ಕೋರ್ಟ್‌ ಮೊರೆ ಹೋದ ಪಿಯುಸಿ ರಿಪಿಟರ್ಸ್

ಬೆಂಗಳೂರು, ಜೂ. 08: ಕೋವಿಡ್​ ಹಿನ್ನೆಯಲ್ಲಿ ದ್ವಿತೀಯ ಪಿಯು ಪರೀಕ್ಷೆಯನ್ನು ರಾಜ್ಯ ಶಿಕ್ಷಣ ಇಲಾಖೆ ರದ್ದು ಮಾಡಿದೆ. ಎಸ್​ಎಸ್​ಎಲ್​ಸಿ ಅಂಕಗಳ ಆಧಾರದ ಮೇಲೆ ಎಲ್ಲಾ ದ್ವಿತೀಯ ಪಿಯು ವಿದ್ಯಾರ್ಥಿಗಳಿಗೆ ಗ್ರೇಡ್​ ನೀಡಿ ಕಡ್ಡಾಯ ಪಾಸ್​​​ಗೆ ಆದೇಶಿಸಿದೆ. ಮೊದಲ ಬಾರಿಗೆ ದ್ವಿತೀಯ ಪರೀಕ್ಷೆ ಬರೆಯುತ್ತಿರುವ ಎಲ್ಲಾ ವಿದ್ಯಾರ್ಥಿಗಳು ಈ ವರ್ಷ ಉತ್ತೀರ್ಣರಾಗಲಿದ್ದಾರೆ. ಆದರೆ ಹಿಂದಿನ ವರ್ಷಗಳಲ್ಲಿ ಅನುತೀರ್ಣರಾಗಿ ಈ ವರ್ಷ ಮರುಪರೀಕ್ಷೆ ಬರೆಯುತ್ತಿರುವ ವಿದ್ಯಾರ್ಥಿಗಳು ಪರೀಕ್ಷೆಯನ್ನು ಬರೆಯಲೇಬೇಕು. ಮರು ಪರೀಕ್ಷೆ ಬರೆಯುವವರನ್ನೂ ಈ ವರ್ಷ ಪಾಸ್​ ಮಾಡಬೇಕು ಎಂಬ ಕೂಗು ಕೇಳಿ ಬಂದಿದೆ. ಈ ಸಂಬಂಧ ಹೈ ಕೋರ್ಟ್​ಗೆ ಪಿಐಎಲ್​ ಅರ್ಜಿ ಕೂಡ ಸಲ್ಲಿಕೆಯಾಗಿದೆ. ರೆಗ್ಯೂಲರ್ ವಿದ್ಯಾರ್ಥಿಗಳನ್ನ ನೇರವಾಗಿ ಪಾಸ್ ಮಾಡಲಾಗಿದೆ. ರಿಪಿಟರ್ಸ್ ಗೆ ಪರೀಕ್ಷೆ ನಡೆಸುವುದಾಗಿ ಶಿಕ್ಷಣ ಇಲಾಖೆ ಆದೇಶ ಹೊರಡಿಸಿದೆ. ಈ ಆದೇಶ ವಿರೋಧಿಸಿ ಹೈಕೋರ್ಟ್ ಕೋರ್ಟ್ ಗೆ ಸಾರ್ವಜನಿಕ ಹಿತಾಸಕ್ತಿ ದೂರು ಸಲ್ಲಿಕೆಯಾಗಿದೆ. ಹೈ ಕೋರ್ಟ್ ಗೆ ಎಸ್.ವಿ.ಸಿಂಗ್ರೇಗೌಡ ಪರ ವಕೀಲ ಆರ್.ಪಿ.ಸೋಮಶೇಖರಯ್ಯ ಹಾಗೂ ಆರ್.ಎಲ್.ರಂಗಸ್ವಾಮ್ಯ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದ್ದಾರೆ.

ಈ ಬಾರಿ 95 ಸಾವಿರ ವಿದ್ಯಾರ್ಥಿಗಳು ಮರುಪರೀಕ್ಷೆ ಬರೆಯಲಿದ್ದಾರೆ. ಹೊಸ ವಿದ್ಯಾರ್ಥಿಗಳೊಂದು ನ್ಯಾಯ, ರಿಪಿಟರ್ಸ್​ಗೆ ಒಂದು ನ್ಯಾಯನಾ? ಪರೀಕ್ಷೆ ರದ್ದು ಮಾಡಿದ್ರೆ ಎಲ್ಲಾ ವಿದ್ಯಾರ್ಥಿಗಳಿಗೂ ರದ್ದು ಮಾಡಿ, ಇಲ್ಲವಾದ್ರೆ ಎಲ್ಲರಿಗೂ ಪರೀಕ್ಷೆ ನಡೆಸಿ ಎಂದು ಹೈಕೋರ್ಟ್​ಗೆ ಅರ್ಜಿ ಸಲ್ಲಿಸಲಾಗಿದೆ.

ಕೊರೋನಾ ಕಾರಣದಿಂದಾಗಿ ಈ ಬಾರಿ ದ್ವಿತೀಯ ಪಿಯುಸಿ ಪರೀಕ್ಷೆ ರದ್ದು ಮಾಡಲಾಗಿದ್ದು, ಗ್ರೇಡಿಂಗ್ ಫಲಿತಾಂಶವನ್ನು ನೀಡುವುದಾಗಿ ಶಿಕ್ಷಣ ಸಚಿವ ಸುರೇಶ್​ ಕುಮಾರ್ ಹೇಳಿದ್ದಾರೆ. ಈ ಬಾರಿ ದ್ವಿತೀಯ ಪಿಯುಸಿ ಪರೀಕ್ಷೆ ನಡೆಸಿಲ್ಲದ ಕಾರಣ, ವೃತ್ತಿಪರ ಕೋರ್ಸ್​​ಗಳಿಗೆ ಪ್ರವೇಶ ಪಡೆಯಲು ಸಿಇಟಿ ಪರೀಕ್ಷೆಯೇ ಮಾನದಂಡ ಎನ್ನಲಾಗುತ್ತಿದೆ. ಈ ಮೊದಲು ಶೇ.50 ರಷ್ಟು ಪಿಯುಸಿ ಅಂಕ ಹಾಗೂ ಶೇ.50ರಷ್ಟು ಸಿಇಟಿ ಅಂಕಗಳನ್ನು ಪರಿಗಣಿಸಿ ರ್ಯಾಂಕಿಂಗ್ ನೀಡಲಾಗುತ್ತಿತ್ತು. ಆದರೆ ಈ ಬಾರಿ ಎಕ್ಸಾಂ ನಡೆಯದ ಕಾರಣ ಮೆಡಿಕಲ್, ಎಂಜಿನಿಯರಿಂಗ್ ಕೋರ್ಸ್​​ಗಳಿಗೆ ಪ್ರವೇಶ ಪಡೆಯಲು ಸಿಇಟಿ ಪರೀಕ್ಷೆಯೇ ಮುಖ್ಯ ಮಾನದಂಡ ಆಗುತ್ತದೆ ಎಂದು ಉನ್ನತ ಶಿಕ್ಷಣ ಸಚಿವ,  ಡಿಸಿಎಂ ಅಶ್ವತ್ಥ ನಾರಾಯಣ ಹೇಳಿದ್ದಾರೆ. ಪಿಯುಸಿ ಪರೀಕ್ಷೆ ರದ್ದಾಗಿದ್ದು, ಎಲ್ಲರೂ ಪಾಸ್ ಆಗಿದ್ದಾರೆ. ಪಿಯುಸಿ ನಂತರ ವೈದ್ಯಕೀಯ ಹಾಗೂ ಎಂಜಿನಿಯರಿಂಗ್ ಸೀಟ್ ಪಡೆಯಲು ಕನಿಷ್ಠ ಅಂಕ ಬೇಕು. ಅದಕ್ಕಾಗಿ ಸಿಇಟಿ ಪರೀಕ್ಷೆಯೇ ಮಾನದಂಡ. ಸಿಇಟಿ ಮೂಲಕ ಬರುವ ಅಂಕದ ಆಧಾರದ ಮೇಲೆ ಮೆಡಿಕಲ್, ಡೆಂಟಲ್ ಹಾಗೂ ಎಂಜಿನಿಯರಿಂಗ್ ಸೀಟ್ ಹಂಚಿಕೆ ಮಾಡಲಾಗುವುದು ಎಂದು ಸ್ಪಷ್ಟಪಡಿಸಿದರು.

ದ್ವಿತೀಯ ಪಿಯು ಗ್ರೇಡಿಂಗ್ ಗೆ SSLC ಅಂಕಗಳನ್ನು ಪರಿಗಣಿಸಲು ಚಿಂತಿಸುತ್ತಿರುವುದಾಗಿ ಪಿಯು ಬೋರ್ಡ್​​ ತಿಳಿಸಿದೆ. ಈ ಬಗ್ಗೆ ಮಾಧ್ಯಮಗಳಿಗೆ ಹೇಳಿಕೆ ನೀಡಿದ ಪಿಯು ಬೋರ್ಡ್ ನಿರ್ದೇಶಕಿ ಆರ್.  ಸ್ನೇಹಲ್  ಶಿಕ್ಷಣ ಸಚಿವರ ಜೊತೆ ಚರ್ಚೆ ನಡೆಸಿದ ಬಳಿಕ SSLC ಅಂಕಗಳು ಪರಿಗಣಿಸಲು ನಿರ್ಧಾರ ಮಾಡಲಾಗುವುದು ಎಂದು ತಿಳಿಸಿದರು.ಪ್ರಥಮ‌ ಪಿಯು ಪರೀಕ್ಷೆಯನ್ನ ವಿದ್ಯಾರ್ಥಿಗಳು ಗಂಭೀರವಾಗಿ ಬರೆದಿರುವುದಿಲ್ಲ. ಪ್ರಥಮ ಪಿಯು ಅಂಕಗಳನ್ನು ಪರಿಗಣಿಸಿ ದ್ವಿತೀಯ ಪಿಯು ಗ್ರೇಡಿಂಗ್​ ಕೊಡುವುದು ಸರಿ ಕಾಣುತ್ತಿಲ್ಲ. ಹೀಗಾಗಿ ಈ ನಿರ್ಧಾರ ಕೈಗೊಳ್ಳಲಾಗಿದೆ. 10ನೇ ತರಗತಿ ಪರೀಕ್ಷೆ ರಾಜ್ಯ ಮಟ್ಟದಲ್ಲಿ ನಡೆದಿದೆ. ಇದು ಬೋರ್ಡ್ ಪರೀಕ್ಷೆ ಆಗಿರುತ್ತೆ. ವಿದ್ಯಾರ್ಥಿಗಳು ಗಂಭೀರವಾಗಿ ಪರೀಕ್ಷೆಯನ್ನು ಬರೆದಿರುತ್ತಾರೆ. SSLC ಅಂಕದ ಕ್ರೈಟೀರಿಯಾವನ್ನ ಇಲ್ಲಿ ಬಳಸಿಕೊಳ್ಳಲಾಗ್ತಿದೆ.

Exit mobile version