Maharashtra : ಚುನಾವಣಾ ಬಾಂಡ್ಗಳ (Election Bond) ಮಾಹಿತಿ ನೀಡಲು ಕಾಲಾವಕಾಶ ಕೇಳಿದ್ದ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾಗೆ ಸುಪ್ರೀಂಕೋರ್ಟ್ ಛೀಮಾರಿ ಹಾಕಿದ ಬಳಿಕ ಎಲ್ಲ ಮಾಹಿತಿಯನ್ನು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (SBI) ಚುನಾವಣಾ ಆಯೋಗಕ್ಕೆ ಸಲ್ಲಿಸಿದೆ. ನ್ಯಾಯಾಲಯದ ಆದೇಶದಂತೆ ಎಸ್ ಬಿಐ ನೀಡಿರುವ ಮಾಹಿತಿಯನ್ನು ಮಾರ್ಚ್ (March) 15ರಂದು ಚುನಾವಣಾ ಆಯೋಗ ತನ್ನ ವೆಬ್ಸೈಟ್ನಲ್ಲಿ ಪ್ರಕಟಿಸಬೇಕಿದೆ.
ಈ ಘಟನೆಯಿಂದಾಗಿ ಎಸ್ಬಿಐ ದೇಶದಲ್ಲಿ ಭಾರೀ ಟೀಕೆಗೆ ಗುರಿಯಾಗಿದ್ದು ಇದೀಗ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ (ಎಸ್ಬಿಐ) ಅಧ್ಯಕ್ಷ ದಿನೇಶ್ ಖೇರಾ (Dinesh Khera) ಅವರ ರಾಜೀನಾಮೆಗೆ ಮಹಾರಾಷ್ಟ್ರ ಸ್ಟೇಟ್ ಬ್ಯಾಂಕ್ ನೌಕರರ ಒಕ್ಕೂಟ ಮನವಿ ಮಾಡಿದೆ.ಇನ್ನು ನಿವೃತ್ತಿಯ ಮುಂಚೆಯೇ ಅಧಿಕಾರದ ವಿಸ್ತರಣೆಯನ್ನು ಪಡೆದಿದ್ದ ದಿನೇಶ್ ಖೇರಾ, ಈಗಾಗಲೇ ಬ್ಯಾಂಕಿಗೆ ಕೆಟ್ಟ ಹೆಸರನ್ನು ತಂದಿದ್ದಾರೆ ಎಂದು ಸ್ಟೇಟ್ ಬ್ಯಾಂಕ್ ನೌಕರರ ಒಕ್ಕೂಟ ಆಗ್ರಹಿಸಿದೆ.
ದಿನೇಶ್ ಖೇರಾ ನಡೆಯಿಂದ ಬ್ಯಾಂಕಿನ ಇಮೇಜ್ಗೆ ಹಾನಿಯಾಗಿದೆ ಮತ್ತು ಪಾರದರ್ಶಕತೆ ಮತ್ತು ಕಾರ್ಪೊರೇಟ್ (Corporate) ಆಡಳಿತದ ಮೇಲಿನ ಬ್ಯಾಂಕಿನ ವಿಶ್ವಾಸಾರ್ಹತೆಯ ಮೇಲೆ ಪ್ರಭಾವ ಬೀರಿದೆ. ಆದ್ದರಿಂದ ಎಸ್ಬಿಐ ಅಧ್ಯಕ್ಷ ಸ್ಥಾನದಿಂದ ದಿನೇಶ್ ಖೇರಾ ಕೆಳಗಿಳಿಯಬೇಕು ಎಂದು ಮಹಾರಾಷ್ಟ್ರ ಸ್ಟೇಟ್ ಬ್ಯಾಂಕ್ ನೌಕರರು ಬೇಡಿಕೆ ಇಟ್ಟಿದ್ದಾರೆ.
ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ (State Bank of India) ಪ್ರಸ್ತುತ ಅಧ್ಯಕ್ಷರಾಗಿರುವ ದಿನೇಶ್ ಖೇರಾ ಅಕ್ಟೋಬರ್ 7, 2020 ರಂದು ಅಧ್ಯಕ್ಷ ಸ್ಥಾನವನ್ನು ಅಲಂಕರಿಸಿದರು ಮತ್ತು ಅವರ ಅವಧಿಯು ಆಗಸ್ಟ್ 2024ರಲ್ಲಿ ಕೊನೆಗೊಳ್ಳಲಿದೆ. ಖೇರಾ ಅವರು ಬ್ಯಾಂಕಿಂಗ್ (Banking) ಉದ್ಯಮದಲ್ಲಿ ವ್ಯಾಪಕ ಅನುಭವ ಹೊಂದಿರುವ ಬ್ಯಾಂಕರ್ ಆಗಿದ್ದಾರೆ. ಅವರು 1984ರಲ್ಲಿ ಎಸ್ಬಿಐಗೆ ಪ್ರೊಬೇಷನರಿ ಅಧಿಕಾರಿಯಾಗಿ ಸೇರಿದರು ಮತ್ತು ಬ್ಯಾಂಕಿನೊಳಗೆ ವಿವಿಧ ಪ್ರಮುಖ ಹುದ್ದೆಗಳನ್ನು ಅಲಂಕರಿಸಿದ್ದಾರೆ. ಆದರೂ ಸಹ ಚುನಾವಣಾ ಬಾಂಡ್ಗಳ ವಿಷಯದಲ್ಲಿ ಮುಜುಗರ ಉಂಟು ಮಾಡಿದ್ದಾರೆ ಎಂಬುದು ನೌಕರರ ಒಕ್ಕೂಟದ ಅಭಿಪ್ರಾಯವಾಗಿದೆ.