Haryana: ಪ್ರಧಾನಿ ನರೇಂದ್ರ ಮೋದಿ (Narendra Modi) ಭಾರತದ ಸೈನಿಕರನ್ನು ಕಾರ್ಮಿಕರನ್ನಾಗಿ ಪರಿವರ್ತಿಸುತ್ತಿದ್ದಾರೆ. ಅವರಿಗೆ ದೇಶ, ಭಾಷೆ ಎಂದೆಲ್ಲಾ ಆಮಿಷ ಒಡ್ಡುವ ಮೂಲಕ ಕೆಲಸ ಮಾಡಿಸಿಕೊಂಡು ಯುವ ಜನತೆಯ ಭವಿಷ್ಯವನ್ನು ಹಾಳುಮಾಡುತ್ತಿದ್ದಾರೆ ಎಂದು ಆರೋಪಿಸಿರುವ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ (Rahul Gandhi) ಈ ಲೋಕಸಭಾ ಚುನಾವಣೆಯಲ್ಲಿ ಇಂಡಿಯಾ ಕೂಟ ಅಧಿಕಾರಕ್ಕೆ ಬಂದರೆ ಅಗ್ನಿವೀರ್ ಯೋಜನೆಯನ್ನು (Agniveer Scheme) ತೆಗೆದು ಕಸದ ಬುಟ್ಟಿಗೆ ಎಸೆಯುತ್ತೇವೆ. ಯುವ ಜನತೆಯ ಭವಿಷ್ಯವನ್ನು ಕಣ್ಣ ಮುಂದಿದೆ ಹಾಗಾಗಿ ಅವರಿಗೆ ಉತ್ತಮವಾದದ್ದು ನೀಡುತ್ತೇವೆ ಎಂದು ಹೇಳಿದ್ದಾರೆ.
![](https://sp-ao.shortpixel.ai/client/to_webp,q_glossy,ret_img,w_376,h_211/https://vijayatimes.com/wp-content/uploads/2024/05/images-2024-05-22T192927.871.jpeg)
ಹರ್ಯಾಣದಲ್ಲಿ ತಮ್ಮ ಮೊದಲ ಚುನಾವಣಾ ರ್ಯಾಲಿಯನ್ನು ಉದ್ದೇಶಿಸಿ ಬುಧವಾರ ಮಾತನಾಡಿದ ಅವರು, ನಮ್ಮ ದೇಶದ ಯುವಕರ ಡಿಎನ್ಎ (DNA) ಯಲ್ಲಿ ದೇಶಭಕ್ತಿಯಿದೆ. ಭಾರತದ ಗಡಿಗಳು, ದೇಶದ ಯುವಕರಿಂದ ಸುರಕ್ಷಿತವಾಗಿದೆ. ಹಾಗಾಗಿ ಯುವಜನತೆ ಅಗ್ನಿವೀರ್ ಮೂಲಕ ಮನಸ್ಸಿಲ್ಲದೆ ದೇಶ ಕಾಯುವ ಯೋಧರಾಗಬೇಕಿಲ್ಲ .ಆದ್ದರಿಂದ ಇಂಡಿಯಾ ಕೂಟ ಅಧಿಕಾರಕ್ಕೆ ಬಂದರೆ ಈ ಅಗ್ನಿವೀರ್ ಯೋಜನೆಯನ್ನು ತೆಗೆದುಹಾಕಿ ಹಳೆ ನೇಮಕಾತಿ ವಿಧಾನವನ್ನೇ ಮರುಜಾರಿಗೆ ಮಾಡುತ್ತೇವೆ ಎಂದು ಭರವಸೆ ನೀಡಿದ್ದಾರೆ.
ಈ ವೇಳೆ ಪ್ರಧಾನಿ ಮೋದಿ ಪ್ರಾರಂಭಿಸಿದ ಅಗ್ನಿವೀರ ಯೋಜನೆ ಬಗ್ಗೆ ಪ್ರಸ್ತಾಪಿಸಿದ ಅವರು, ಹುತಾತ್ಮರಲ್ಲಿ ಎರಡು ವಿಧ. ಒಂದು ಸಾಮಾನ್ಯ ಯೋಧ ಮತ್ತು ಅಧಿಕಾರಿ. ಅಧಿಕಾರಿಗಳಿಗೆ ಪಿಂಚಣಿ, ಹಾಗೂ ಹುತಾತ್ಮ ಪಟ್ಟ ಸಿಗುವುದು ಮಾತ್ರವಲ್ಲ ಉಳಿದ ಎಲ್ಲಾ ಸೌಲಭ್ಯಗಳು ಸಿಗುತ್ತವೆ. ಆದರೆ ಅಗ್ನಿವೀರ್ನಲ್ಲಿ ಆಯ್ಕೆಯಾದ ಯೋಧನಿಗೆ ಪಿಂಚಣಿ (Pension) ಇಲ್ಲ, ಹುತಾತ್ಮ ಸ್ಥಾನವೂ ಇಲ್ಲ . ಕೊನೆಗೆ ಯೋಧರನ್ನು ಕೇವಲ 4 ವರ್ಷದ ಮಟ್ಟಿಗೆ ನೇಮಕ ಮಾಡಿಕೊಂಡು ನಂತರ ನಿರ್ದಿಷ್ಟ ಪ್ರಮಾಣದ ಹಣ ಕೊಟ್ಟು ನಿವೃತ್ತಿ ಮಾಡಲಾಗುತ್ತದೆ. ಅಲ್ಲಿಗೆ ಯುವ ಜನತೆಯ ಭವಿಷ್ಯ ಕೂಡಾ ರೂಪಿಸಿಕೊಳ್ಳಲು ಸಾಧ್ಯವಾಗುವುದಿಲ್ಲ ಎಂದು ಕಿಡಿಕಾರಿದ್ದಾರೆ.