‘ಸಕೂಚಿ’ ಟ್ರೈಲರ್ , ಹಾರರ್ ಥ್ರಿಲ್ಲರ್!

ಅಶೋಕ್ ಎಸ್ ನಿರ್ದೇಶಿಸಿ ಬಿ.ಸಿ.ಅಶ್ವಿನ್ ನಿರ್ಮಿಸಿರುವ ನೂತನ ಚಿತ್ರ ‘ಸಕೂಚಿ’. ಹೆಸರಲ್ಲೇ ವಿಭಿನ್ನವಾಗಿರುವ ಚಿತ್ರದ ಟ್ರೇಲರ್ ಬಿಡುಗಡೆ ಸಮಾರಂಭ ಇತ್ತೀಚೆಗೆ ನೆರವೇರಿತು.

ದಿಯಾ ಚಿತ್ರದ ನಾಯಕಿ ಖುಷಿ ರವಿ,‌ ನಿರ್ದೇಶಕ ಮಹೇಶ್ ಬಾಬು, ಬಿಜೆಪಿ ಮುಖಂಡರಾದ ಲಕ್ಷ್ಮೀಕಾಂತ್ ಮೊದಲಾದವರು ಸಮಾರಂಭಕ್ಕೆ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದರು. ನಿರ್ದೇಶಕ ಅಶೋಕ್ ಮಾತನಾಡಿ,
“ನಾನು ಕೆಲವು ವರ್ಷಗಳ ಹಿಂದೆ ಶೃಂಗೇರಿಯಿಂದ ಕೊಪ್ಪಕ್ಕೆ ಪ್ರಯಾಣ ಬೆಳೆಸಿದೆ. ಅಲ್ಲೇ ಒಂದು ರೆಸಾರ್ಟ್ ನಲ್ಲಿ ತಂಗಿದೆ. ರಾತ್ರಿ ಸಿಡಿಲಿನ ಅಬ್ಬರದ ನಡುವೆ ತುಂತುರು ಮಳೆಯಾಗುತ್ತಿತ್ತು.
ಭಾರೀ ಸಿಡಿಲಿನ‌ ಶಬ್ದಕ್ಕೆ ನೂರಡಿ ಎತ್ತರದ ಮರದ‌ ಕೊಂಬೆ ಮುರಿದು ಬಿತ್ತು.‌ ಭಯಂಕರ ಶಬ್ದ. ಆನಂತರ ನಾಲ್ಕು ವರ್ಷಗಳ ಹಿಂದೆ ಬೆಂಗಳೂರಿನ ವಿಜಯನಗರದಲ್ಲಿ ಮತ್ತೆ ಅದೇ ಶಬ್ದ ಕೇಳಿದೆ. ಈಗಲೂ ಆ ಶಬ್ದ ಕಿವಿಯಲ್ಲೇ ಇದ್ದ ಹಾಗೆ ಇದೆ. ನಂತರ ಅದರ ಬಗ್ಗೆ ತಿಳಿದುಕೊಳ್ಳಲು ಶುರು ಮಾಡಿದೆ. ಹಾಗೆ ಪ್ರೇತಾತ್ಮಗಳ ಬಗ್ಗೆ ಅಧ್ಯಯನ ಮಾಡಿ ತಯಾರು ಮಾಡಿರುವುದೇ ಈ ‘ಸಕೂಚಿ’ ಸಿನಿಮಾ” ಎಂದರು. ಕಥೆ ಮಾಡಿ ನಿರ್ಮಾಪಕರಿಗೆ ಹೇಳಿದೆ. ಇಷ್ಟಪಟ್ಟರು. ಈಗ ಸಿನಿಮಾ ಸಿದ್ದವಾಗಿದೆ. ಚಿತ್ರತಂಡದ ಎಲ್ಲರಿಗೂ ಧನ್ಯವಾದ ಎಂದರು ನಿರ್ದೇಶಕ ಅಶೋಕ್ ಎಸ್.

ನಿರ್ದೇಶಕರು ಕಥೆ ಹೇಳಿದಾಗ, ‘ಬರೀ ಹಾರರ್ ಕಥೆಯೇ’ ಎಂದು ಕೇಳಿದೆ. ಇಲ್ಲ, ಸಕೂಚಿ ಕಮರ್ಷಿಯಲ್ ಸಿನಿಮಾ. ಇದರಲ್ಲಿ ಹಾರರ್, ಪ್ರೇಮಕಥೆ ಎಲ್ಲವೂ ಇದೆ ಎಂದು ಕಥೆಯನ್ನು ಮನ ತಟ್ಟುವಂತೆ ಹೇಳಿದರು. ಚಿತ್ರೀಕರಣದ ಸಮಯದಲ್ಲಾದ ವಿಶೇಷ ಅನುಭವಗಳನ್ನು ಮರೆಯಲು ಸಾಧ್ಯವಿಲ್ಲ. ಕೊಟ್ಟ ದುಡ್ಡಿಗೆ ಮೋಸ ಆಗದ ಸಿನಿಮಾ ನಮ್ಮದು. ಹೊಸತಂಡದ ಹೊಸ ಪ್ರಯತ್ನಕ್ಕೆ ನಿಮ್ಮ ಬೆಂಬಲವಿರಲಿ ಎಂದರು
ನಾಯಕ‌ ನಟ ತ್ರಿವಿಕ್ರಮ.

ನಾಯಕಿ ಡಯನಾ ಕೂಡ ತಮ್ಮ ಪಾತ್ರದ ಬಗ್ಗೆ ಮೆಚ್ಚುಗೆ ಮಾತನಾಡಿದರು. ಸಂಗೀತ ನಿರ್ದೇಶಕ ಗಣೇಶ್ ಗೋವಿಂದಸ್ವಾಮಿ ಸಂಗೀತದ ಬಗ್ಗೆ ಮಾಹಿತಿ ನೀಡಿದರು. ನಿರ್ಮಾಪಕ ಬಿ.ಸಿ.ಅಶ್ವಿನ್, ಕ್ರಿಯೇಟಿವ್ ಹೆಡ್ ಹಾಗೂ ಕಾರ್ಯಕಾರಿ ನಿರ್ಮಾಪಕ ಚಂದ್ರಶೇಖರ್ ಕೆ.ಆರ್ ಮುಂತಾದವರು ಸಿನಿಮಾ ಬಗ್ಗೆ ತಮ್ಮ ಅಭಿಪ್ರಾಯ ಹಂಚಿಕೊಂಡರು. ಕಥೆ, ಚಿತ್ರಕಥೆ ಹಾಗೂ ಸಂಭಾಷಣೆ ಬರೆದು ನಿರ್ದೇಶಿಸಿರುವ ಅಶೋಕ್ ಅವರ ಈ ಚಿತ್ರಕ್ಕೆ ಮಹವೀರ್ ಪ್ರಸಾದ್ ಹಾಗೂ ಮಧುಕರ್ ಜೆ ಅವರು ಸಹ ನಿರ್ಮಾಪಕರು.


ಹೃದಯಶಿವ ಚಿತ್ರದ ಹಾಡುಗಳನ್ನು ಬರೆದಿದ್ದಾರೆ. ಆನಂದ್ ಸುಂದರೇಶ್ ಛಾಯಾಗ್ರಹಣ, ಮಹೇಶ್ ತೊಗಟ ಸಂಕಲನ ಹಾಗೂ ಆನಂದ್ ಯಡಿಯೂರು ನೃತ್ಯ ನಿರ್ದೇಶನ ಹಾಗೂ ಕುಂಫು ಚಂದ್ರು ಸಾಹಸ ನಿರ್ದೇಶನ ಈ ಚಿತ್ರಕ್ಕಿದೆ. ತ್ರಿವಿಕ್ರಮ, ಡಯಾನ, ಡಾಲಿ ರಾಜೇಶ್, ಸುಕುಮಾರ್, ಸುಮನರಾವ್, ಸಂಜಯ್ ರಾಜ್, ಅಶೋಕ್ ಮುಂತಾದವರು ಈ ಚಿತ್ರದಲ್ಲಿ ಅಭಿನಯಿಸಿದ್ದಾರೆ.

Exit mobile version