ಸಿಂದಗಿ ಉಪಚುನಾವಣೆ, ಅಭ್ಯರ್ಥಿಗಳ ಆಸ್ತಿ ವಿವರ ಸಲ್ಲಿಕೆ

ಸಿಂದಗಿ ಅ 13 : ಸಿಂದಗಿ ಮತ್ತು ಹಾನಗಲ್ ಉಪಚುನಾವಣೆಗೆ ಸ್ಪರ್ಧಿಸಿರುವ ಅಭ್ಯರ್ಥಿಗಳು ತಮ್ಮ ಅಸ್ತಿ ವಿವರವನ್ನು ಸಲ್ಲಿಸಿದ್ದಾರೆ. ಅವರು ಸಲ್ಲಿಸಿರುವ ಆಸ್ತಿ ವಿವರ ಈ ಕೆಳಗಿನಂತಿದೆ

ಕಾಂಗ್ರೆಸ್ ಅಭ್ಯರ್ಥಿ ಅಶೋಕ್ ಮನಗೂಳಿ  ಆಸ್ತಿ ವಿವರ
ಕಾಂಗ್ರೆಸ್ ಅಭ್ಯರ್ಥಿಯಾಗಿ ಸ್ಫರ್ಧಿಸಿರುವ ಅಶೋಕ್ ಮನಗೂಳಿ ಒಟ್ಟು 6 ಕೋಟಿ 36 ಲಕ್ಷ ರೂಪಾಯಿ ಸ್ಥಿರಾಸ್ತಿ ಹೊಂದಿದ್ದಾರೆ. ಪತ್ನಿ ನಾಗರತ್ನಾ ಬಳಿ 3 ಲಕ್ಷ 25 ಸಾವಿರ ಸ್ಥಿರಾಸ್ತಿಯಿದೆ. ಅಶೋಕ್ ಮನಗೂಳಿ ಬಳಿ ಒಟ್ಟು 33, 46,765 ರೂಪಾಯಿ ಮೌಲ್ಯದ ಚರಾಸ್ತಿ ಹಾಗೂ ಪತ್ನಿ ನಾಗರತ್ನಾ ಮನಗೂಳಿ ಬಳಿ 60 ಲಕ್ಷ 52 ಸಾವಿರ 713 ರೂಪಾಯಿ ಮೌಲ್ಯದ ಚರಾಸ್ತಿಯಿದೆ. ಇನ್ನು ಅಶೋಕ್ ಮನಗೂಳಿ 17 ಲಕ್ಷ ಮೌಲ್ಯದ ಟಾಟಾ ಸಫಾರಿ ಕಾರ್ ಹೊಂದಿದ್ದರೆ, ಪತ್ನಿ 45 ಲಕ್ಷ ರೂಪಾಯಿಗಳ ಪೋರ್ಡ್ ಕಾರು ಹೊಂದಿದ್ದಾರೆ. ಇದರ ಜೊತೆಗೆ ಅಶೋಕ್ ಮನಗೂಳಿ 86,65,416 ರೂ ಸಾಲ ಹೊಂದಿದ್ದಾರೆ. ಪತ್ನಿ ನಾಗರತ್ನಾ 37,55,215 ಸಾಲ ಮಾಡಿದ್ದಾರೆ.

ಜೆಡಿಎಸ್ ಅಭ್ಯರ್ಥಿ ನಾಜಿಯಾ ಅಂಗಡಿ ಆಸ್ತಿ ವಿವರ
ಜೆಡಿಎಸ್ ಅಭ್ಯರ್ಥಿಯಾಗಿರುವ ನಾಜಿಯಾ ಅಂಗಡಿ ಬಳಿ ಎರಡು ಲಕ್ಷ ನಗದು ಹಾಗೂ ಪತಿ ಶಕೀಲ್ ಅಂಗಡಿ ಬಳಿ 50 ಸಾವಿರ ನಗದು ಹಣವಿದೆ. ಹಾಗೂ ಬ್ಯಾಂಕ್ ಉಳಿತಾಯ ಖಾತೆಯಲ್ಲಿ 4,24,061 ರೂಪಾಯಿಗಳಿದ್ದರೆ, ಪತಿ ಶಕೀಲ್ ಅಂಗಡಿ ಬ್ಯಾಂಕ್ ಖಾತೆಯಲ್ಲಿ 1,65,112 ರೂಪಾಯಿಗಳಿವೆ. ನಾಜಿಯಾ ಅಂಗಡಿ 24 ಲಕ್ಷ ರೂಪಾಯಿ ಮೌಲ್ಯದ 520 ಗ್ರಾಂ ಚಿನ್ನಾಭರಣ, ಒಂದು ಟಾಟಾ ಸಫಾರಿ ಜೀಪ್ ಸೇರಿದಂತೆ ಒಟ್ಟು 49 ಲಕ್ಷ 85 ಸಾವಿರ ಮೌಲ್ಯದ ಚರಾಸ್ತಿಯನ್ನು ಹಾಗೂ 24 ಲಕ್ಷ ಮೌಲ್ಯದ ಸ್ಥಿರಾಸ್ತಿಯನ್ನು ಹೊಂದಿದ್ದಾರೆ. ಯಾವುದೇ ಎಲ್ಐಸಿ ಹೊಂದಿಲ್ಲ ಎಂದು ಪ್ರಮಾಣ ಪತ್ರದಲ್ಲಿ ತಿಳಿಸಿದ್ದಾರೆ. ತಾವು ಖಾಸಗಿ ಶಾಲೆಯ ಶಿಕ್ಷಕಿಯಾಗಿದ್ದು, ಪತಿ ಸರ್ಕಾರಿ ನೌಕರರಾಗಿದ್ದಾರೆ ಎಂದು ನಮೂದಿಸಿದ್ದಾರೆ.

ಬಿಜೆಪಿ ಅಭ್ಯರ್ಥಿ ರಮೇಶ್ ಭೂಸನೂರ ಆಸ್ತಿ ವಿವರ
ಬಿಜೆಪಿ ಅಭ್ಯರ್ಥಿ ರಮೇಶ್ ಭೂಸನೂರ ಬಳಿ 3 ಲಕ್ಷ ರೂಪಾಯಿ, ಅವರ ಪತ್ನಿ ಲಲಿತಾಬಾಯಿ ಬಳಿ ಒಂದು ಲಕ್ಷ ರೂಪಾಯಿ ನಗದು ಹಣವಿದೆ. ರಮೇಶ್ ಭೂಸನೂರು ಬಳಿ 9 ಲಕ್ಷ ರೂ. ಮೌಲ್ಯದ 200 ಗ್ರಾಂ ಚಿನ್ನಾಭರಣಗಳಿವೆ. ಅವರ ಪತ್ನಿ ಲಲಿತಾಬಾಯಿ 4 ಡೈಮಂಡ್ ಹಾಗೂ 500 ಗ್ರಾಂ ಚಿನ್ನದ ಆಭರಣವಿದೆ. ಒಟ್ಟು ಮೌಲ್ಯ 25 ಲಕ್ಷ ಎಂದು ನಾಮಪತ್ರದ ಜೊತೆಗೆ ಸಲ್ಲಿಸಿರುವ ಪ್ರಮಾಣ ಪತ್ರದಲ್ಲಿ ನಮೂದಿಸಿದ್ದಾರೆ.

2010 ರಲ್ಲಿ ಸುಮಾರು 7 ಲಕ್ಷ ರೂ. ಮೌಲ್ಯದ ಮಾರುತಿ ಸ್ವೀಪ್ಟ್ ಕಾರು ಹೊಂದಿದ್ದ ಭೂಸನೂರು, ಈಗ 36 ಲಕ್ಷ ರೂಪಾಯಿಗಳ ಫಾರ್ಚುನರ್ ಕಾರು ಹೊಂದಿದ್ದಾರೆ. 2010ರಲ್ಲಿ ಸ್ಕೂಟಿ ಹೊಂದಿದ್ದ ಪತ್ನಿ ಲಲಿತಾಬಾಯಿ ಈಗ 14 ಲಕ್ಷ ರೂಪಾಯಿ ಬೆಲೆಬಾಳುವ ಹೋಂಡಾ ಕಾರು ಹೊಂದಿದ್ದಾರೆ. 2010ರಲ್ಲಿ ಪಲ್ಸರ್ ಬೈಕ್ ಹೊಂದಿದ್ದ ಭೂಸನೂರ ಪುತ್ರ ಮಂಜುನಾಥ ಈಗಾ 1.60 ಲಕ್ಷ ಮೌಲ್ಯದ ಹೋಂಡಾ ಸಿಬಿ ಬೈಕ್ ಹೊಂದಿದ್ದಾರೆ. ಮಗನ ಬಳಿ ನೂರು ಗ್ರಾಂ ಹಾಗೂ ರಮೇಶ್ ಭೂಸನೂರ ತಂದೆ ಬಾಳಪ್ಪ ಅವರ ಬಳಿ 50 ಗ್ರಾಂ ಚಿನ್ನಾಭರಣವಿದೆ ಎಂದು ಪ್ರಮಾಣ ಪತ್ರದಲ್ಲಿ ಉಲ್ಲೇಖಿಸಲಾಗಿದೆ.

ಉಪಚುನಾವಣೆಯು ಅಕ್ಟೋಬರ್ 30ರಂದು ಮತದಾನ ನಡೆಯಲಿದೆ. ಫಲಿತಾಂಶ ನ.2ರಂದು ಹೊರಬೀಳಲಿದೆ

Exit mobile version