ಎನ್‌ಸಿಬಿ ಅಧಿಕಾರಿ ಸಮೀರ್ ವಾಂಖೆಡೆ ವಿರುದ್ದ ನವಾಬ್ ಮಲ್ಲಿಕ್ ಆರೋಪ

ಮುಂಬೈ ಅ 28 : ಹೈಪ್ರೋಫೈಲ್ ಡ್ರಗ್ಸ್ ಪ್ರಕರಣದಲ್ಲಿ ಕೇಂದ್ರ ಜಾಗೃತ ದಳದ ಐವರು ಅಧಿಕಾರಿಗಳ ತಂಡ ಎನ್‍ಸಿಬಿ ವಲಯ ನಿರ್ದೇಶಕ ಸಮೀರ್ ವಾಂಖೆಡೆಯವರನ್ನು ವಿಚಾರಣೆಗೆ ಒಳಪಡಿಸಿದೆ. ಬಾಲಿವುಡ್ ನಟ ಶಾರುಕ್‍ಖಾನ್ ಪುತ್ರ ಆರ್ಯನ್ ಖಾನ್ ಬಂಧನದ ಬಳಿಕ ಮಾದಕ ವಸ್ತುಗಳ ಪ್ರಕರಣ ವಿಚಿತ್ರ ತಿರುವುಗಳನ್ನು ಪಡೆದುಕೊಂಡಿದೆ.

ಮಹಾರಾಷ್ಟ್ರದ ಅಲ್ಪಸಂಖ್ಯಾತರ ಅಭಿವೃದ್ಧಿ ಸಚಿವ ನವಾಬ್ ಮಲ್ಲಿಕ್ ನಿರಂತರವಾಗಿ ಆರೋಪಗಳ ಸುರಿಮಳೆ ಮಾಡುತ್ತಿದ್ದಾರೆ. ಸಮೀರ್ ವಾಂಖೆಡೆ ವಿರುದ್ಧ ಸುಳ್ಳು ಜಾತಿ ಪ್ರಮಾಣ ಪತ್ರ ಬಳಕೆ ಮಾಡಿ ಸರ್ಕಾರಿ ಉದ್ಯೋಗ ಗಿಟ್ಟಿಸಿದ್ದಾರೆ ಎಂದು ಆರೋಪಿಸಿದ್ದಾರೆ. ಪ್ರಮುಖವಾಗಿ ಆರ್ಯನ್ ಖಾನ್ ವಿರುದ್ಧ ಕ್ರಮ ಜರುಗಿಸದಿರಲು ಸಮೀರ್ 25 ಕೋಟಿ ರೂ.ಗಳ ಲಂಚಕ್ಕೆ ಬೇಡಿಕೆ ಇಟ್ಟಿದ್ದರು ಎಂಬ ಆರೋಪ ಕೇಳಿ ಬಂದಿದೆ.

ಈ ಆರೋಪ ಕುರಿತಂತೆ ಎನ್‍ಸಿಬಿಯ ಜಾಗೃತ ದಳದ ಐವರು ಅಧಿಕಾರಿಗಳ ತಂಡ ದೆಹಲಿಯಿಂದ ಮುಂಬೈಗೆ ಆಗಮಿಸಿದ್ದು, ಸಮೀರ್ ಅವರ ಹೇಳಿಕೆಯನ್ನು ದಾಖಲಿಸಿದೆ. ಸಮೀರ್ ಅವರ ವಿರುದ್ಧ ಕೇಳಿ ಬಂದಿರುವ ಎಲ್ಲಾ ಆರೋಪಗಳ ಕುರಿತು ಜಾಗೃತ ದಳ ತನಿಖೆ ನಡೆಸಬೇಕು ಎಂದು ಸಚಿವ ನವಾಬ್ ಮಲ್ಲಿಕ್ ಒತ್ತಾಯಿಸಿದ್ದಾರೆ. ನಾನು ಸತ್ಯವನ್ನು ಹೊರ ತೆಗೆಯಲು ಹೋರಾಟ ನಡೆಸುತ್ತಿದ್ದೇನೆ ಎಂದು ಅವರ ತಮ್ಮ ಹೋರಾಟವನ್ನು ಸಮರ್ಥಿಸಿಕೊಂಡಿದ್ದಾರೆ.

ಅಕ್ಟೋಬರ್ 2ರಂದು ಮುಂಬೈನಿಂದ ಗೋವಾಕ್ಕೆ ಹೊರಟ್ಟಿದ್ದ ಐಶರಾಮಿ ಹಡಗಿನಲ್ಲಿ ಗಡ್ಡದಾರಿಯೊಬ್ಬ ತನ್ನ ಸ್ನೇಹಿತೆಯೊಂದಿಗೆ ನೃತ್ಯ ಮಾಡುತ್ತಿರುವ ವಿಡಿಯೋ ಇದೆ. ಪ್ರಕರಣದಲ್ಲಿ ಆತನನ್ನು ಏಕೆ ಬಂಧಿಸಿಲ್ಲ. ಆತ ಡ್ರಗ್ಸ್ ಮಾಫೀಯಾದ ಕಿಂಗ್ ಪಿನ್ ಎಂದು ಹೇಳಲಾಗುತ್ತಿದೆ. ಎನ್‍ಸಿಬಿ ಅಧಿಕಾರಿ ಸಮೀರ್ ವಾಂಖೆಡೆ ಅವರು ಗೋವಾ ಮೂಲದ ಡ್ರಗ್ಸ್ ಮಾಫೀಯಾ ಬಗ್ಗೆ ಸದಾ ಕಾಲ ಕಣ್ಣು ಮುಚ್ಚಿಕೊಂಡು ಕೆಲಸ ಮಾಡುತ್ತಾರೆ ಎಂದು ನವಾಬ್ ಮಲ್ಲಿಕ್ ಆರೋಪಿಸಿದ್ದಾರೆ.

ಸಮೀರ್ ಮೇಲೆ ಹೊಸದೊಂದು ಆರೋಪ ಕೇಳಿ ಬಂದಿದ್ದು, ಮತ್ತೊಬ್ಬ ಸಾಕ್ಷಿದಾರ ಶೇಖರ್ ಕಾಂಬ್ಲೆ ಅವರು ತಮ್ಮಿಂದ ಸುಮಾರು 10-12 ಖಾಲಿ ಪತ್ರಗಳಿಗೆ ಎನ್‍ಸಿಬಿ ಅಧಿಕಾರಿಗಳು ಸಹಿ ಹಾಕಿಸಿಕೊಂಡಿದ್ದಾರೆ ಎಂದು ಹೇಳಿದ್ದಾರೆ. ಖರಘರ್‍ನಲ್ಲಿ ನೈಜಿರಿಯನ್ ಪ್ರಜೆಯೊಬ್ಬರನ್ನು ಬಂಧಿಸಿದ ಪ್ರಕರಣದಲ್ಲಿ ಪಂಚನಾಮೆಯ ಖಾಲಿ ಹಾಳೆಗಳಿಗೆ ತಮ್ಮಿಂದ ಸಹಿ ಹಾಕಿಸಿಕೊಳ್ಳಲಾಗಿದೆ. ಯಾರ ಮುಂದೆಯೂ ಈ ವಿಷಯ ಬಾಯಿ ಬಿಡಬಾರದು ಎಂದು ವಾಟ್ಸಪ್‌ ಕಾಲ್‍ನಲ್ಲಿ ಬೆದರಿಕೆ ಹಾಕಿದ್ದಾರೆ ಎಂದು ಆರೋಪಿಸಿದ್ದಾರೆ.

Exit mobile version