ರಾಮ ಜನ್ಮಭೂಮಿ ನಿಧಿ ಸಮರ್ಪಣಾ ಅಭಿಯಾನ ಬೆಂಬಲಿಸಿ ಅಚ್ಚರಿ ಮೂಡಿಸಿದ ಪ್ರೊ. ಕೆ.ಎಸ್. ಭಗವಾನ್

ಮೈಸೂರು, ಜ. 18: ಪ್ರತಿ ಬಾರಿಯೂ ಶ್ರೀರಾಮನ ನಿಂದಿಸುತ್ತಿದ್ದ ಸಾಹಿತಿ ಪ್ರೊ.ಕೆ.ಎಸ್. ಭಗವಾನ್, ರಾಮಮಂದಿರ ನಿರ್ಮಾಣದ ನಿಧಿ ಸಂಗ್ರಹದ ಕರಪತ್ರ ಸ್ವೀಕರಿಸಿ ಅಚ್ಚರಿ ಮೂಡಿಸಿದ್ದಾರೆ.

ಅಯೋಧ್ಯೆಯಲ್ಲಿ ನಿರ್ಮಾಣವಾಗುತ್ತಿರುವ ಶ್ರೀರಾಮ ಮಂದಿರ ನಿರ್ಮಾಣಕ್ಕಾಗಿ ಮೈಸೂರಿನಲ್ಲಿ ಆರ್.ಎಸ್.ಎಸ್ ಕಾರ್ಯಕರ್ತರು ನಿಧಿ ಸಮರ್ಪಣಾ ಅಭಿಯಾನ ಆರಂಭಿಸಿದ್ದರು. ಹೀಗಾಗಿ ನಗರದಲ್ಲಿ ಪ್ರತಿ ಮನೆಗಳಿಗೆ ತೆರಳಿ ನಿಧಿ ಸಂಗ್ರಹಿಸುವಲ್ಲಿ ಆರ್.ಎಸ್.ಎಸ್ ಕಾರ್ಯಕರ್ತರು ಹಾಗೂ ರಾಮ ಜನ್ಮಭೂಮಿ ತೀರ್ಥ ಟ್ರಸ್ಟ್ ಸದಸ್ಯರು ತೊಡಗಿದ್ದಾರೆ.

ಈ ಹಿನ್ನೆಲೆಯಲ್ಲಿ ಮೈಸೂರಿನ ಕುವೆಂಪುನಗರದಲ್ಲಿರುವ ಪ್ರೊ.ಕೆ.ಎಸ್. ಭಗವಾನ್ ನಿವಾಸಕ್ಕೆ ಭೇಟಿ ನೀಡಿದ ಆರ್.ಎಸ್.ಎಸ್ ಕರ ಸಂಚಾಲಕರು, ಭಗವಾನ್ ಅವರಿಗೆ ರಾಮಮಂದಿರ ನಿರ್ಮಾಣ ನಿಧಿ ಸಂಗ್ರಹ ಅಭಿಯಾನದ ಕರಪತ್ರ ನೀಡಿದ್ದಾರೆ. ಈ ವೇಳೆ‌ ಯಾವುದೇ ವಿರೋಧವಿಲ್ಲದೆ ಕರಪತ್ರ ‌ಸ್ವೀಕರಿಸಿದ ಭಗವಾನ್, ರಾಮಮಂದಿರ ನಿರ್ಮಾಣಕ್ಕೆ ಬೆಂಬಲವನ್ನು ಸಹ ವ್ಯಕ್ತಪಡಿಸಿದ್ದಾರೆ ಎನ್ನಲಾಗಿದೆ.

ಭಗವಾನ್ ಅವರ ಈ ನಡೆ ಹಲವರಲ್ಲಿ ಕುತೂಹಲ ಮೂಡಿಸಿದೆ. ಇನ್ನೂ ಇತ್ತೀಚಿಗೆ ನಗರದ ಬಿಜೆಪಿ ಕಚೇರಿಗೆ ಭೇಟಿ ನೀಡಿ ಸಹ ಭಗವಾನ್ ಅಚ್ಚರಿಗೆ ಕಾರಣರಾಗಿದ್ದರು.

Exit mobile version