನೇಮಕಾತಿ ನಿಯಮಗಳ ತಿದ್ದುಪಡಿ ಮಾಡಬೇಕು
- ಸೇವಾವಧಿಯಲ್ಲಿ ಶಿಕ್ಷಕರು ಬಯಸುವ ಜಿಲ್ಲೆಗೆ ಒಂದು ಭಾರಿ ವರ್ಗಾವಣೆ ಮಾಡಬೇಕು
- ಮುಖ್ಯ ಗುರುಗಳಿಗೆ 15, 20, 25 ವರ್ಷಗಳ ವೇತನ ಬಡ್ತಿ ನೀಡಬೇಕು
- ನೂತನ ಪಿಂಚಣಿ ಯೋಜನೆ ರದ್ದುಗೊಳಿಸಬೇಕು
- ಗ್ರಾಮೀಣ ಕೃಪಾಂಕ ಶಿಕ್ಷಕರ ಸಮಸ್ಯೆ ಆಲಿಸಿ, ಪರಿಹರಿಸಬೇಕು
- ದೈಹಿಕ ಶಿಕ್ಷಕರ ಹಾಗೂ ಹಿಂದಿ ಶಿಕ್ಷಕರ ಸಮಸ್ಯೆಗಳನ್ನ ಸರ್ಕಾರ ಕೂಡಲೇ ಪರಿಹಾರ ಒದಗಿಸಬೇಕು